ಮಂಡ್ಯದಲ್ಲಿ ಕೆಮಿಕಲ್ ಫ್ರೀ ಬೆಲ್ಲ ತಯಾರಿ ಘಟಕ ಸ್ಥಾಪನೆ
ಮಂಡ್ಯದಲ್ಲಿ ಕೆಮಿಕಲ್ ಫ್ರೀ ಬೆಲ್ಲವನ್ನು ತಯಾರು ಮಾಡುವ ಘಟಕವನ್ನು ಉದ್ಘಾಟನೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ.
ಮಂಡ್ಯ, ಮಾರ್ಚ್ 05; ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆಯ ಯೋಜನೆಯಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಕಾರ್ಯಕ್ರಮದಡಿ ಮಂಡ್ಯದ ಬೆಲ್ಲಕ್ಕೆ ಮಾನ್ಯತೆ ನೀಡಲಾಗಿದೆ. ಇದರಿಂದ ಕಬ್ಬು ಬೆಳೆಗಾರರು ಸಹ ಸಂತಸಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ (ಆರ್ಗ್ಯಾನಿಕ್ ) ಕೆಮಿಕಲ್ ಫ್ರೀ ಬೆಲ್ಲವನ್ನು ತಯಾರು ಮಾಡುವ ಘಟಕವನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್. ವಿ. ಸುರೇಶ್ ವಿ. ಸಿ ಫಾರಂನಲ್ಲಿ ಉದ್ಘಾಟಿಸಿದ್ದಾರೆ. ಈ ಘಟಕ ಉತ್ತಮವಾದ ಕೆಲಸ ನಿರ್ವಹಿಸಿ ರೈತ ಸಮುದಾಯಕ್ಕೆ ಕಬ್ಬು ಬೆಳೆಗಾರರಿಗೆ ವರದಾನವಾಗಲಿ ಎಂದು ಹಾರೈಸಿದರು.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ವಲಯ ಕೃಷಿ ಸಂಶೋಧನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾನಿಲಯ, ವಿ. ಸಿ ಫಾರಂ, ಮಂಡ್ಯ ತಾಲೂಕು ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಶ್ರಯದಲ್ಲಿ ನಡೆದ ಕೃಷಿ ಯಂತ್ರೋಪಕರಣಗಳ ಮೇಳ 2023 ಹಾಗೂ ಜಾಗರಿ ಪಾರ್ಕ್ನ ಇನ್ಕ್ಯುಬೇಷನ್ ಕೇಂದ್ರದ ಪ್ರಾರಂಭೋತ್ಸವ ನಡೆಯಿತು.
ಖಾಸಗಿಯವರ ಸಹಭಾಗಿತ್ವದಲ್ಲಿ ರಾಸಾಯನಿಕ ಮುಕ್ತ ಬೆಲ್ಲದ ಉತ್ಪಾದನೆ ಮಾಡಲಾಗುವುದು. ಇದಕ್ಕಾಗಿ ಸುತ್ತಮುತ್ತಲಿನ ರೈತರು ಮತ್ತು ವಿ. ಸಿ ಫಾರಂ ಅವರು ಉತ್ತಮ ಗುಣಮಟ್ಟದ ಕಬ್ಬು ಉತ್ಪನ್ನ ಮಾಡಿ ನೀಡಬೇಕು. ರಾಸಾಯನಿಕ ಮುಕ್ತ ಬೆಲ್ಲವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಕೃಷಿ ವಿಶ್ವವಿದ್ಯಾನಿಲಯದ ಅಭಿಲಾಷೆಯಾಗಿದೆ.
ಕಬ್ಬು ಬೆಳೆಯುವ ರೈತರು; ಮಂಡ್ಯದಲ್ಲಿ ಸಾವಿರಾರು ಎಕರೆಯಲ್ಲಿ ಕಬ್ಬು ಬೆಳೆಯಲಾಗುತ್ತದೆ. ಮಂಡ್ಯದ ಬೆಲ್ಲ ತನ್ನದೇ ಆದ ಹೆಸರಿನಿಂದ ದೇಶ, ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಆದರೆ ಅದನ್ನು ತಯಾರಿಸಲು ಸಹ ರೈತರ ಸಂಕಷ್ಟ ಪಡಬೇಕಿದೆ. ಇಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ, ಸೂಕ್ತ ಮಾರುಕಟ್ಟೆ ಕೊರತೆ, ದರ ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ.

ಮಂಡ್ಯದಲ್ಲಿ ಸಕ್ಕರೆ ಕಾರ್ಖನೆಗಳು ಆರಂಭವಾದಂತೆ ಜನರು ಕಾರ್ಖನೆಗಳಿಗೆ ಕಬ್ಬು ಹಾಕಲು ಶುರು ಮಾಡಿದರು. ಆದ್ದರಿಂದ ಆಲೆಮನೆಯಲ್ಲಿ ಬೆಲ್ಲದ ಉತ್ಪಾದನೆ ಕಡಿಮೆ ಆಯಿತು. ಆಗ ಬೆಲ್ಲ ತಯಾರಿಸುವ ಆಲೆಮನೆಯವರು ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಬಳಿಕ ಬೆಲ್ಲದ ಗುಣಮಟ್ಟಕ್ಕಿಂತ ಅದರ ಅಂದ ಹೆಚ್ಚು ಆಕರ್ಷಣೀಯವಾಗಿ ಕಾಣಬೇಕು ಎಂದಾಗ ಬೆಲ್ಲದ ಗುಣಮಟ್ಟ ಕುಸಿಯಲಾರಂಭಿಸಿತು. ಬೇಡಿಕೆಯೂ ಕುಸಿಯಿತು. ಈಗ ರಾಸಾಯನಿಕ ಮುಕ್ತ ಆಹಾರದ ಬಗ್ಗೆ ಅಭಿಯಾನವೇ ನಡೆಯುತ್ತಿದ್ದು, ಮಂಡ್ಯದ ಬೆಲ್ಲವನ್ನು ರಾಸಾಯನಿಕ ಮುಕ್ತವಾಗಿಸುವ ಪ್ರಕ್ರಿಯೆ ಆರಂಭವಾಗಿದೆ.
ಯಂತ್ರಗಳನ್ನು ಬಳಕೆ ಮಾಡಿ; ಕೃಷಿ ಯಂತ್ರೋಪಕರಣಗಳ ಬಹಳ ಉಪಯುಕ್ತತೆಯನ್ನು ಪಡೆದಿದ್ದು ರೈತ ಬಾಂಧವರಿಗೆ ಕೃಷಿಯಲ್ಲಿ ಹಾಗೂ ಬೆಳೆದ ಫಸಲನ್ನು ನಂತರದ ದಿನಗಳಲ್ಲಿ ಕುಯ್ಯುವ ತಂತ್ರಜ್ಞಾನಕ್ಕೆ ಬೇಕಾಗುವಂತಹ ಸಾಕಷ್ಟು ಯಂತ್ರೋಪಕರಣಗಳ ಮಾಹಿತಿ ಈಗ ಲಭ್ಯವಿದೆ ರೈತರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಯಂತ್ರೋಪಕರಣಗಳು ಇಲ್ಲದಿದ್ದರೆ ಕೃಷಿ ಮಾಡುವುದು ತುಂಬಾ ಕಠಿಣವಾಗಿದೆ. ಇಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕಿದೆ.
ಯುವ ಸಮೂಹ ಪಟ್ಟಣಗಳತ್ತ ವಲಸೆ ಹೋಗುತ್ತಿರುವುದನ್ನು ತಡೆಯಬೇಕು. ಕೃಷಿ ಯಂತ್ರೋಪಕರಣಗಳಿಂದ ರೈತರಿಗೆ ಸಮಯದ ಉಳಿತಾಯ ಸಹ ಕೊಡ ಆಗುತ್ತದೆ. ಪ್ರಸ್ತುತ ದಿನಗಳಲ್ಲಿ ಕೃಷಿ ರಂಗದಲ್ಲಿ ಆಗುವಂತಹ ಅನೇಕ ತೊಂದರೆಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ನೆರವಾಗುವಂತೆ ಅನೇಕ ಮಾಹಿತಿಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳ ಮೂಲಕ ನೀಡಲಾಗುತ್ತಿದೆ.












Click it and Unblock the Notifications