ಪೂರ್ವ ಮುಂಗಾರು ಮಳೆ: ಗಡಿಜಿಲ್ಲೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ, ಎತ್ತುಗಳಿ ಭಾರೀ ಬೇಡಿಕೆ
ಚಾಮರಾಜನಗರ, ಮೇ, 16: ಕಳೆದ ಒಂದು ವಾರದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುತ್ತಲೇ ಇದ್ದಾನೆ. ಹಾಗೆಯೇ ಮಳೆ ತಂಪೆರೆದ ಹಿನ್ನೆಲೆ ಗಿಡಿಜಿಲ್ಲೆ ಚಾಮರಾಜನಗರ ಹಲವೆಡೆ ಬಿತ್ತನೆ ಕಾರ್ಯ ಶುರುವಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದಲೂ ಉತ್ತಮ ಮಳೆ ಸುರಿದ ಹಿನ್ನೆಲೆ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಹಂಗಳ, ಕಸಬಾ, ತೆರಕಣಾಂಬಿ ಹೋಬಳಿ, ಚಾಮರಾಜನಗರ ತಾಲೂಕು ಹಾಗೂ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿರುವ ಕಾರಣ ಭೂಮಿ ಹದ ಮಾಡಿಕೊಂಡು ರೈತರು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ, ಜೋಳ, ಹಲಸಂದೆ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಶೇಕಡಾ 20ರಷ್ಟು ಬಿತ್ತನೆ ಕಾರ್ಯ ಮುಗಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿತ್ತನೆ ಬೀಜ ವಿತರಣೆ: ಮಳೆ ಕೊರತೆ ಉಂಟಾಗಿದ್ದ ಕಾರಣ ಕೃಷಿ ಇಲಾಖೆ ಅಧಿಕಾರಿ ಹೆಚ್ಚಿನ ನಿಗಾ ವಹಿಸಿ ಮಳೆಗೂ ಮುನ್ನವೇ ಬಿತ್ತನೆ ಬೀಜಗಳನ್ನು ಶೇಖರಿಸಿಟ್ಟಿದ್ದರು. ಇದೀಗ ಕಳೆದೊಂದು ವಾರದಿಂದ ಉತ್ತಮ ಮಳೆಯಾದ ಪರಿಣಾಮ ಕೃಷಿ ಇಲಾಖೆ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡುತ್ತಿದೆ. ಇದರಿಂದ ಈ ಬಾರಿ ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಎತ್ತುಗಳಿಗೆ ಹೆಚ್ಚಿದ ಬೇಡಿಕೆ: ಗ್ರಾಮೀಣ ಭಾಗದ ಬಹುತೇಕ ಮಂದಿ ರೈತರ ಬಳಿ ಎತ್ತುಗಳಿಲ್ಲದ ಕಾರಣ ಜಾನುವಾರುಗಳನ್ನು ಇಟ್ಟಿರುವ ರೈತರಿಗೆ ಬೇಡಿಕೆ ಹೆಚ್ಚಿದೆ. ನೇಗಿಲಿನ ಮೂಲಕ ಬಿತ್ತನೆ ಮಾಡಿಸಬೇಕು ಎಂಬ ರೈತ ಒಂದು ದಿನಕ್ಕೆ 2,000 ರೂಪಾಯಿ ನೀಡಿ ಸೂರ್ಯಕಾಂತಿ, ಜೋಳ, ಹಲಸಂದೆ ಬಿತ್ತನೆ ಮಾಡಿಸುವಂತಾಗಿದೆ.
ಬಿತ್ತನೆ ವೇಳೆಯಲ್ಲಿ ಮಾತ್ರ ನಮಗೆ ಬೇಡಿಕೆ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ಮಾಮೂಲಿ ವೇಳೆ ನಮ್ಮನ್ನು ಕರೆಯುವವರೇ ಇರುವುದಿಲ್ಲ ಎಂದು ಎತ್ತುಗಳನ್ನು ಇಟ್ಟಿರುವ ಮಾಲೀಕ ಪ್ರಸಾದ್ ಎಂಬುವವರು ತಿಳಿಸಿದರು.
ಟ್ರ್ಯಾಕ್ಟರ್ ಮೊರೆ ಹೋದ ರೈತರು: ಬಹುತೇಕ ಮಂದಿ ರೈತರು ಬರ ಹಾಗೂ ಸಾಕಣಿಗೆ ತೊಂದರೆಯಾದ ಕಾರಣ ದನ-ಕರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಬೇರೆ ಯಾವುದೇ ಪಾರ್ಯಾಯ ದಾರಿಯಿಲ್ಲದೆ, ಜಮೀನಿನಲ್ಲಿ ಉಳುಮೆ ಹಾಗೂ ಬಿತ್ತನೆಗೆ ಜಾನುವಾರುಗಳು ಸಿಗದ ಪರಿಣಾಮ ಅಧಿಕ ಮಂದಿ ರೈತರು ಟ್ರ್ಯಾಕ್ಟರ್ ಮೂಲಕವೇ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.












Click it and Unblock the Notifications