ಮೈಸೂರು ಎಪಿಎಂಸಿ ಚುನಾವಣೆ: ಕಾಂಗ್ರೆಸ್ ಗೆ ಒಲಿದ ಅಧ್ಯಕ್ಷ ಸ್ಥಾನ
ಮೈಸೂರು, ಅಕ್ಟೋಬರ್. 28: ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಭುಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದರಿಂದ ಕಾಂಗ್ರೆಸ್ ಪಾರುಪತ್ಯ ಶುರುವಾದಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪ್ರಬಲರಾಗಿದ್ದೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಗೆ ಜಯ ದೊರಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ಹಾಲಿ ಅಧ್ಯಕ್ಷರ 20 ತಿಂಗಳ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ಚುನಾವಣೆ ಎಲ್ಲರ ಗಮನ ಸೆಳೆದಿತ್ತು.
ಪ್ರಸ್ತುತ 3 ನಾಮನಿರ್ದೇಶಿತ ಸ್ಥಾನ, ಜಾ.ದಳಕ್ಕೆ 8, ಕಾಂಗ್ರೆಸ್ ಗೆ 6 ಸ್ಥಾನಗಳಿತ್ತು. ಈ ಪೈಕಿ ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿದ್ದ ರಘು ಸದಸ್ಯತ್ವ ರದ್ದಾಗಿತ್ತು. ಹೀಗಾಗಿ ಕಾಂಗ್ರೆಸ್ ಬಲ 5ಕ್ಕೆ ಇಳಿದಿತ್ತು. ಜಾ.ದಳದ 8 ಸದಸ್ಯರ ಪೈಕಿ ಹರೀಶ್ ಗೌಡ ಸಂಬಂಧಿ ಮಹೇಶ್ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಓದಿ..

ತಲಾ 8 ಮತಗಳು
ಮೂವರು ನಾಮನಿರ್ದೇಶಿತ ಸದಸ್ಯರನ್ನು ಸರ್ಕಾರ ಆಯ್ಕೆ ಮಾಡುವಾಗ ಕಾಂಗ್ರೆಸ್ ಪಕ್ಷಕ್ಕೆ ಒಂದು ಹಾಗೂ ಜಾ.ದಳಕ್ಕೆ ಎರಡು ಸ್ಥಾನ ನೀಡಿತ್ತು. ಕಣದಲ್ಲಿದ್ದ ಜಾ.ದಳದ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಕಾಂಗ್ರೆಸ್ ನ ಪ್ರಭುಸ್ವಾಮಿ ಅವರಿಗೆ ತಲಾ 8 ಮತಗಳು ಬಂದವು.

ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ
ಹೀಗಾಗಿ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಕೊನೆಗೆ ತಹಸಿಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಲಾಟರಿ ಎತ್ತಿದಾಗ ಕಾಂಗ್ರೆಸ್ ನ ಪ್ರಭುಸ್ವಾಮಿ ವಿಜಯಿಯಾದರು.

ಸಿದ್ದರಾಮಯ್ಯ ಯಶಸ್ವಿ
ತವರಿನ ಸ್ಥಳೀಯ ಚುನಾವಣೆಗೆ ಹಿಂದೆ ಹೆಚ್ಚು ಗಮನಹರಿಸದ ಸಿದ್ದರಾಮಯ್ಯ ಎಪಿಎಂಸಿ ಚುನಾವಣೆಯಲ್ಲಿ ತಮ್ಮ ದಾಳ ಉರುಳಿಸುವ ಮೂಲಕ ಅಧಿಕಾರ ಹಿಡಿಯುವ ತಂತ್ರಗಾರಿಕೆ ರೂಪಿಸಿ ಯಶಸ್ವಿಯಾಗಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.

ಮುಖಭಂಗ ಅನುಭವಿಸಿದ ಜಿಟಿಡಿ
ಕಳೆದ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಕಾಂಗ್ರೆಸ್ ಮಣಿಸುವಲ್ಲಿ ಯಶಸ್ವಿಯಾಗಿದ್ದ ಜಿ.ಟಿ.ದೇವೇಗೌಡ ಈಗ ಸ್ವತಃ ಸಚಿವರೇ ಆಗಿದ್ದರೂ ಸ್ಥಳೀಯ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿದಂತಾಗಿದೆ.











Click it and Unblock the Notifications