ಧಾರವಾಡ; 17 ಕೇಂದ್ರಗಳಲ್ಲಿ ಹೆಸರುಕಾಳು ಖರೀದಿ, ರೈತರು ನೋಂದಣಿ ಮಾಡಿಸಿ
ಧಾರವಾಡ, ಸೆಪ್ಟೆಂಬರ್ 04; ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಧಾರವಾಡ ಜಿಲ್ಲೆಯ ರೈತರಿಂದ 17 ಕೇಂದ್ರಗಳಲ್ಲಿ ಹೆಸರುಕಾಳು ಮತ್ತು 3 ಕೇಂದ್ರಗಳಲ್ಲಿ ಉದ್ದಿನಕಾಳು ಉತ್ಪನ್ನಗಳ ಖರೀದಿ ನಡೆಸಲಾಗುತ್ತದೆ.
ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್. ಎ. ಕ್ಯೂ. ಗುಣಮಟ್ಟದ ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನವನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ರೈತರಿಂದ ಹೆಸರು ಕಾಳು ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಖರೀದಿಸಲು ಅಕ್ಟೋಬರ್ 13ರ ತನಕ ರೈತರು ಹೆಸರು ನೋಂದಣಿ ಮಾಡಿಸಿಕೊಳ್ಳಲು ಕರೆ ನೀಡಲಾಗಿದೆ. ನವೆಂಬರ್ 27 ರವರೆಗೆ ಉತ್ಪನ್ನಗಳ ಖರೀದಿ ಪ್ರಕ್ರಿಯೆ ನಡೆಯಲಿದೆ.

ಬೆಂಬಲ ಬೆಲೆ ಯೋಜನೆಯಡಿ ಎಫ್. ಎ. ಕ್ಯೂ. ಗುಣಮಟ್ಟದ ಹೆಸರುಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ ರೂ. 7,755ರಂತೆ ಹಾಗೂ ಉದ್ದಿನಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ ರೂ. 6,600ರಂತೆ ಧಾರವಾಡ ಜಿಲ್ಲೆಯ ರೈತರಿಂದ ಖರೀದಿಸಲಾಗುತ್ತದೆ.
ಯಾವ ದಾಖಲೆಗಳು ಬೇಕು?: ಬೆಂಬಲಬೆಲೆ ಯೋಜನೆಯಡಿ ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನಗಳನ್ನು ಮಾರಾಟ ಮಾಡಬಯಸುವ ರೈತರು ಆಧಾರ್ ಕಾರ್ಡ್, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ, ನೋಂದಣಿ ಮಾಡಿಸಬಹುದಾಗಿದೆ.
ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಖರೀದಿಸಲಾಗುವುದು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು ಎಂದು ಕರೆ ನೀಡಲಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಹಾಗೂ ಶಾಖಾ ವ್ಯವಸ್ಥಾಪಕ (0836-2374837)ರನ್ನು ಸಂಪರ್ಕಿಸಬಹುದು.

ಹೆಸರುಕಾಳು ಖರೀದಿ ಕೇಂದ್ರ: ಧಾರವಾಡ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಹೆಬ್ಬಳ್ಳಿ ಖಾದಿ ಭಂಡಾರ ಗೋದಾಮು, ಉಪ್ಪಿನಬೆಟಗೇರಿ, ಹುಬ್ಬಳ್ಳಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಅಮರಗೋಳ, ಹೆಬಸೂರು, ಕುಂದಗೋಳ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಯರಗುಪ್ಪಿ, ಅಣ್ಣಿಗೇರಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ.
ನವಲಗುಂದ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ನವಲಗುಂದ ಶ್ರೀವಾರಿ ಫ್ಲೋರ್ ಮಿಲ್, ಮೊರಬ, ಶಿರಕೋಳ, ತಿರ್ಲಾಪೂರ, ಬ್ಯಾಹಟ್ಟಿ, ಆರೇಕುರಹಟ್ಟಿ, ಹಾಲಕುಸುಗಲ್ಲ, ಶಿರೂರ ಸಂಪರ್ಕಿಸಬಹುದು.
ಉದ್ದಿನಕಾಳು ಖರೀದಿ ಕೇಂದ್ರ: ಧಾರವಾಡ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಉಪ್ಪಿನಬೆಟಗೇರಿ, ಹುಬ್ಬಳ್ಳಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಸಂಪರ್ಕಿಸಬಹುದು.
ರೈತರಿಗೆ ಸೂಚನೆಗಳು; ಬೆಂಬಲಬೆಲೆ ಯೋಜನೆಯಡಿ ಖರೀದಿಸಲು ಹೆಸರುಕಾಳು ಹಾಗೂ ಉದ್ದಿನಕಾಳು ಎಫ್. ಎ. ಕ್ಯೂ. ಗುಣಮಟ್ಟ ಹೊಂದಿರಬೇಕು. ಉತ್ಪನ್ನಗಳು ಚನ್ನಾಗಿ ಒಣಗಿರಬೇಕು ಮತ್ತು ತೇವಾಂಶವು ಶೇ. 12ಗಿಂತ ಕಡಿಮೆ ಇರಬೇಕು. ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನವು ಗಾತ್ರ, ಬಣ್ಣ, ಆಕಾರ ಹೊಂದಿರಬೇಕು. ಸ್ವಚ್ಚವಾಗಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.
ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳವು ನೀಡುವ ಗೋಣಿಚೀಲದಲ್ಲಿ 50 ಕೆ. ಜಿ. ಪ್ರಮಾಣದಲ್ಲಿ ತುಂಬಬೇಕು. ಹೆಸರು ಕಾಳು ಪ್ರತಿ ಎಕರೆಗೆ 4 ಕ್ವಿಂಟಾಲ್ನಂತೆ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಮತ್ತು ಉದ್ದಿನಕಾಳು ಪ್ರತಿ ಎಕರೆಗೆ 3 ಕ್ವಿಂಟಾಲ್ನಂತೆ ಪ್ರತಿ ರೈತರಿಂದ ಗರಿಷ್ಟ 6 ಕ್ವಿಂಟಾಲ್ ಗುಣಮಟ್ಟದ ಉತ್ಪನವನ್ನು ಖರೀದಿಸಲಾಗುತ್ತದೆ.












Click it and Unblock the Notifications