ಪಿಎಂ ಕಿಸಾನ್ ಸಮ್ಮಾನ್; ಇ-ಕೆವೈಸಿಗೆ ಜೂ.30 ಕೊನೆ ದಿನ
ಬೆಂಗಳೂರು, ಜೂನ್ 20; ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಫಲಾನುಭವಿಗಳಾಗಲು ಎಲ್ಲಾ ರೈತರು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕೃಷಿ ಇಲಾಖೆಯು ರೈತರು ಜೂನ್ 30ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. ಯೋಜನೆಯಡಿ ರೈತರ ಆದಾಯ ವೃದ್ಧಿಸಲು ರೈತ ಕುಟುಂಬಗಳಿಗೆ ಪ್ರತಿ ವರ್ಷ 6 ಸಾವಿರ ರೂ. ಗಳನ್ನು ಒಟ್ಟು 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ಫಲಾನುಭವಿಗಳು https://pmkisan.gov.in ವೆಬ್ಸೈಟ್ಗೆ ಭೇಟಿ ನೀಡಿ ಇ-ಕೆವೈಸಿ ಆಧಾರ್ ಸಂಖ್ಯೆ ನಮೂದಿಸಿ, ಬಳಿಕ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಇ-ಕೆವೈಸಿ ಕಡ್ಡಾಯ; ಪಿಎಂ-ಕಿಸಾನ್ ಯೋಜನೆಯಡಿ ನೇರ ಆರ್ಥಿಕ ನೆರವು ವರ್ಗಾವಣೆ ಚಾಲ್ತಿಯಲ್ಲಿದೆ. ಈ ಯೋಜನೆಯ ನೆರವು ಅರ್ಹ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಇ-ಕೆವೈಸಿ ಮಾಡಿಕೊಂಡ ರೈತರಿಗೆ ಮಾತ್ರ ಮುಂದಿನ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ.
ರೈತರು ವೆಬ್ಸೈಟ್ನ ಫಾರ್ಮರ್ಸ್ ಕಾರ್ನರ್ಗೆ ಭೇಟಿ ಕೊಟ್ಟು ಇ-ಕೆವೈಸಿ ಅವಕಾಶದಡಿ ರೈತನ (ಈಗಾಗಲೇ ಪಿಎಂಕಿಸಾನ್ ಯೋಜನೆಯಡಿ ಫಲಾನುಭವಿಗಳಾಗಿರುವ ಪ್ರತಿಯೊಬ್ಬ) ಆಧಾರ್ ಸಂಖ್ಯೆಯನ್ನು ನಂತರ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಮೊಬೈಲ್ಗೆ ಒಟಿಪಿ ಯು ರವಾನೆಯಾಗುತ್ತದೆ.
ಹೀಗೆ ಸ್ವೀಕರಿಸಿದ ಒಟಿಪಿಯನ್ನು ಪೋರ್ಟಲ್ನಲ್ಲಿ ದಾಖಲಿಸಿ ಸಬ್ಮಿಟ್ ಫಾರ್ ಆಥ್ (SUBMIT FOR AUTH) ಎಂಬ ಬಟನ್ ಒತ್ತಬೇಕು. ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು e-KYC is 'successfully submitted' ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಒಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವೈಸಿ ಮಾಡಬಹುದಾಗಿದೆ. ಈಗಾಗಲೇ ಇ-ಕೆವೈಸಿ ಆಗಿದ್ದರೆ, e-KYC already done ಎಂದು ತೋರಿಸುತ್ತದೆ.
ಒಂದು ವೇಳೆ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ ಇ-ಕೆವೈಸಿಗಾಗಿ ಕಳುಹಿಸಿದ ಒಟಿಪಿಯು ಸ್ವೀಕೃತವಾಗುದಿಲ್ಲವೋ ಅವರು ಸಿಎಸ್ಸಿ (ಸಿಟಿಜನ್ ಸರ್ವಿಸ್ ಸೆಂಟರ್ಸ್) ನಾಗರಿಕ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ಮಾಡಬಹುದಾಗಿದೆ. ಅಲ್ಲಿ ಕೈಬೆರಳಿನ ಗುರುತು ಆಧಾರದ ಮೇಲೆ ಇ-ಕೆವೈಸಿ ಮಾಡಬಹುದಾಗಿದೆ.
ಯೋಜನೆಯ ಪ್ರತಿ ಫಲಾನುಭವಿ ರೈತರು, ಕೇಂದ್ರ ಸರ್ಕಾರವು ಮುಂದಿನ ಕಂತಿನಲ್ಲಿ ನೀಡುವ ಆರ್ಥಿಕ ನೆರವು ಪಡೆಯಲು ಜೂನ್ 30ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ರೈತರು ಹೆಚ್ಚಿನ ಮಾಹಿತಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications