ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆ; ರೈತರೇ ಸೌಲಭ್ಯಕ್ಕೆ ಅರ್ಜಿ ಹಾಕಿ
ಶಿವಮೊಗ್ಗ, ಸೆಪ್ಟೆಂಬರ್ 12; ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆಯಡಿ ಸೌಲಭ್ಯ ನೀಡಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ರೈತರು ಸಹ ಈಗ ಅರ್ಜಿ ಸಲ್ಲಿಕೆ ಮಾಡಬಹುದು.
2023-24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆಯಡಿ ಸೌಲಭ್ಯ ನೀಡಲು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ಬೆಳೆ (ಕಾಫಿ, ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ) ಬೆಳೆಯುತ್ತಿದ್ದು ಹನಿ ನೀರಾವರಿ ಅಳವಡಿಸಿದ ಎಲ್ಲಾ ವರ್ಗದ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು.
ಎಷ್ಟು ಸಹಾಯಧನ ಸಿಗಲಿದೆ?; ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುತ್ತದೆ. ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿದ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತ ಫಲಾನುಭವಿಗಳಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ. 90 ರಷ್ಟು ಮತ್ತು ಇತರೆ ವರ್ಗದ ರೈತ ಫಲಾನುಭವಿಗಳಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ.75 ರಷ್ಟು ಸಹಾಯಧನ ಲಭ್ಯವಿರುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ರೈತ ಫಲಾನುಭವಿಗಳಿಗೆ 2 ಹೆಕ್ಟೇರ್ ಮೇಲ್ಪಟ್ಟು 3 ಹೆಕ್ಟೇರ್ಗೆ ಶೇ.45 ರಷ್ಟು ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಹಿಂದೆ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯದಿದ್ದಲ್ಲಿ ಅಂತಹ ಅರ್ಜಿಗಳನ್ನು ಪ್ರಸಕ್ತ ವರ್ಷ ಸಹಾಯಧನಕ್ಕೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇಲಾಖೆಯಿಮದ ಅನುಮೋದಿತ ಕಂಪನಿಗಳ ಮಾಹಿತಿ ಹಾಗು ಹೆಚ್ಚಿನ ವಿವರಗಳನ್ನು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಿಗಳು ಅಥವಾ ಕಚೇರಿಯಿಂದ ಪಡೆಯಬಹುದು.
ಮುಂಗಾರು ಬೆಳೆ ಸಮೀಕ್ಷೆ ಮಾಡಿ; 2023-24ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಯಾಗಿದ್ದು ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಸ್ವತಃ ಅಪ್ಲೋಡ್ ಮಾಡಲು ಅವಕಾಶವಿದೆ. ಈಗಾಗಲೇ ಬೆಳೆ ವಿಮೆ ಮಾಡಿಸಿದ ರೈತರು ಕಡ್ಡಾಯವಾಗಿ ಸೆಪ್ಟೆಂಬರ್ 15ರೊಳಗೆ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಮನವಿ ಮಾಡಲಾಗಿದೆ.
ತಾವು ಬೆಳೆದ ಬೆಳೆಯ ಮಾಹಿತಿ ಪಹಣಿಯಲ್ಲಿ ಬರಲು ಬೆಳೆ ವಿಮೆ ಸೌಲಭ್ಯ ಪಡೆಯಲು, ಬೆಳೆ ಹಾನಿ ಪರಿಹಾರ ಪಡೆಯಲು, ಬೆಂಬಲ ಬೆಲೆ ಯೋಜನೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯವನ್ನು ಪಡೆಯಲು ಕೂಡಲೇ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳಬೇಕು ಎಂದು ರೈತರಿಗೆ ಕರೆ ನೀಡಲಾಗಿದೆ.
ರೈತರು ತಮ್ಮ ಮೊಬೈಲ್ನಲ್ಲಿ ಗೂಗಲ್ ಪ್ಲೇಸ್ಟೋರ್ಗೆ ಹೋಗಿ ಮುಂಗಾರು ರೈತರ ಬೆಳೆ ಸಮೀಕ್ಷೆ-2023 ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನೇರವಾಗಿ ಸಮೀಕ್ಷೆ ಮಾಡಬಹುದು ಹಾಗೂ ತಮ್ಮ ಗ್ರಾಮಕ್ಕೆ ಹಂಚಿಕೆಯಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದು.












Click it and Unblock the Notifications