ಲಕ್ಕುಂಡಿ ಗ್ರಾಮದಲ್ಲಿ 100 ಹೆಕ್ಟೇರ್ ಸೇವಂತಿಗೆ ಹೂ ಜಲಾವೃತ; ರೈತರಿಗೆ ಆತಂಕ
ಗದಗ, ಅಕ್ಟೋಬರ್, 20: ಗದಗ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಪರಿಣಾಮ ಲಕ್ಕುಂಡಿ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಹೆಕ್ಟೇರ್ನಲ್ಲಿ ಬೆಳೆದಿದ್ದ ಸೇವಂತಿಗೆ ಹೂವು ತೇವಾಂಶದಿಂದ ಕೊಳೆತು ಹೋಗಿವೆ. ಇದರಿಂದ ಹೂವುಗಳಿಗೆ ಬೇಡಿಕೆ ಇಲ್ಲದೇ ರೈತರು ಅಕ್ಷರಸಃ ತತ್ತರಿಸಿ ಹೋಗಿದ್ದಾರೆ.
ಲಕ್ಕುಂಡಿ, ಅಡವಿ ಸೋಮಾಪುರ, ಕಣವಿ, ಹೊಸೂರು ಗ್ರಾಮದ ವ್ಯಾಪ್ತಿಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ ಹೂವು ಬೆಳೆಯಲಾಗಿತ್ತು. ದೀಪಾವಳಿ ಹಬ್ಬದ ಸಮಯಕ್ಕೆ ಹೂವು ಕೈಸೇರಿದರೆ ಭರ್ಜರಿ ವ್ಯಾಪಾರ ಆಗುತ್ತದೆ ಎಂದು ರೈತರು ನಂಬಿದ್ದರು. ಆದರೆ ನಿರಂತರ ಮಳೆಯಿಂದಾಗಿ ಇದೀಗ ಸೇವಂತಿಗೆ ಗಿಡಗಳು ಕೊಳೆತು ಹೋಗಿವೆ. ಕೆಲವೆಡೆ ಹೂವು ಬಂದಿದ್ದರೂ ಕೂಡ, ತೇವಾಂಶ ಹೆಚ್ಚಿರುವುದರಿಂದ ಹೂಗಳು ಬಾಡುತ್ತಿವೆ. ಇದರಿಂದ ಬೇಡಿಕೆ ಎಲ್ಲಿ ಕಡಿಮೆ ಆಗುತ್ತದೆ ಎನ್ನುವ ಆತಂಕದಲ್ಲಿ ರೈತರಿದ್ದಾರೆ.
ಮಳೆಗೆ ಕಮರಿದ ಸೊಪ್ಪು, ತರಕಾರಿ; ಗ್ರಾಹಕರ ಜೇಬಿಗೆ ಕತ್ತರಿ: ಸಂಕಷ್ಟದಲ್ಲಿ ರೈತರು
ತೇವಾಂಶ ಹೆಚ್ಚಾಗಿ ಕೊಳೆತ ಹೂವುಗಳು
ಸುಗಂಧರಾಜ, ಕನಕಾಂಬರ, ಸೇವಂತಿಗೆ ಹೂವುಗಳಿಗೆ ಹಬ್ಬ ಹರಿದಿನಗಳಲ್ಲಿ ಭರ್ಜರಿ ಬೇಡಿಕೆ ಇರುತ್ತದೆ. ಕೆ.ಜಿ. ಸೇವಂತಿಗೆ 200ರಿಂದ 250 ರೂಪಾಯಿಗೆ ಮಾರಾಟ ಆಗುತ್ತಿತ್ತು. ಆದರೆ ಈ ಬಾರಿ ಮಳೆಯಿಂದಾಗಿ ಹೂವುಗಳು ತೇವಗೊಂಡಿರುವುದರಿಂದ ದರ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಕೆ.ಜಿ.ಗೆ 30-40 ರೂಪಾಯಿಗೆ ಇಳಿದರೂ ಅಚ್ಚರಿ ಇಲ್ಲ ಎಂದು ಲಕ್ಕುಂಡಿಯ ಹೂ ಬೆಳೆಗಾರ ಮರಿಯಪ್ಪ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮ ಹೂವಿನ ಬೆಳೆಗೆ ಹೆಸರುವಾಸಿ ಆಗಿದೆ. ಇಲ್ಲಿನ ಹೂವುಗಳು ಬೆಳಗಾವಿ, ಬಾಗಲಕೋಟೆ, ಧಾರವಾಡದ ಮಾರುಕಟ್ಟೆಗೂ ಕೂಡ ಪೂರೈಕೆ ಆಗುತ್ತದೆ. ಆದರೆ ಈ ಬಾರಿ ಹೂವುಗಳ ಅಭಾವ ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಂತೆ ಹೂವು ಪೂರೈಕೆ ಆಗುವುದು ಕಷ್ಟ ಎಂದು ಹೂ ಬೆಳೆಗಾರರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ವ್ಯಾಪಾರಸ್ಥರು ಹೂಗಳ ಧರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸೇವಂತಿಗೆ ಬೆಳೆಗಾರರು ಕಂಗಾಲು
ಇನ್ನು ಗದಗ ತಾಲೂಕು ವ್ಯಾಪ್ತಿಯ 416 ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ, ಗುಲಾಬಿ ಬೆಳೆಯಲಾಗಿದೆ. ಆದರೆ ನಿರಂತರ ಮಳೆಯಿಂದಾಗಿ ಬಹುತೇಕ ಹೆಕ್ಟೇರ್ ಪ್ರದೇಶದಲ್ಲಿ ಹೂವುಗಳು ನೆಲಕಚ್ಚಿದೆ. ಹೀಗಿದ್ದರೂ ಕೂಡ ಜನಪ್ರತಿನಿಧಿಗಳು ನಮ್ಮ ಅಹವಾಲು ಕೇಳಿಲ್ಲ ಎಂದು ಲಕ್ಕುಂಡಿ ಗ್ರಾಮದ ರೈತ ಬಸನಗೌಡ ಬಿರಾದಾರ್ ಅಳಲು ತೋಡಿಕೊಂಡಿದ್ದಾರೆ. ಹೆಕ್ಟೇರ್ಗೆ 1 ಲಕ್ಷ ರೂಪಾಯಿ ಖರ್ಚು ಮಾಡಿ ಹೂವು ಬೆಳೆಯಲಾಗಿದೆ. 4-5 ತಿಂಗಳು ಕಾಲ ಮಗುವಿನಂತೆ ಬೆಳೆಸಿದ್ದ ಗಿಡಗಳು ಜಲಾವೃತವಾಗಿವೆ. ಈಗಲಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಹೂ ಬೆಳೆಗಾರರ ಸಂಕಷ್ಟ ಆಲಿಸಿ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ನೀರು ಸ್ಥಗಿತ; ರಾಯಚೂರಿನ ರೈತರು ಕಂಗಾಲು