'ನಾವೇ ನೀರಿಲ್ಲದೆ ಸೋತಿದ್ದೇವೆ, ಕೊಡುವುದೆಲ್ಲಿಂದ?'
ಮಂಡ್ಯ, ಮೇ 28: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದ ಹಿನ್ನೆಲೆ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಈ ಆದೇಶ ಖಂಡಿಸಿ, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತರು ಧರಣಿ ನಡೆಸಿದರು. ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ರೈತ ಸಂಘದ ಕಾರ್ಯಕರ್ತರು ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪಾಂಡವಪುರದಲ್ಲಿ ರೈತಸಂಘದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಮಗೇ ನೀರಿಲ್ಲ ಇನ್ನು ತಮಿಳುನಾಡಿಗೆ ಎಲ್ಲಿಂದ ಬಿಡೋಣ. ಅಲ್ಲದೇ ತಕ್ಷಣ ನಾಲೆಗಳಿಗೆ ನೀರು ಬಿಡಬೇಕು. ತಮಿಳುನಾಡಿಗೆ ಯಾವ ಕಾರಣಕ್ಕೂ ನೀರು ಬಿಡಬಾರದು ಎಂದು ಆಗ್ರಹಿಸಿದರು.

ಇನ್ನು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಡಾ. ಜಿ.ಮಾದೇಗೌಡ ಮಾತನಾಡಿ, ನೀರಿದ್ದರೆ ಅಲ್ಲವಾ ತಮಿಳುನಾಡಿಗೆ ಬಿಡೋದು. ಪ್ರಾಧಿಕಾರವೇ ಬಂದು ನೀರು ಬಿಡಿಸಿಕೊಳ್ಳಲಿ. ನಮಗೇ ಕುಡಿಯೋಕೆ ನೀರಿಲ್ಲ. ರಾಜ್ಯದಲ್ಲಿ ಜನರೆಲ್ಲ ಗುಳೆ ಹೋಗುತ್ತಿದ್ದಾರೆ. ಸ್ವಲ್ಪವೇ ನೀರಿದೆ. ಸರ್ಕಾರ ಯಾವ ಕಾರಣಕ್ಕೂ ನೀರು ಬಿಡಬಾರದು. ಬಿಟ್ಟರೆ ಜನರು ಧಂಗೆ ಏಳಬೇಕಾಗುತ್ತದೆ. ನಮ್ಮ ಬೆಳೆಗಳಿಗೇ ನೀರು ಸಿಗುತ್ತಿಲ್ಲ. ಈ ಮಧ್ಯ ಇಂಥ ಆದೇಶ ಬಂದಿದ್ದು ಯಾಕೆಂದು ಅರ್ಥವಾಗುತ್ತಿಲ್ಲ. ನೀರು ಬಿಟ್ಟಿದ್ದೇ ಆದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡ ಕೆ.ಎಸ್.ಮಂಜುಂಡೇಗೌಡ ಮಾತನಾಡಿ, ಈ ದೇಶದಲ್ಲಿ ರಾಷ್ಟ್ರೀಯ ಜಲನೀತಿಯೇ ಇಲ್ಲ. ನೀರಿನ ವಿಚಾರದಲ್ಲಿ ಈಗಾಗಲೇ ಮೋಸ ಮಾಡಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆಯಿಂದಲೇ ಕರ್ನಾಟಕಕ್ಕೆ ಅನ್ಯಾಯ ಪ್ರಾರಂಭವಾಯಿತು. 14 ಟಿಎಂಸಿ ನೀರು ಒಳಹರಿವು ಬಂದ್ರೆ ನೀರು ಬಿಡಬೇಕು ಎಂದು ನ್ಯಾಯಾಲಯ ಹೇಳಿದೆ. ಅಷ್ಟು ಪ್ರಮಾಣದಲ್ಲಿ ನೀರು ಬಂದರೆ ಕೊಡದೆ ಇರಲು ನಾವೇನೂ ಮುಠ್ಠಾಳರಲ್ಲ. ಆದರೆ, ಈಗ ಮಂಡ್ಯದ ಜನರೇ ನೀರಿಲ್ಲದೆ ಸೋತಿದ್ದಾರೆ. ಖಂಡಿತ ಆದೇಶದ ವಿರುದ್ಧ ನಾವು ಧ್ವನಿ ಎತ್ತುತ್ತೇವೆ ಎಂದು ಹೇಳಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಶಂಭುನಹಳ್ಳಿ ಸುರೇಶ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಪು ಪಾಲಿಸುವುದು ಅಸಾಧ್ಯ. ನಿರ್ವಹಣಾ ಮಂಡಳಿಯ ತೀರ್ಪು ಅವೈಜ್ಞಾನಿಕ. ಸದ್ಯಕ್ಕೆ ನಮ್ಮಲ್ಲಿಯೇ ಕುಡಿಯುವ ನೀರಿಗೂ ಬರ ಇದೆ. ಜನ ಜಾನುವಾರುಗಳು ಕುಡಿಯುವ ನೀರಿಲ್ಲದೆ ಕಷ್ಟ ಪಡುತ್ತಿದೆ. ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ರಾಜ್ಯ ಸರ್ಕಾರ ಕೂಡ ನೀರು ಬಿಡುವ ಮನಸ್ಸು ಮಾಡಬಾರದು. ಒಂದು ವೇಳೆ ನೀರು ಬಿಟ್ಟಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ರಾಜ್ಯದ ಎಲ್ಲಾ ಸಂಸದರು ಮತ್ತು ರಾಜ್ಯ ಸರ್ಕಾರ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications