ಟಿಲ್ಲರ್ ಏರಿ ಭತ್ತದ ಗದ್ದೆಗಿಳಿದ ಸಚಿವ ಕೃಷ್ಣ ಬೈರೇಗೌಡ!
ಕೊಪ್ಪಳ, ಜುಲೈ 28 : 'ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರದಾನವಾಗಿರುವ ಕೃಷಿ ಯಂತ್ರಧಾರೆ ಯೋಜನೆಯ ಮೂಲಕ ಕೃಷಿ ಇಲಾಖೆ, ಈ ವರ್ಷ ರಾಜ್ಯದ 10 ಲಕ್ಷ ರೈತರನ್ನು ತಲುಪುವ ಗುರಿ ಹೊಂದಲಾಗಿದೆ' ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಗುರುವಾರ ಕೃಷಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ ಹಿಟ್ನಾಳ್ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ಕೃಷಿ ಹೈಟೆಕ್ ಯಂತ್ರೋಪಕರಣಗಳ ವಸ್ತು ಪ್ರದರ್ಶನದ ಉದ್ಘಾಟಿಸಿ ಅವರು ಮಾತನಾಡಿದರು.[ಕಲಬುರಗಿ ರೈತರಿಗೆ ನೆಮ್ಮದಿ ತಂದ ಕೃಷಿಭಾಗ್ಯ!]
ಕಾರ್ಯಕ್ರಮಕ್ಕೂ ಮೊದಲು ಸಚಿವರು ಭತ್ತದ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಯಂತ್ರವನ್ನು ಚಾಲನೆಗೊಳಿಸಿ, ಖುದ್ದು, ಪ್ರಾತ್ಯಕ್ಷಿಕೆ ನಡೆಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹಾಗೂ ಜಂಟಿ ಕೃಷಿ ನಿರ್ದೇಶಕ ರಾಮದಾಸ್ ಅವರು ಜೊತೆಗಿದ್ದರು.[ರೈತರಿಗೆ ಶೇ 4ರ ಬಡ್ಡಿ ದರದಲ್ಲಿ ಕೃಷಿ ಸಾಲ]
ರೈತರು ಕೃಷಿ ಯಂತ್ರೋಪಕರಣಗಳಿಗೆ ಬಂಡವಾಳ ಹಾಕಿ, ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು, ಸರ್ಕಾರ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ, ಅತ್ಯಲ್ಪ ದರದಲ್ಲಿ ಅಂದರೆ ಮಾರುಕಟ್ಟೆ ದರಕ್ಕಿಂತಲೂ ಶೇ. 30 ರಷ್ಟು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಲು ಈ ಯೋಜನೆ ಜಾರಿಗೊಳಿಸಲಾಗಿದೆ.....[ಕೃಷಿ ಅಭಿವೃದ್ಧಿ ಪ್ರಚಾರಾಂದೋಲನದ ಬಗ್ಗೆ ತಿಳಿಯಿರಿ]

ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ
'ಬಹುತೇಕ ರೈತರ ಸಮಸ್ಯೆ ಎಂದರೆ, ಯುವ ಪೀಳಿಗೆ ಕೃಷಿಯೇತರ ಕಸುಬಿನತ್ತ ಮುಖ ಮಾಡುತ್ತಿರುವುದು. ಕೃಷಿಕರು ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿದ್ದು, ಲಭ್ಯವಿರುವ ಕೂಲಿ ಕಾರ್ಮಿಕರ ವೆಚ್ಚ ಅಧಿಕವಾಗುತ್ತಿದೆ, ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದೆ. ಕೃಷಿ ಸಚಿವರಾಗಿ, ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿ' ಎಂದರು.

ಕೃಷಿ ಯಂತ್ರಧಾರೆ ಯೋಜನೆ
'ಅತ್ಯಂತ ಕಡಿಮೆ ದರದಲ್ಲಿ ಎಲ್ಲ ರೈತರಿಗೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಸೇವೆ ನೀಡುವಂತಹ ಕೃಷಿ ಯಂತ್ರಧಾರೆ ಯೋಜನೆಯನ್ನು ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ' ಎಂದು ಸಚಿವರು ಹೇಳಿದರು.

4 ಸಾವಿರ ರೈತರಿಗೆ ಪ್ರಯೋಜನ
'ಕೊಪ್ಪಳ ಜಿಲ್ಲೆಯಲ್ಲಿ 4 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆ ಕೇಂದ್ರ ತೆರೆಯಲಾಗಿದೆ. 4 ಸಾವಿರ ರೈತರು ಇದರ ಪ್ರಯೋಜನ ಪಡೆದುಕೊಂಡರು. ಯೋಜನೆಯು ಅತ್ಯಂತ ಯಶಸ್ವಿದಾಯಕ ಹಾಗೂ ಜನಪ್ರಿಯವಾಗುತ್ತಿದ್ದು, ಈ ವರ್ಷ ಈಗಾಗಲೆ 3500 ರೈತರು ಇದರ ಪ್ರಯೋಜನ ಪಡೆದಿದ್ದಾರೆ' ಎಂದು ಸಚಿವರು ಮಾಹಿತಿ ನೀಡಿದರು.

315 ಹೊಸ ಕೇಂದ್ರಗಳನ್ನು ಮಂಜೂರು
'ಈ ವರ್ಷ ರಾಜ್ಯದಲ್ಲಿ 315 ಹೊಸ ಕೇಂದ್ರಗಳನ್ನು ಮಂಜೂರು ಮಾಡಿದ್ದು, ಕೊಪ್ಪಳ ಜಿಲ್ಲೆಗೆ ಹೊಸದಾಗಿ 12 ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಪ್ರತಿ ಕೇಂದ್ರದಲ್ಲೂ 75 ಲಕ್ಷ ರೂ. ಮೊತ್ತದಂತೆ ಒಟ್ಟು 9 ಕೋಟಿ ರೂ. ಗಳ ವೆಚ್ಚದಲ್ಲಿ ಅತ್ಯಾಧುನಿಕ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳನ್ನು ಇಡಲಾಗುವುದು' ಎಂದರು.

ಮಹಿಂದ್ರಾದಿಂದ ನಿರ್ವಹಣೆ
'ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಗೆ ಹೊಸ 12 ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿದೆ. ಕೃಷಿ ಯಂತ್ರಧಾರೆ ಯೋಜನೆಯ ಮೂಲಕ ರಾಜ್ಯದ 10 ಲಕ್ಷ ರೈತರನ್ನು ತಲುಪುವ ಉದ್ದೇಶವನ್ನು ಇಲಾಖೆ ಹೊಂದಿದ್ದು, ಬರುವ ವರ್ಷದಲ್ಲಿ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲೂ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗುವುದು' ಎಂದು ಹೇಳಿದರು.












Click it and Unblock the Notifications