ಅನುಮಾನ ತರುವ ಹವಾಮಾನ ವರದಿ, ಇಲಾಖೆ ವಿರುದ್ಧ ದೂರು
ಮುಂಬೈ, ಜುಲೈ 15: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ, ವರದಿಗಳು ಅನುಮಾನ ಹುಟ್ಟಿಸುತ್ತಿವೆ. ಸರಿಯಾದ ಮಾಹಿತಿಯನ್ನು ಪ್ರಕಟಿಸುತ್ತಿಲ್ಲ ಎಂಬ ಆರೋಪವನ್ನು ಮರಾಠವಾಡ ರೈತರು ಮಾಡಿದ್ದಾರೆ.
ಬೀಜ ಹಾಗೂ ರಸಗೊಬ್ಬರ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ವರದಿಗಳನ್ನು ತಿರುಚಿ, ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

'ಹವಾಮಾನ ಇಲಾಖೆಯ ಪುಣೆ ಮತ್ತು ಕೊಲಬಾ ಕೇಂದ್ರಗಳ ಅಧಿಕಾರಿಗಳು, 'ಜೂನ್-ಜುಲೈನಲ್ಲಿ ವಾಡಿಕೆ ಮಳೆಯಾಗುತ್ತದೆ' ಎಂದು ಮುನ್ಸೂಚನೆ ನೀಡಿದ್ದರು. ಅದನ್ನು ನಂಬಿಕೊಂಡು ಇಲ್ಲಿನ ರೈತರು ಉಳುಮೆ ಕಾರ್ಯ ಮುಗಿಸಿ, ಗೊಬ್ಬರವನ್ನೂ ಹಾಕಿ, ಬಿತ್ತನೆಯನ್ನೂ ಮುಗಿಸಿದ್ದಾರೆ. ವಾಡಿಕೆಯಂತೆ ಬೀಳಬೇಕಾಗಿದ್ದ ಮಳೆ ಕೈಕೊಟ್ಟಿದೆ. ಮುನ್ಸೂಚನೆ ವರದಿಯಲ್ಲಿದ್ದಂತೆ ಮೊದಲೆರಡು ದಿನ ಮಳೆ ಸುರಿದಿದ್ದು ಬಿಟ್ಟರೆ ಮತ್ತೆ ಒಣ ಹವೆ ಮುಂದುವರೆದಿದೆ.
ಇಲಾಖೆಯ ಅಧಿಕಾರಿಗಳು ಬೀಜ ಮತ್ತು ಗೊಬ್ಬರ ತಯಾರಕರ ಜತೆ ಕೈಜೋಡಿಸಿ, ನಮ್ಮನ್ನು ವಂಚಿಸಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ' ಎಂದು ರೈತರು ದೂರಿನಲ್ಲಿ ಕೋರಿದ್ದಾರೆ.












Click it and Unblock the Notifications