ಈರುಳ್ಳಿ ಬೆಲೆ ಇಳಿಕೆಗೆ ಇನ್ನೊಂದು ವಾರವಷ್ಟೇ ಸಾಕು!
ದೆಹಲಿ, ಡಿಸೆಂಬರ್.06: ಈರುಳ್ಳಿ ಬೆಲೆ ಏರಿಕೆ ಆಯ್ತು, ಈರುಳ್ಳಿ ಬೆಲೆ ಏರಿಕೆ ಆಯ್ತು. ಹೀಗೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಇನ್ನೊಂದು ವಾರದಲ್ಲೇ ಈರುಳ್ಳಿ ಗ್ರಾಹಕರ ಕೈಗೆಟಗುವ ಬೆಲೆಯಲ್ಲಿ ಸಿಗಲಿದೆ. ಟನ್ ಗಟ್ಟಲೇ ಈರುಳ್ಳಿ ಮಾರಕಟ್ಟೆಗೆ ಲಗ್ಗೆ ಇಡಲಿದೆ.
ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಲೆ ಏರಿಕೆಗೆ ಕಾರಣ ಏನು ಎಂಬುದನ್ನು ಕೇಂದ್ರ ಸರ್ಕಾರ ಗೊತ್ತು ಮಾಡಿಕೊಂಡಿದೆ. ಅದಕ್ಕೆ ಕಡಿವಾಣ ಹಾಕಲು ಯೋಜನೆ ರೂಪಿಸಲಾಗಿದೆ.
ಈರುಳ್ಳಿ ಬೆಲೆ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ 150 ರೂಪಾಯಿ ಗಡಿ ದಾಟಿದೆ. ಈ ಬಗ್ಗೆ ಚರ್ಚೆ ನಡೆಸಲು ಡಿಸೆಂಬರ್.05ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದರು. ಕೈಗಾರಿಕಾ ಸಚಿವ ಪಿಯೂಶ್ ಗೋಯೆಲ್ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಶ್ ಶ್ರೀವಾಸ್ತವ್ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು.

ಅಸಲಿ ಸತ್ಯ ಬಿಚ್ಚಿಟ್ಟ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕಾರಣದ ಬಗ್ಗೆ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಥ್ ಶ್ರೀವಾಸ್ತವ್ ಸವಿವರವಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸರಕು ಸಿಗುತ್ತಿಲ್ಲ. ಉತ್ಪಾದನೆ ಕಡಿಮೆಯಾಗಿದ್ದು, ಮೊದಲು ಬೆಳೆದಿದ್ದ ಈರುಳ್ಳಿ ಬೆಲೆಯೂ ಹಾನಿಯಾಗಿದೆ. ಹೀಗಾಗಿ ಈರುಳ್ಳಿಯ ಬೇಡಿಕೆ, ಸಂಗ್ರಹಣೆ ಹಾಗೂ ವಿತರಣೆ ಕುರಿತು ಸೂಕ್ತ ಕ್ರಮ ತೆಗದುಕೊಳ್ಳುವ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಗಿದೆ.

ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧಾರ
ಮೊದಲೆಲ್ಲ ಈರುಳ್ಳಿಯನ್ನು ರಫ್ತು ಮಾಡುತ್ತಿದ್ದ ಭಾರತವೇ ಇದೀಗ ಈರುಳ್ಳಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ದೇಶದಲ್ಲಿ ಏರಿಕೆಯಾಗುತ್ತಿರುವ ಈರುಳ್ಳಿ ಬೆಲೆ ಹಾಗೂ ಬೇಡಿಕೆಗೆ ಅನುಗುಣವಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಸಾವಿರಾರು ಕೆಜಿ ಈರುಳ್ಳಿ ಆಮದಿಗೆ ಸಂಪುಟ ಅಸ್ತು
ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಇತ್ತೀಚಿಗಷ್ಟೇ ನಡೆದ ಸಂಪುಟ ಸಭೆಯಲ್ಲಿ 1 ಲಕ್ಷ 20 ಸಾವಿರ ಕೆಜಿ ಈರುಳ್ಳಿ ಆಮದು ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ. ಈ ಪೈಕಿ 21 ಸಾವಿರ ಕೆಜಿ ಈರುಳ್ಳಿ ಆಮದು ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು, ಕೆಲವೇ ದಿನಗಳಲ್ಲಿ 15 ಸಾವಿರ ಕೆಜಿ ಈರುಳ್ಳಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಎರಡನೇ ವಾರದಲ್ಲಿ ಈರುಳ್ಳಿ ಆಮದಿಗೆ ನಿರ್ಧಾರ
ಈಗಾಗಲೇ ಒಪ್ಪಂದ ಮಾಡಿಕೊಂಡಂತೆ 21 ಸಾವಿರ ಕೆಜಿ ಈರುಳ್ಳಿಯನ್ನು ಆಮದಿಗೆ ದಿನಾಂಕವೂ ನಿಗದಿಯಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಈರುಳ್ಳಿ ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಇನ್ನೊಂದೇ ವಾರದಲ್ಲಿ ಈರುಳ್ಳಿ ಬೆಲೆ ಗ್ರಾಹಕರ ಕೈಗೆ ಎಟಕುವ ಬೆಲೆಯಲ್ಲಿ ಸಿಗಲಿದೆ ಎಂದು ಗ್ರಾಹಕ ವ್ಯವಹಾರಗಳ ಅಧಿಕಾರಿ ಅವಿನಾಶ್ ಶ್ರೀವಾಸ್ತವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications