ಕೃಷಿ ಉತ್ಪನ್ನ ಸಾಗಿಸಲು ತೋಟದ ನಡುವಿನ ಹೊಳೆಗೆ ರೋಪ್ವೇ ನಿರ್ಮಿಸಿದ ಕಾಸರಗೋಡು ಕೃಷಿಕ
ಮಂಗಳೂರು, ಫೆಬ್ರವರಿ 17: ಪ್ರಾಕೃತಿಕವಾಗಿ ಅಗಣಿತ ಸೌಂದರ್ಯವನ್ನು ಹೊಂದಿರುವ ರಾಜ್ಯದ ಕರಾವಳಿ ತೀರದ ಜನರ ಪ್ರಮುಖ ಕೃಷಿ ಅಡಿಕೆ ಬೆಳೆ. ವಾಣಿಜ್ಯ ಬೆಳೆ ಕರಾವಳಿಯ ಲಕ್ಷಾಂತರ ಕೃಷಿಕರ ಜೀವನಾಧಾರವೂ ಹೌದು. ಆದರೆ ಎತ್ತರ-ತಗ್ಗು ಪ್ರದೇಶವನ್ನು ಹೊಂದಿರುವ ಕಾರಣ ಕೃಷಿ ಮಾಡಲಾಗದೇ ಹಲವರು ಸೋತಿದ್ದಾರೆ. ಕೃಷಿ ತೋಟದ ನಡುವೆ ಹೊಳೆ- ನದಿಗಳು ಹರಿಯುದರಿಂದ ಸಾಮಾನು ಸಾಗಾಟ ಮಾಡಲಾಗದೇ ಕೃಷಿಯನ್ನು ಬಿಟ್ಟವರಿದ್ದಾರೆ. ಆದರೆ ನೆರೆಯ ಕೇರಳ ಗಡಿಭಾಗದ ಕಾಸರಗೋಡು ಜಿಲ್ಲೆಯ ಪ್ರಗತಿಪರ ಕೃಷಿಕನೋರ್ವ ಹೊಳೆ ದಾಟಲು ಅದ್ಭುತವಾದ ತಂತ್ರಜ್ಞಾನ ಉಪಯೋಗಿಸಿ ಯಶಸ್ವಿಯಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಪೆರಡಾಲ ಎನ್ನುವ ಗ್ರಾಮ ಗುಡ್ಡ-ತಗ್ಗು ಪ್ರದೇಶಗಳಿಂದ ಕೂಡಿದ ಸ್ಥಳವಾಗಿದ್ದು, ಹೆಚ್ಚಿನ ಕೃಷಿ ಭೂಮಿಯು ಇಲ್ಲಿ ಇಳಿಜಾರು ಪ್ರದೇಶದಲ್ಲಿದೆ. ಪೆರಡಾಲ ವರದಾ ನದಿಯ ಸುತ್ತಮುತ್ತ ಸಂಪೂರ್ಣ ಅಡಕೆ, ತೆಂಗು ಕೃಷಿ ಇದೆ. ಅಲ್ಲಿಂದ ಕೃಷಿಕರು ತಮ್ಮ ಉತ್ಪನ್ನಗಳನ್ನು ಮನೆಗೆ ಸಾಗಿಸಲು ಇಂದಿಗೂ ಹರಸಾಹಸವನ್ನು ಪಡುತ್ತಿದ್ದಾರೆ. ಇಳಿಜಾರು ಪ್ರದೇಶಗಳಿಂದ ಅಡಕೆ, ತೆಂಗಿನಕಾಯಿ ಸಾಗಾಟ ದೊಡ್ಡ ಸಮಸ್ಯೆಯಾಗಿದೆ.

ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬದಿಂದ ಬಂದ ಭೀಮೇಶ್
ಇಂದಿನ ಕಾಲದಲ್ಲಿ ಕೂಲಿಯಾಳುಗಳ ಕೊರತೆ, ವೆಚ್ಚವನ್ನು ಸರಿದೂಗಿಸಲೂ ಕೃಷಿಕರು ಕಷ್ಟಪಡುತ್ತಿದ್ದಾರೆ. ಇಂಥಹುದೇ ಸಮಸ್ಯೆಯ ಸುಳಿಯಲ್ಲಿದ್ದ ಪೆರಡಾಲದ ಮಿಂಚಿನಡ್ಕದಲ್ಲಿ ಪರಂಪರಾಗತವಾಗಿ ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬದಿಂದ ಬಂದ ಭೀಮೇಶ್ ತಮ್ಮ ಪ್ರಯತ್ನದ ಮೂಲಕ ಹೊಳೆಯ ಎರಡೂ ಬದಿಗೆ ಸಾಗಲು ರೋಪ್ವೇ ಟ್ರಾಲಿ ನಿರ್ಮಿಸಿದ್ದಾರೆ.
ಭೀಮೇಶ್ ತಂದೆ ಹಿರಿಯ ಕೃಷಿಕ ಮಿಂಚಿನಡ್ಕ ಕೃಷ್ಣ ಭಟ್ಟರಿಗೆ ಹೊಳೆಯ ಎರಡೂ ಬದಿಯಲ್ಲಿ ಕೃಷಿ ಭೂಮಿ ಇದೆ. ಪ್ರತಿ ವರ್ಷ ಹೊಳೆಗೆ ಅಡ್ಡವಾಗಿ ಅಡಕೆ ಮರದ ಕಾಲು ಸೇತುವೆ ನಿರ್ಮಿಸುತ್ತಿದ್ದರು. ಹೊಳೆಯ ಎರಡೂ ಬದಿಯ ಜನರು ಇದೇ ಸೇತುವೆ ಸಹಾಯದಿಂದ ಸಾಗುತ್ತಿದ್ದರು.

ಸಂಕವಿಲ್ಲದಿದ್ದರೆ ಅತ್ತಿಂದಿತ್ತ ಸಾಗುವುದೇ ಊರಿನ ಸಮಸ್ಯೆ
ಒಂದೆಡೆ ಉದಯಗಿರಿ ಶಾಲೆ, ಇನ್ನೊಂದು ಬದಿಯಲ್ಲಿ ನೀರ್ಚಾಲು, ಕುಂಟಿಕಾನ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು, ತಮ್ಮ ಅವಶ್ಯಕತೆಗಳಿಗೆ ಸಾಗಲು ಸಾರ್ವಜನಿಕರೂ ಇದೇ ದಾರಿಯನ್ನು ಬಳಸಬೇಕಾಗಿದೆ. ಮಳೆಗಾಲದಲ್ಲಿ ಸಂಕವಿಲ್ಲದಿದ್ದರೆ ಅತ್ತಿಂದಿತ್ತ ಸಾಗುವುದೇ ಊರಿನ ಜನರಿಗೆ ಸಮಸ್ಯೆಯಾಗಿತ್ತು. ಈ ಅಡಕೆ ಮರದ ಸೇತುವೆ ಎರಡೂ ಪ್ರದೇಶದ ಜನರಿಗೆ ನೆರವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಊರಿನ ಜನರು ಅಲ್ಲೊಂದು ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಕೇರಳ ಸರಕಾರಕ್ಕೆ ಅದೆಷ್ಟೋ ಬಾರಿ ಮನವಿ ಸಲ್ಲಿಸಿದ್ದರು.
ಆದರೆ ಅದು ಸಾಧ್ಯವಾಗದೇ ಇದ್ದಾಗ ಹೊಳೆಯ ಎರಡೂ ಬದಿಯ ತೋಟಕ್ಕೆ ಹೋಗಿ ಬರಲು ಏನು ಮಾಡಬಹುದು ಎಂಬ ಚಿಂತೆ ಕೃಷ್ಣ ಭಟ್ ಅವರ ಮಗ ಭೀಮೇಶ್ಗೆ ಕಾಡುತ್ತಿತ್ತು. ಕ್ಯಾಂಪ್ಕೋ ಸಂಸ್ಥೆಯ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ ಕೃಷಿ ಮೇಳಕ್ಕೆ ತೆರಳಿದ ಭೀಮೇಶ್ಗೆ ರೋಪ್ವೇ ನಿರ್ಮಾಣ ಮಾಡಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು.

