ತುಂಬಿದ ನಂಜನಗೂಡಿನ ಹದಿನಾರು ಕೆರೆ, ರೈತರಲ್ಲೀಗ ಸಂಭ್ರಮ
ಮೈಸೂರು, ಸೆಪ್ಟೆಂಬರ್ 15: ಶತಮಾನಗಳ ಕಾಲದಿಂದ ಹೂಳು ತುಂಬಿ ನೀರು ಕಾಣದೆ ಬತ್ತಿ ಹೋಗಿದ್ದ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಕೆರೆಯಲ್ಲೀಗ ಜೀವಸೆಲೆಯಾಡುತ್ತಿದೆ. ಈ ಕೆರೆಯು ಹೂಳು ತುಂಬಿ ದುಸ್ಥಿತಿಗೀಡಾಗಿತ್ತು.
ಈ ಕೆರೆಯಿರುವುದು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಸ್ವಗ್ರಾಮದಲ್ಲಿ ಆಗಿರುವ ಕಾರಣದಿಂದ ಇದರ ಬಗ್ಗೆ ಹೆಚ್ಚಿನ ಒಲವು ತೋರಿದ ಅವರು ಇದರ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು.
ಸುಮಾರು 200 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯಲ್ಲಿದ್ದ ಹೂಳನ್ನು ಅಂದಾಜು 4 ಕೋಟಿ ರೂ. ವೆಚ್ಚ ಮಾಡಿ ತೆಗೆಯಲಾಗಿತ್ತು. ಅಲ್ಲದೆ ಒತ್ತುವರಿಯಾಗಿದ್ದ ಸುಮಾರು 50 ಎಕರೆ ಜಾಗವನ್ನು ರೈತರಿಂದ ತೆರವುಗೊಳಿಸಿ ಅಭಿವೃದ್ಧಿಗೊಳಿಸಲಾಗಿತ್ತು.

ಈ ಬಾರಿ ಹದಿನಾರು ಗ್ರಾಮದ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾದ ಹಿನ್ನಲೆಯಲ್ಲಿ ಸುತ್ತಲಿನ ನೀರು ಹರಿದು ಬಂದು ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಇನ್ನು ಕೆರೆಯ ದಡದಲ್ಲಿ ಸಿಮೆಂಟ್ನ ತಡೆಗೋಡೆ ನಿರ್ಮಾಣ ಕಾರ್ಯವೂ ನಡೆದಿದೆ.
ಕೆರೆಯು ಅಭಿವೃದ್ಧಿಯಾಗಿ ನೀರಿನ ಸಂಗ್ರಹಣಾ ಸಾಮಥ್ರ್ಯವೂ ಹೆಚ್ಚಳವಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜನ ಜಾನುವಾರುಗಳಿಗೆ ನೀರು ದೊರೆತಂತಾಗಿದೆ.
ಇಲ್ಲಿಗೆ ಹೊರದೇಶಗಳಿಂದ ಸಂತಾನೋತ್ಪತ್ತಿಗಾಗಿ ಪಕ್ಷಿಗಳು ಆಗಮಿಸುವ ಹಿನ್ನಲೆಯಲ್ಲಿ ಪಕ್ಷಿಧಾಮವನ್ನು ಸಹ ನಿರ್ಮಾಣ ಮಾಡಲಾಗಿದ್ದು, ಮೀನು ಸಾಕಾಣಿಕೆ ಮಾಡಲು ಅನುಕೂಲವಾಗಿದೆ.

ಕೆರೆ ತುಂಬಿದ ಕಾರಣದಿಂದ ಹದಿನಾರು, ಮೂಡಳ್ಳಿ, ಮಲ್ಲರಾಜಯ್ಯನ ಹುಂಡಿ, ಹದಿನಾರು ಮೋಳೆ, ಮಾದಯ್ಯನ ಹುಂಡಿ, ಆಲತ್ತೂರು ಸೇರಿದಂತೆ ಹತ್ತಾರು ಗ್ರಾಮಗಳ ರೈತರ ಜಮೀನುಗಳ ಕೊಳವೆ ಬಾವಿಗಳಿಗೆ ಅಂತರ್ಜಲವೂ ಹೆಚ್ಚಾಗಿದೆ.
ಕೆರೆ ಹೂಳೆತ್ತುವ ಮೊದಲು ಕೇವಲ 1.5 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು, ಕೆರೆ ಹೂಳೆತ್ತಿದ ನಂತರ 3.5 ಟಿಎಂಸಿ ನೀರು ಸಂಗ್ರಹದ ಸಾಮಥ್ರ್ಯವನ್ನು ಕರೆ ಹೊಂದಿದೆ.












Click it and Unblock the Notifications