ಮುಂಗಾರು ಹಂಗಾಮು; ಕೃಷಿ ಚಟುವಟಿಕೆಗೆ ಸಹಕಾರ ನೀಡಲು ಡಿಸಿ ಸೂಚನೆ
ಕೊಪ್ಪಳ, ಜೂನ್ 14; ಮುಂಗಾರು ಹಂಗಾಮು ಆರಂಭವಾಗುತ್ತಿದೆ. ರೈತರು ಹೊಲ ಊಳುವುದು, ಬಿತ್ತನೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ರೈತರಿಗೆ ಸಲಹೆ, ಸಹಕಾರ ನೀಡಬೇಕು ಎಂದು ಸ್ಪಂದನೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಂ. ಸುಂದರೇಶ ಬಾಬು ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ನಡೆಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಅವರು ಹವಾಮಾನ, ಕೃಷಿ ಚಟುವಟಿಕೆ, ಬೀಜೋಪಚಾರ, ರೈತರ ಚಟುಟಿಕೆಗಳ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು, ಹಲವು ನಿರ್ದೇಶನಗಳನ್ನು ಕೊಟ್ಟರು.

ಜಿಲ್ಲಾಧಿಕಾರಿಗಳು ಮಾತನಾಡಿ, "ಮಳೆಗಾಲದ ಹಿನ್ನೆಲೆಯಲ್ಲಿ ಬಿತ್ತನೆ, ಹೊಲ ಊಳುವ ನಾನಾ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ಸ್ಪಂದಿಸಬೇಕು. ಹವಾಮಾನ ಮತ್ತು ಬೀಜೋಪಚಾರದ ಬಗ್ಗೆ ರೈತರಿಗೆ ಸಲಹೆ ನೀಡಬೇಕು" ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
"ತಾಲೂಕಿನ ಕೃಷಿ ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರೊಂದಿಗೆ ಸಂಯಮದಿಂದ ವರ್ತಿಸಬೇಕು. ರೈತರ ಅಹವಾಲು ಸರಿಯಾಗಿ ಆಲಿಸಿ ಬಿತ್ತನೆ ಬೀಜ, ಗೊಬ್ಬರ ಸಮರ್ಪಕ ವಿತರಣೆಗೆ ಒತ್ತು ನೀಡಬೇಕು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬೀಜ ಮತ್ತು ಗೊಬ್ಬರ ದಾಸ್ತಾನು ಮಾಹಿತಿ; ಸಭೆಯಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಕುರಿತು ಚರ್ಚೆ ನಡೆಯಿತು. ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬೀಜ, ಗೊಬ್ಬರ ವಿತರಣೆ ಮತ್ತು ದಾಸ್ತಾನುವಿನ ಬಗ್ಗೆ ಸಮರ್ಪಕವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪ ಸಭೆಗೆ ಜಿಲ್ಲೆಯಲ್ಲಿ ಜೂನ್ 9ರವರೆಗೆ ಯೂರಿಯಾ 24,800 ಮೆಟ್ರಿಕ್ ಟನ್, ಡಿಎಪಿ 12,463 ಮೆಟ್ರಿಕ್ ಟನ್. ಎಂಓಪಿ 348 ಮೆಟ್ರಿಕ್ ಟನ್, ಎನ್ಕೆಪಿಎಸ್ 27,164 ಮೆಟ್ರಿಕ್ ಟನ್, ಎಸ್ಎಸ್ಪಿ 425 ಮೆಟ್ರಿಕ್ ಟನ್ ಸೇರಿ ಒಟ್ಟು 65,201 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇರುತ್ತದೆ ಎಂದು ಮಾಹಿತಿ ನೀಡಿದರು.
ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ಸೇರಿ 76 ಕ್ವಿಂಟಾಲ್ ಭತ್ತ, 998.85 ಕ್ವಿಂಟಾಲ್ ಮೆಕ್ಕೆಜೋಳ, 74.24 ಕ್ವಿಂಟಾಲ್ ಸಜ್ಜೆ, 1.64 ಕ್ವಿಂಟಾಲ್ ನವಣೆ, 107.94 ಕ್ವಿಂಟಾಲ್ ಹೆಸರು, 321.22 ಕ್ವಿಂಟಾಲ್ ತೊಗರಿ, 9.55 ಕ್ವಿಂಟಾಲ್ ಸೂರ್ಯಕಾಂತಿ ಬಿತ್ತನೆ ಬೀಜಗಳು ಮಾರಾಟವಾಗಿದೆ ಎಂದರು.
287.75 ಕ್ವಿಂಟಾಲ್ ಭತ್ತ, 1615.07 ಕ್ವಿಂಟಾಲ್ ಮೆಕ್ಕೆಜೋಳ, 213.56 ಕ್ವಿಂಟಾಲ್ ಸಜ್ಜೆ, 5.96 ಕ್ವಿಂಟಾಲ್ ನವಣೆ, 49.26 ಕ್ವಿಂಟಾಲ್ ಹೆಸರು, 296.18 ಕ್ವಿಂಟಾಲ್ ತೊಗರಿ, 86.85 ಕ್ವಿಂಟಾಲ್ ಸೂರ್ಯಕಾಂತಿ ಬೀಜಗಳ ದಾಸ್ತಾನು ಇರುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ಹೆಸರು, ತೊಗರಿ ಮತ್ತು ಸೂರ್ಯಕಾಂತಿ ಸೇರಿ 1589.44 ಕ್ವಿಂಟಾಲ್ ಬೀಜಗಳು ಮಾರಾಟವಾಗಿ ಒಟ್ಟು 2554.63 ಕ್ವಿಂಟಾಲ್ ಬಿತ್ತನೆ ಬೀಜಗಳ ದಾಸ್ತಾನು ಇರುತ್ತದೆ ಎಂದು ವಿವರಣೆ ನೀಡಿದರು.
ಹೆಚ್ಚುವರಿ ಮಳೆ; ಮಾರ್ಚ್ 1ರಿಂದ ಮೇ 31ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 60 ಮಿ. ಮೀ. ಇದ್ದು ವಾಸ್ತವವಾಗಿ 68 ಮಿ. ಮೀ. ಮಳೆ ಸುರಿದು ಶೇ.13ರಷ್ಟು ಹೆಚ್ಚುವರಿ ಮಳೆಯಾಗಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 50 ಇದ್ದು ವಾಸ್ತವವಾಗಿ 52 ಮಿ. ಮೀ. ಸುರಿದು ಶೇ. 5ರಷ್ಟು ಮಳೆ ಹೆಚ್ಚುವರಿ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 79 ಮಿ. ಮೀ. ವಾಡಿಕೆ ಮಳೆ ಇದ್ದು ವಾಸ್ತವವಾಗಿ 67 ಮಿ. ಮೀ. ಸುರಿದು ಶೇ.15ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.












Click it and Unblock the Notifications