ಸುನಿಲ್ ಬಿ. ಲಕ್ಕುಂಡಿ ಸಲಹೆಯೊಂದಿಗೆ ರೋಪ್ವೇ ನಿರ್ಮಾಣ
ಕೊನೆಗೆ ಅವರು ಇದಕ್ಕಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ 8 ವರ್ಷ ಉಪನ್ಯಾಸಕರಾಗಿ ಅನುಭವವಿರುವ ಶಿವಮೊಗ್ಗ ಮೂಲದ ಸುನಿಲ್ ಬಿ. ಲಕ್ಕುಂಡಿ ಜತೆ ಮಾತನಾಡಿ, ಅವರ ಸಲಹೆಯೊಂದಿಗೆ ರೋಪ್ವೇ ನಿರ್ಮಾಣಕ್ಕೆ ತೊಡಗಿದರು. ಮಂಗಳೂರು ಬಂದರಿನಲ್ಲಿ ಹಡಗಿನ ಉಪಯೋಗಕ್ಕಿರುವ ತುಕ್ಕು ಹಿಡಿಯದಂತಹ ಕಬ್ಬಿಣದ ಕಂಬಗಳು, ರೋಪ್ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ತರಿಸಿಕೊಂಡರು.
ರೋಪ್ವೇಯಲ್ಲಿ ಸಂಚರಿಸಲು ಅನುವಾಗುವ ಮರದ ತೊಟ್ಟಿನ ರೂಪದ ಟ್ರಾಲಿಯನ್ನೂ ಸಿದ್ಧಪಡಿಸಿದರು. ಈ ಮೂಲಕ ಆರಾಮವಾಗಿ ಸುಮಾರು 250 ಕೆಜಿಯಷ್ಟು ವಸ್ತುಗಳನ್ನು ಸಾಗಾಟ ಮಾಡಲಾಗುವ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಇಬ್ಬರು ವ್ಯಕ್ತಿಗಳೂ ಏಕ ಕಾಲದಲ್ಲಿ ಈ ಟ್ರಾಲಿಯಲ್ಲಿ ಕುಳಿತು ಸಾಗಬಹುದು.

60 ಸಾವಿರ ರೂ. ವೆಚ್ಚದಲ್ಲಿ ಈ ರೋಪ್ವೇ ನಿರ್ಮಾಣ
ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಈ ರೋಪ್ವೇ ನಿರ್ಮಾಣವಾಗಿದ್ದು, ತೊಟ್ಟಿಲಿಗೆ ನೈಲಾನ್ ಬಳ್ಳಿಯನ್ನು ಕಟ್ಟಿ ರಾಟೆಯ ಮೂಲಕ ಕುಳಿತಲ್ಲಿಂದಲೇ ಎರಡೂ ಬದಿಗೆ ಸಾಗಬಹುದಾದಂತಹ ವ್ಯವಸ್ಥೆಯನ್ನೂ ಅಳವಡಿಸಿದ್ದಾರೆ. ಅಡಕೆ ಕೊಯ್ಲು ನಡೆಸಿ ತೋಟದಲ್ಲೇ ಅಡಕೆಯನ್ನು ಗೊನೆಯಿಂದ ಬೇರ್ಪಡಿಸಿ ಗೋಣಿ ಚೀಲಗಳಲ್ಲಿ ತುಂಬಿಸಿ ರೋಪ್ವೇ ಮೂಲಕ ಭೀಮೇಶರು ಸಾಗಿಸುತ್ತಿದ್ದಾರೆ. ತೋಟಕ್ಕೆ ಗೊಬ್ಬರ ಸಾಗಾಟಕ್ಕೂ ಇದನ್ನು ಬಳಸುತ್ತಿದ್ದಾರೆ. ಯಾವುದೇ ಕೃಷಿ ಉತ್ಪನ್ನವನ್ನು ತೊಟ್ಟಿಲಿನಲ್ಲಿ ಇಟ್ಟು ಹಗ್ಗವನ್ನು ಎಳೆಯುವುದು ಅಥವಾ ಅಳವಡಿಸಲಾದ ಚಕ್ರವನ್ನು ತಿರುಗಿಸಿದರೆ ಅಲ್ಲಿಂದ ಮುಂದಕ್ಕೆ ಸರಾಗವಾಗಿ ಟ್ರಾಲಿ ಓಡಾಡುತ್ತದೆ.
