ಮುಂಗಾರು ಪೂರ್ವ ಮಳೆ; ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
ಕಲಬುರಗಿ, ಮೇ 24; ಕಲಬುರಗಿ ಜಿಲ್ಲೆಯಲ್ಲಿ ಹಗುರವಾದ ಮಳೆಯಾಗಿದ್ದರೂ ಸಹ ಬಿಸಿಲಿನ ತಾಪಮಾನ ಹೆಚ್ಚಿದೆ. ಮಣ್ಣಿನಲ್ಲಿ ಉತ್ತಮವಾದ ತೇವಾಂಶವನ್ನು ಆಧರಿಸಿ ಹಸಿ ಮಳೆಯಾದ ನಂತರ ಬಿತ್ತನೆ ಕಾರ್ಯ ಕೈಗೊಳ್ಳಲು ರೈತರಿಗೆ ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರು ಸಲಹೆಗಳನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಬಿಸಿಲಿನ ತೇವಾಂಶ ಹೆಚ್ಚಿರುವ ಕಾರಣ ಬಿತ್ತನೆಗೆ ಮಣ್ಣಿನಲ್ಲಿ ತೇವಾಂಶದ ಕೊರತೆಯಿದೆ. ಈಗ ಬಿತ್ತನೆ ಮಾಡಿದಲ್ಲಿ ತೇವಾಂಶ ಕೊರತೆಯಿಂದ ಬೀಜ ಮೊಳಕೆ ಒಡೆಯುವುದಿಲ್ಲ ಮತ್ತು ಬೆಳೆಗಳ ಬೆಳೆವಣಿಗೆ ಮೇಲೆಯೂ ಕುಂಠಿತಗೊಳ್ಳುವ ಸಂಭವವಿರುತ್ತದೆ.
ಇದಲ್ಲದೆ ಬಿತ್ತನೆ ನಂತರ ಸತತವಾಗಿ ಮಳೆ ಬಂದಲ್ಲಿ ಬಿತ್ತನೆಯಾದ ಬೀಜ ಮಣ್ಣಿನಲ್ಲಿ ಕೊಳೆಯುವುದಲ್ಲದೆ ಬೆಳೆಗಳ ಸಸ್ಯಕ ಹಂತ ಹೆಚ್ಚಾಗಿ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಪ್ರಸಕ್ತ 2022-23ನೇ ಸಾಲಿನ ಮುಂಗಾರು ಹಂಗಾಮು ಜೂನ್ ಮೊದಲನೇ ವಾರದಿಂದ ಪ್ರಾರಂಭವಾಗುವುದು. ಜಿಲ್ಲೆಯಲ್ಲಿ ಹೆಸರು, ಉದ್ದು, ಸೋಯಾಬಿನ್, ತೊಗರೆ ಹಾಗೂ ಎಳ್ಳು ಬಿತ್ತನೆ ಕಾರ್ಯವು ಸಾಮಾನ್ಯವಾಗಿ ಜೂನ್ ಮೊದಲನೇ ವಾರದಿಂದ ಪ್ರಾರಂಭವಾಗಿ ಜುಲೈ ಅಂತ್ಯದ ವೆರೆಗೆ ಕೈಗೊಳ್ಳಲಾಗುತ್ತದೆ.
ಇನ್ನೂ ಜಿಲ್ಲೆಯ ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಪಡೆದುಕೊಳ್ಳುವುದು ಮತ್ತು ಬೀಜ ಪಡೆದ ಸ್ವೀಕೃತಿ ಬಿಲ್ಲನ್ನು ತಮ್ಮ ಹತ್ತಿರ ಇಟ್ಟುಕೊಳ್ಳಬೇಕೆಂದು ಎಂದು ಮನವಿ ಮಾಡಿದ್ದಾರೆ.
ರೈತರಿಗೆ ತರಬೇತಿಗೆ ಅರ್ಜಿ ಆಹ್ವಾನ; ಕಲಬುರಗಿ ಸೇಡಂ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ಮಾತ್ರ ಮೇ 26 ಹಾಗೂ 27 ರಂದು ಎರಡು ದಿನ ಕಾಲ ಕೋಳಿ ಸಾಕಾಣಿಕೆ ಹಾಗೂ ಮೇ 30 ಹಾಗೂ 31 ರಂದು ಎರಡು ದಿನಗಳ ಕಾಲ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಒಂದು ಬ್ಯಾಚ್ದಲ್ಲಿ 25 ಜನ ರೈತರಿಗೆ ತರಬೇತಿ ನೀಡಲಾಗುತ್ತದೆ. ಮೊದಲು ಬಂದವರಿಗೆ ಅವಕಾಶ ನೀಡಲಾಗುತ್ತದೆ. ಆಯಾ ದಿನಗಳಂದು ಬೆಳಗ್ಗೆ 10 ಗಂಟೆಗೆ ಕಡ್ಡಾಯವಾಗಿ ರೈತರು ಹಾಜರಾಗಬೇಕು. ತರಬೇತಿಗೆ ಹಾಜರಾಗುವ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಮಾಸ್ಕ್ ಅವರೇ ತರಬೇಕು.
ತರಬೇತಿಯಲ್ಲಿ ಪಾಲ್ಗೊಳ್ಳುವ ರೈತರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಮಧ್ಯಾಹ್ನ ಊಟ ನೀಡಲಾಗುತ್ತದೆ. ಎರಡು ದಿನಗಳ ಕಾಲ ಕಡ್ಡಾಯವಾಗಿ ತರಬೇತಿಗೆ ಹಾಜರಾದವರಿಗೆ ಮಾತ್ರ ತರಬೇತಿ ಪ್ರಮಾಣಪತ್ರ ನೀಡಲಾಗುತ್ತದೆ.
ಈ ತರಬೇತಿಗೆ ಹಾಜರಾಗುವ ರೈತರು ಅರ್ಜಿಯ ಜೊತೆಗೆ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ ಲಗತ್ತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ಸೇಡಂ ರಸ್ತೆ ಕಲಬುರಗಿ ವಿಳಾಸಕ್ಕೆ ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-220576ಗೆ ಕರೆ ಮಾಡಬಹುದು.












Click it and Unblock the Notifications