ರಾಜಕೀಯ ಹಾಕ್ಯಾಟದಲ್ಲಿ ಹುಗಿದು ಹೋಗದಿರಲಿ ರೈತರ ಹೋರಾಟ

ಬೆಂಗಳೂರು, ಡಿಸೆಂಬರ್ 27 : ರೈತರ ಕೋಪ ದವಡೆಗೆ ಮೂಲ. ದೇಶಕ್ಕೆ ಅನ್ನ ಕೊಡುವ ಕೈಂಕರ್ಯದಲ್ಲಿ ತೊಡಗಿರುವ ಅನ್ನದಾತನನ್ನು ಕೆಣಕಿದರೆ, ನಿರ್ಲಕ್ಷಿಸಿದರೆ, ದುರುಪಯೋಗಪಡಿಸಿಕೊಂಡರೆ, ತುಳಿದುಹಾಕಲು ಯತ್ನಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ!

ಉಳುಮೆ ಮಾಡುವ ರೈತ ಅನಿವಾರ್ಯ ಕಾರಣದಿಂದ ಗುಳೆ ಹೋಗುತ್ತಿದ್ದಾನೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ, ಸೂರಿಲ್ಲದಿದ್ದರೆ ಹೋಯ್ತು ಮೇವಿಲ್ಲದಿದ್ದರೆ ಸಾವಿನ ದಾರಿ ಹಿಡಿಯುತ್ತಾನೆ, ನೀರಿಗಾಗಿ ಹೋರಾಡುತ್ತಿದ್ದಾನೆ, ಸುಗ್ಗಿಯ ಕಾಲದಲ್ಲಿ ಉಳುಮೆ ಮಾಡುವುದು ಬಿಟ್ಟು ಬೀದಿಗೆ ಬಿದ್ದು ನೀರಿಗಾಗಿ ಅಂಗಲಾಚುತ್ತಿದ್ದಾನೆ.

ರೈತರ ಗೋಳಿನ ಕಥೆ ಇತಿಹಾಸದ ಪುಟಗಳಲ್ಲಿ ರಕ್ತದಲ್ಲಿ ಬರೆಯಲಾಗಿದೆ. ಬೀಜ ಕೇಳಿದವನ ಮೇಲೆ ಗುಂಡಿನ ಮಳೆ ಸುರಿಸಲಾಗಿದೆ, ನಾನಾ ಭರವಸೆಗಳನ್ನು ನೀಡುತ್ತೇವೆಂದು ಅಮಾಯಕ ರೈತರನ್ನು ನಂಬಿಸಿ ವೋಟುಗಳನ್ನು ಕಿತ್ತುಕೊಳ್ಳಲಾಗಿದೆ. ಇದೀಗ ರೈತ ರಾಜಕೀಯ ಪಗಡೆಯ ದಾಳವಾಗಿದ್ದಾನೆ.

ರೈತರು ಎಷ್ಟು ದಿನವಂತ ಸಹಿಸಿಕೊಳ್ಳುತ್ತಾರೆ? ಅವರ ಸಹನೆಯ ಕಟ್ಟೆಯೊಡೆದಿದೆ. ಬೆವರು ಸುರಿಯುವ ಮುಖದಲ್ಲಿ ಕಣ್ಣೀರು ಬರುತ್ತಿದೆ. ಮಹದಾಯಿ ನೀರಿಗಾಗಿ ಎರಡೂವರೆ ವರ್ಷಗಳಿಂದ ಬೀದಿಯಲ್ಲಿ ಮುಷ್ಕರ ಹೂಡಿರುವ ರೈತರು ಇನ್ನು ಸಾಧ್ಯವೇ ಇಲ್ಲ ಎಂಬಂತೆ ತಿರುಗಿಬಿದ್ದಿದ್ದಾರೆ.

ರೈತರು ಮಾಡುತ್ತಿರುವ ಹೋರಾಟ ಕೇವಲ ಒಂದು ಪಕ್ಷದ ವಿರುದ್ಧವಲ್ಲ, ಯಾವುದೇ ನಾಯಕನ ವಿರುದ್ಧವಲ್ಲ, ಯಾವುದೇ ರಾಜ್ಯದ ವಿರುದ್ಧವೂ ಅಲ್ಲ, ಕೇಂದ್ರದ ವಿರುದ್ಧವೂ ಅಲ್ಲ, ಪ್ರಧಾನಿಯ ವಿರುದ್ಧವೂ ಅಲ್ಲ. ರೈತರ ಹೋರಾಟವಿರುವುದು ರೈತರ ಬಗ್ಗೆ ಕನಿಷ್ಠ ಕಾಳಜಿಯಿಲ್ಲದ ದರಿದ್ರ ರಾಜಕೀಯ ವ್ಯವಸ್ಥೆಯ ವಿರುದ್ಧ.

ಬರಗಾಲದ ಬಲೆಗೆ ಬಿದ್ದಿದ್ದ ಗ್ರಾಮಗಳಿಗೆ ನೀರು

ಬರಗಾಲದ ಬಲೆಗೆ ಬಿದ್ದಿದ್ದ ಗ್ರಾಮಗಳಿಗೆ ನೀರು

ಮಹದಾಯಿ ನೀರಿಗಾಗಿ ಮತ್ತು ಕಳಸಾ ಬಂಡೂರಿ ನಾಲೆ ನಿರ್ಮಾಣಕ್ಕಾಗಿ ಹೋರಾಟ ಆರಂಭವಾದದ್ದು ಜುಲೈ 16, 2015ರಂದು. ಬರಗಾಲದಿಂದ ಕುದಿಯುತ್ತಿದ್ದ ಗದಗ ಜಿಲ್ಲೆಯ ನರಗುಂದ ಮತ್ತು ಧಾರವಾಡ ಜಿಲ್ಲೆಯ ನವಲಗುಂದ ಗ್ರಾಮಗಳಿಗೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ, ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಬೈಲಹೊಂಗಲ ತಾಲೂಕುಗಳಿಗೆ ನೀರು ಹರಿಸಬೇಕೆಂದು ಆರಂಭವಾದ ಹೋರಾಟವದು.

ಸಣ್ಣಗೆ ಉರಿಯುತ್ತಿದ್ದ ಜ್ವಾಲೆಗೆ ಯಡಿಯೂರಪ್ಪ ತುಪ್ಪ

ಸಣ್ಣಗೆ ಉರಿಯುತ್ತಿದ್ದ ಜ್ವಾಲೆಗೆ ಯಡಿಯೂರಪ್ಪ ತುಪ್ಪ

ಎರಡೂವರೆ ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತೆ ನಿಗಿನಿಗಿ ಉರಿಯುತ್ತಿದ್ದ ರೈತರ ಆಕ್ರೋಶದ ಜ್ವಾಲೆಗೆ, ಯಾವಾಗ ಯಡಿಯೂರಪ್ಪನವರು ರಕ್ತ ಹರಿಸಿ ನೀರನ್ನು ತರುತ್ತೇನೆ ಎಂದು ಮಾತು ತುಪ್ಪ ಸುರಿದಂತಾಗಿದೆ. ಉತ್ತರ ಕರ್ನಾಟಕದ ರೈತರನ್ನು ಮೆಚ್ಚಿಸಲು, ರೈತರ ಮತಗಳನ್ನು ಸೆಳೆಯಲು, ಪಕ್ಷದ ಹಿರಿಯ ನಾಯಕರನ್ನು ಸೆಳೆಯಲು, ಯಡಿಯೂರಪ್ಪನವರು ಆಡಿರುವ ಮಾತುಗಳಿಂದಾಗಿ ಜ್ವಾಲೆ ಕೆನ್ನಾಲಗೆಂತೆ ಚಿಮ್ಮುತ್ತಿವೆ.

ಯಡಿಯೂರಪ್ಪ ರೈತರ ದಾರಿ ತಪ್ಪಿಸುತ್ತಿದ್ದಾರೆ

ಯಡಿಯೂರಪ್ಪ ರೈತರ ದಾರಿ ತಪ್ಪಿಸುತ್ತಿದ್ದಾರೆ

ಇದೇ ಸರಿಯಾದ ಸಮಯವೆಂದರಿತ ಸಿದ್ದರಾಮಯ್ಯನವರು, ಯಡಿಯೂರಪ್ಪ ರೈತರ ದಾರಿ ತಪ್ಪಿಸುತ್ತಿದ್ದಾರೆ, ರೈತರಿಗೆ ಸುಳ್ಳು ಹೇಳುತ್ತಿದ್ದಾರೆ ಎಂಬ ಹೇಳಿಕೆ ತಕ್ಷಣ ನೀಡಿ, ಆಗಿರುವ ಗಾಯದ ಮೇಲೆ ಉಪ್ಪು ಸುರಿದರೇ ಹೊರತು, ಮಹದಾಯಿ ವಿವಾದವನ್ನು ಚುನಾವಣೆ ಪ್ರಕ್ರಿಯೆ ಆರಂಭವಾಗುವುದರೊಳಗಾಗಿ ಬಗೆಹರಿಸುವುದಾಗಿ ಹೇಳಿಕೆ ನೀಡಲಿಲ್ಲ. ರಾಜ್ಯದ ರೈತರ ವಿಶ್ವಾಸವನ್ನು ಗಳಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿರಲಿಕ್ಕಿಲ್ಲ.

