ನಾಲ್ಕು ದಶಕದಿಂದ ವಿದ್ಯುತ್ ಸಂಪರ್ಕ ನೀಡದ ಸರಕಾರ; ರೈತ ಆತ್ಮಹತ್ಯೆ ಯತ್ನ
ಬುಲ್ಧಾನ (ಮಹಾರಾಷ್ಟ್ರ), ಜೂನ್ 18: 1980ರಿಂದಲೂ ಕೃಷಿ ವಿದ್ಯುತ್ ಸಂಪರ್ಕ ನೀಡಲು ನಿರಾಕರಿಸುತ್ತಾ ಬರುತ್ತಿರುವ ಧೋರಣೆಯಿಂದ ರೋಸತ್ತ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಾರಾಷ್ಟ್ರದ ಇಂಧನ ಸಚಿವ ಚಂದ್ರಶೇಖರ್ ಬವನ್ ಕುಳೆ ಎದುರೇ ವಿಷ ಸೇವಿಸಿ, ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರೈತರಾದ ಈಶ್ವರ್ ಖರಾಟೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಶನಿವಾರದಂದು (ಜೂನ್ 15) ಆತ್ಮಹತ್ಯೆಗೆ ಯತ್ನಿಸಿದೆ. ನಾಲ್ಕು ದಶಕದ ಹತ್ತಿರ ಬಂತು, ಈಗಲೂ ವಿದ್ಯುತ್ ಸಂಪರ್ಕ ನೀಡದಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಎಚ್ಚರಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದೆ ಎಂದಿದ್ದಾರೆ.
ನನ್ನ ಅಜ್ಜ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ಅರ್ಜಿ ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಕೊನೆಗೆ ಇಂಥದ್ದೊಂದು ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಈಶ್ವರ್ ಹೇಳಿದ್ದಾರೆ. ಆದರೆ ಅವರ ಮಾತನ್ನು ತಳ್ಳಿ ಹಾಕಿರುವ ಮಹಾರಾಷ್ಟ್ರ ರಾಜ್ಯ ವಿದ್ಯುತ್ ನಿಗಮದ ವಕ್ತಾರರು, ನೀತಿ- ನಿಯಮಗಳನ್ನು ಪೂರೈಸಿದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಿದ್ಧ ಎಂದಿದ್ದಾರೆ.

ಮತ್ತೆ ಮತ್ತೆ ನೆನಪಿನೋಲೆ ಕಳಿಸಿದ ನಂತರವು ಸರಕಾರಕ್ಕೆ ಕಟ್ಟಬೇಕಾದ ಹಣವನ್ನು ಪಾವತಿಸಿಲ್ಲ. ನಮ್ಮ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಾಗೂ ಇತರ ಅಧಿಕಾರಿಗಳು ರೈತರನ್ನು ಆಸ್ಪತ್ರೆಯಲ್ಲಿ ಭೇಟಿ ಆಗಿದ್ದಾರೆ. ನಿಗದಿತ ಶುಲ್ಕ ಪಾವತಿಸಿದರೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿಯೂ ಹೇಳಿರುವುದಾಗಿ ವಕ್ತಾರರು ಮಾಹಿತಿ ನೀಡಿದ್ದಾರೆ.
ವಡೋದರಾ ಹಳ್ಳಿಯ ಈಶ್ವರ್ ಖರಾಟೆ ಕೃಷಿ ಎಕ್ಸ್ ಪೋನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ಎಕ್ಸ್ ಪೋದಲ್ಲಿ ಸಚಿವರೂ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.












Click it and Unblock the Notifications