ಪ್ರತೀ ಮಳೆಗಾಲಕ್ಕೂ ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ಹಣ ವ್ಯಯಿಸಿ ಅಡಿಕೆ ಸೇತುವೆ ಮಾಡಲಾಗುತ್ತಿತ್ತು. ಆದರೆ ಹೊಳೆಯಲ್ಲಿ ನೀರು ಜಾಸ್ತಿ ಬಂದಲ್ಲಿ ಒಂದೇ ಮಳೆಗೆ ಸೇತುವೆ ಕೊಚ್ಚಿ ಹೋಗುತ್ತದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಈ ಹೊಳೆಗೆ ಅಲ್ಲಲ್ಲಿ ಕಟ್ಟಗಳನ್ನು ಕಟ್ಟುವ ಕಾರಣ ಬೇಸಿಗೆಯಲ್ಲೂ ಆಳೆತ್ತರದಲ್ಲಿ ನೀರು ಸಂಗ್ರಹವಾಗುವುದರಿಂದ ತೋಟದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಅಸಾಧ್ಯವಾಗಿತ್ತು.

ಮಳೆಗಾಲದಲ್ಲಿ ಎಲ್ಲರಿಗೂ ಅನುಕೂಲ
ಆದರೆ ಇದೀಗ ಈ ರೋಪ್ವೇ ನಿಂದಾಗಿ ಕೆಲಸವೆಲ್ಲಾ ಸುಲಭವಾಗಿದೆ. ಅಲ್ಲದೆ ಗ್ರಾಮಸ್ಥರೂ ಹೊಳೆಯ ಇನ್ನೊಂದು ಕಡೆಗೆ ತೆರಳಲು ವ್ಯಯಿಸಬೇಕಾದ ಸಮಯ ಹಾಗೂ ಖರ್ಚನ್ನೂ ಈ ರೋಪ್ವೇ ಉಳಿಸಿದೆ.
ಈ ರೋಪ್ವೇ ತಯಾರಿಕೆಗಾಗಿ ಮೆಕಾನಿಕಲ್ ವಿಭಾಗದಲ್ಲಿ 8 ವರ್ಷ ಉಪನ್ಯಾಸಕರಾಗಿ ಅನುಭವವಿರುವ ಶಿವಮೊಗ್ಗ ಮೂಲದ ಸುನೀಲ್ ಬಿ.ಲಕ್ಕುಂಡಿ ಅವರ ಸಲಹೆಯೊಂದಿಗೆ ರೋಪ್ವೇ ನಿರ್ಮಿಸಿದ್ದಾರೆ. ಇಂಜಿನಿಯರಿಂಗ್ ಪೂರೈಸಿರುವ ಬದಿಯಡ್ಕ ಸಮೀಪದ ಮಾರ್ಪನಡದ ದೀಪಕ್ ಕೃಷ್ಣ, ಏತಡ್ಕದ ಮಧುಪ್ರಕಾಶ್ ನೆರವಾಗಿದ್ದಾರೆ. ಈಗ ರೋಪ್ವೇ ಸಿದ್ಧವಾಗಿದ್ದು, 82 ವರ್ಷ ಪ್ರಾಯದ ಕೃಷ್ಣ ಭಟ್ಟರೂ ಸ್ವತಃ ಯಾರ ಸಹಾಯವೂ ಇಲ್ಲದೆ ಇದರಲ್ಲಿ ಪ್ರಯಾಣಿಸಬಲ್ಲರು. ಇಬ್ಬರು ವಯಸ್ಕರಿಗೆ ಇದರಲ್ಲಿ ಸುಲಭವಾಗಿ ಆಚೀಚೆ ಸಾಗಬಹುದು. ಮಳೆಗಾಲದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications