ಹಿಂಗಾರು ಹಂಗಾಮು; ಈ ಬೆಳೆಗಳ ಬೆಳೆವಿಮೆಗೆ ನೋಂದಣಿಗೆ ರೈತರಿಗೆ ಕರೆ
ಕೊಪ್ಪಳ, ಅಕ್ಟೋಬರ್ 20: ಜೂನ್ನಿಂದ ಸೆಪ್ಟೆಂಬರ್ ತನಕ ನೈಋತ್ಯ ಮುಂಗಾರು ಅವಧಿ ಪೂರ್ಣಗೊಂಡಿದೆ. ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿದೆ. ಈಗ 2023-24ನೇ ಸಾಲಿನ ಬೆಳೆವಿಮೆ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆವಿಮೆಗೆ ಹೆಸರು ನೋಂದಾಯಿಸುವಂತೆ ಕರೆ ನೀಡಲಾಗಿದೆ. ಅಲ್ಲದೇ ಯಾವ, ಯಾವ ಬೆಳೆಗಳಿವೆ ಎಂದು ಮಾಹಿತಿ ನೀಡಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಹಲವು ಬೆಳೆಗಳನ್ನು ಹಿಂಗಾರು ಹಂಗಾಮಿನಲ್ಲಿ ಬೆಳೆವಿಮೆಗೆ ಆಯ್ಕೆ ಮಾಡಲಾಗಿದೆ. ಹುರಳಿ (ಮಳೆ ಆಶ್ರಿತ) ಬೆಳೆಗೆ ಬೆಳೆ ವಿಮೆ ನೋಂದಾಯಿಸಲು ನವೆಂಬರ್ 15 ಕೊನೆಯ ದಿನವಾಗಿದೆ.

ಜೋಳ(ಮಳೆ ಆಶ್ರಿತ ಮತ್ತು ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ ಮತ್ತು ನೀರಾವರಿ), ಕುಸುಮೆ (ಮ.ಆ), ಸೂರ್ಯಕಾಂತಿ (ಮಳೆ ಆಶ್ರಿತ ಮತ್ತು ನೀರಾವರಿ) ಬೆಳೆಗಳಿಗೆ ವಿಮೆ ನೋಂದಾಯಿಸಲು ಡಿಸೆಂಬರ್ 01 ಕೊನೆಯ ದಿನವಾಗಿದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
ಬೆಳೆ ವಿಮೆ ಮಾಡಿಸಿ; ಗೋಧಿ (ನೀರಾವರಿ ಮತ್ತು ಮಳೆ ಆಶ್ರಿತ) ಬೆಳೆಗೆ ವಿಮೆ ನೋಂದಾಯಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ. ಕಡಲೆ (ಮಳೆ ಆಶ್ರಿತ ಮತ್ತು ನೀರಾವರಿ) ಬೆಳೆಗೆ ನೋಂದಾಯಿಸಲು ಡಿಸೆಂಬರ್ 30 ಕೊನೆಯ ದಿನವಾಗಿದೆ. ಶೇಂಗಾ (ನೀರಾವರಿ), ಭತ್ತ (ನೀರಾವರಿ), ಸೂರ್ಯಕಾಂತಿ (ನೀರಾವರಿ) ಬೆಳೆಗೆ ವಿಮೆ ನೋಂದಾಯಿಸಲು ಫೆಬ್ರವರಿ 28, 2024 ಕೊನೆಯ ದಿನವಾಗಿದೆ.
ಬೆಳೆ ವಿಮೆ ನೋಂದಣಿ ಕುರಿತು ಅಕ್ಟೋಬರ್ 16 ರಂದು ನಡೆದ ಇಲಾಖಾ ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ, ಬ್ಯಾಂಕ್ ಸಿಬ್ಬಂದಿಗೆ, ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ವ್ಯವಸ್ಥಾಪಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮೆ ನೋಂದಾಯಿಸಲು ಕ್ರಮವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅದರಂತೆ ರೈತ ಬಾಂಧವರು ಬೆಳೆ ವಿಮೆ ನೋಂದಾಯಿಸಲು ತಮ್ಮ ಖಾತೆ ವಿವರಗಳನ್ನು ಕಡ್ಡಾಯವಾಗಿ ಎಫ್ಐಡಿ (ಫ್ರೂಟ್ ಐಡಿ) ಯೊಂದಿಗೆ ಲಿಂಕ್ ಮಾಡಿಸುವುದು ಅವಶ್ಯಕವಾಗಿರುತ್ತದೆ. ರೈತರು ತಾವು ಬಿತ್ತನೆ ಮಾಡಿದ ಬೆಳೆಯು ಮಳೆಯಾಶ್ರಿತ ಅಥವಾ ನೀರಾವರಿ ಎಂಬುದನ್ನು ಸರಿಯಾಗಿ ಸಂರಕ್ಷಣೆ ಪೋರ್ಟಲ್ನಲ್ಲಿ ನಮೂದಿಸಬೇಕು.
ಬೆಳೆ ವಿಮೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಲು ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು 8861468340, 7996453241, 9964397577, 9008078851, 8105522077 ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಕಂಪನಿ ಪ್ರತಿನಿಧಿಗಳು ಸಂಬಂಧಿಸಿದ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಲಭ್ಯ ಇದ್ದು, ರೈತರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ. ರೈತರು ತಾಲ್ಲೂಕುವಾರು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
ರೈತರು ಬೆಳೆವಿಮೆ ಹೆಸರು ನೋಂದಾಯಿಸಿ, ಯೋಜನೆ ಲಾಭ ಪಡೆಯಲು ಮನವಿ ಮಾಡಲಾಗಿದೆ. ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರಧಾನ ಕಚೇರಿಯು ಕೊಪ್ಪಳ ನಗರದಲ್ಲಿ ಬ್ಯಾಂಕ್ ಆಫ್ ಬರೋಡಾ ಪಕ್ಕದಲ್ಲಿರುವ ನಾಸವಾಲೆ ಬಿಲ್ಡಿಂಗ್ನ 1 ನೇ ಮಹಡಿಯಲ್ಲಿ ಇದ್ದು, ರೈತ ಬಾಂಧವರು ನೇರವಾಗಿಯೂ ಕಂಪನಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.












Click it and Unblock the Notifications