ಬಿಬಿಎಂಪಿ: ತ್ಯಾಜ್ಯದಿಂದ ಸಾವಯವ ಗೊಬ್ಬರ, ರೈತರಿಗೆ ಉಚಿತ ವಿತರಣೆ- ಸಂಪರ್ಕಿಸಿ
ಬೆಂಗಳೂರು, ಅಕ್ಟೋಬರ್ 13: ನಿತ್ಯ ಸಂಗ್ರಹಿಸಿ ವಿಂಗಡಿಸುವ ಹಸಿ ಕಸವನ್ನು ಸಾಂಪ್ರದಾಯಿಕ ಗೊಬ್ಬರವಾಗಿ ಮಾಡಿ ರೈತರಿಗೆ ಉಚಿತವಾಗಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ದಾಸರಹಳ್ಳಿ ವಲಯದ ದೊಡ್ಡಬಿದರಕಲ್ಲುನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಘನತ್ಯಾಜ್ಯ ಸಂಸ್ಕರಣಾ ಘಟಕ ಇದೆ. ಈ ಘಟಕದಲ್ಲಿ ಪ್ರತಿ ದಿನ ಸ್ವೀಕರಿಸಿ ವಿಂಗಡಿಸಿದ ಹಸಿ ತ್ಯಾಜ್ಯವನ್ನು ಸಾಂಪ್ರದಾಯಿಕ ಗೊಬ್ಬರ ತಯಾರಿಸಲಾಗುತ್ತಿದೆ. ಈ ವೇಳೆ ಉತ್ಪತ್ತಿಯಾಗುವ ದ್ರವರೂಪದ ಸಾವಯವ ಗೊಬ್ಬರ (ಲೀಚೆಟ್) ಹಾಗೂ +35ಎಂಎಂ ಗಾತ್ರದ ಘನರೂಪದ ಸಾವಯವ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಒದಗಿಸಿರುವ ಸದರಿ ಅವಕಾಶವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಪಾಲಿಕೆ ತಿಳಿಸಿದೆ. ರೈತರು ಬಿಬಿಎಂಪಿಯಿಂದ ಪಡೆಯುವ ಗೊಬ್ಬರವನ್ನು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ಹಾಕಬಹುದು.
ಇದರಿಂದ ಉತ್ತಮವಾದ ಬೆಳೆ ಪಡೆಯುವುದರೊಂದಿಗೆ ನೆಲದ ಫಲವತ್ತತೆ ಕೂಡ ವೃದ್ಧಿಯಾಗುತ್ತದೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (IIHR)ತಜ್ಙರು ಅಭಿಪ್ರಾಯಪಟ್ಟಿದ್ದಾರೆ.
ಘನತ್ಯಾಜ್ಯ ಸಂಸ್ಕರಣಾ ಘಟಕದಿಂದ ರೈತರಿಗೆ ಉಚಿತವಾಗಿ ನೀಡಲು ನಿರ್ಧರಿಸಿರುವ ದ್ರವರೂಪದ ಗೊಬ್ಬರ (ಲೀಚೆಟ್) ಹಾಗೂ +35ಎಂಎಂ ಗಾತ್ರದ ಘನರೂಪದ ಸಾವಯವ ಗೊಬ್ಬರವನ್ನು ರೈತರು ತಮ್ಮ ಲಾರಿ/ಟ್ರಾಕ್ಟರ್ ವ್ಯವಸ್ಥೆಯೊಂದಿಗೆ ಬಂದು ಉಚಿತವಾಗಿ ಪಡೆದುಕೊಳ್ಳಬಹುದು. ತೋಟಗಾರಿಕೆ ಬೆಳೆಗಳಿಗೆ ರಸಗೊಬ್ಬರಗಳ ಬದಲಾಗಿ ಈ ಸಾವಯವ ಗೊಬ್ಬರವಾಗಿ ನೀಡಿ ಉತ್ತಮವಾದ ಬೆಳೆ ಪಡೆಯಿರಿ ಜತೆಗೆ ನೆಲದ ಫಲವತ್ತತೆ ಕಾಪಾಡಿ ಎಂದು ಬಿಬಿಎಂಪಿ ಮನವಿ ಮಾಡಿದೆ.
ಬಳಕೆ ಹೇಗೆ?:
ಒಂದು ಲೀಟರ್ ದ್ರವರೂಪದ ಸಾವಯವ ಗೊಬ್ಬರ (ಲೀಚೆಟ್) ವನ್ನು 8 ಲೀಟರ್ ನೀರಿನೂಂದಿಗೆ ವಿಶ್ರಣಮಾಡಿ ಉಪಯೋಗಿಸಬಹುದು ಎಂದು ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆಯ ತಜ್ಙರು ತಿಳಿಸಿದ್ದಾರೆ. ರೈತರು ಉಚಿತ ಗೊಬ್ಬರ ಪಡೆಯಲು ದೊಡ್ಡಬಿದರಕಲ್ಲು ಘನತ್ಯಾಜ್ಯ ಘಟಕ ವ್ಯವಸ್ಥಾಪಕರು ಲಕ್ಷ್ಮೀ ಮೊ. 8618001636 ಇಲ್ಲವೇ ಮೊ. 7892168865ಗೆ ಸಂಪರ್ಕಿಸಿ ಎಂದು ಬಿಬಿಎಂಪಿ ತಿಳಿಸಿದೆ.