'ರಾಜಕಾರಣ'ದ ಒಂದು ಭಾಗ

'ರಾಜಕಾರಣ'ದ ಒಂದು ಭಾಗ

ಪ್ರತಿಭಟನಾ ರೈತರಿಗೆ ಇತರ ಪಕ್ಷಗಳ ನಾಯಕರು ಬಂದು ಅನ್ನಾಹಾರ ನೀಡುವುದು, ಸಂತೈಸುವುದು, ಅವರಿಗೆ ವಸತಿ ಕಲ್ಪಿಸುವುದು, ಅವರ ಅವಗಾಹನೆಯನ್ನು ಆಲಿಸುವುದು, ಅವರು ಮತ್ತಷ್ಟು ಕೆರಳುವಂತೆ ಹೇಳಿಕೆಗಳನ್ನು ನೀಡುವುದು 'ರಾಜಕಾರಣ'ದ ಒಂದು ಭಾಗವಾಗಿ ಕಾಣುತ್ತಿದೆಯೇ ಹೊರತು, ಮಹದಾಯಿ ವಿವಾದ ಬಗೆಹರಿಸುವ, ರೈತರಲ್ಲಿ ವಿಶ್ವಾಸ ತುಂಬುವ ಯಾವ ಪ್ರಯತ್ನವಾಗಿಯೂ ಕಾಣಿಸುತ್ತಿಲ್ಲ.

ಅವರ ಮೇಲೆ ಇವರು, ಇವರ ಮೇಲೆ ಅವರು!

ಅವರ ಮೇಲೆ ಇವರು, ಇವರ ಮೇಲೆ ಅವರು!

ಕಾಂಗ್ರೆಸ್ ಪಕ್ಷದವರು ಬಿಜೆಪಿಯವರ ವಿರುದ್ಧ ದೂರಿನ ಸುರಿಮಳೆ ಸುರಿಸುತ್ತಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ಧುರೀಣರನ್ನೇ ಈ ಎಲ್ಲ ವಿವಾದದ ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಜಾತ್ಯತೀತ ಜನತಾದಳದವರು ಈ ಎರಡೂ ಪಕ್ಷಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಯಾರಿಗೆ ಯಾರು ಬೆಂಬಲಿಸುತ್ತಿದ್ದಾರೆ, ರೈತ ಯಾರನ್ನು ನಂಬಬೇಕು ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದಾನೆ.

ಪಕ್ಷಾತೀತವಾಗಬೇಕಾಗಿದ್ದ ಹೋರಾಟ

ಪಕ್ಷಾತೀತವಾಗಬೇಕಾಗಿದ್ದ ಹೋರಾಟ

ರೈತರಿಗಾಗಿ ಆರಂಭವಾಗಿರುವ ಈ ಹೋರಾಟ ಪಕ್ಷಾತೀತವಾದ ಹೋರಾಟವಾಗಬೇಕಿತ್ತು. ಎಲ್ಲ ನಾಯಕರು ಪಕ್ಷಭೇದ ಮರೆತು, ಉತ್ತರ ಕರ್ನಾಟಕದ ರೈತರ ಪರವಾಗಿ ಬೀದಿಗಿಳಿದು ಹೋರಾಟ ಮಾಡಬೇಕಿತ್ತು. ಸರ್ವಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಪ್ರಧಾನಿಯನ್ನು ಭೇಟಿ ಮಾಡಿ, ಅವರ ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಬೇಕಿತ್ತು. ಆದರೆ, ಆ ಯಾವ ಪ್ರಯತ್ನಗಳು ಇಲ್ಲಿ ಕಾಣಿಸುತ್ತಿಲ್ಲ. ಇಲ್ಲಿ ಕಾಣುತ್ತಿರುವುದು ಅವರ ಮೇಲೆ ವಿಶ್ವಾಸ ಹೋದರೆ ನಮಗೆ ಮತ ಗ್ಯಾರಂಟಿ ಎಂಬ ಹುನ್ನಾರ.

ಸಂಕ್ರಾಂತಿಗೆ ಇನ್ನು ಕೆಲವೇ ದಿನಗಳಿವೆ

ಸಂಕ್ರಾಂತಿಗೆ ಇನ್ನು ಕೆಲವೇ ದಿನಗಳಿವೆ

ಸಂಕ್ರಾಂತಿಗೆ ಇನ್ನು ಕೆಲವೇ ದಿನಗಳಿವೆ. ರೈತರಿಗೆ ಬಹುದೊಡ್ಡ ಹಬ್ಬವದು. ಬೆಳೆದ ದವಸಧಾನ್ಯಗಳನ್ನು ಪೇರಿಸಿ ಭೂತಾಯಿಯನ್ನು ಪೂಜಿಸುವ ಕಾಲ. ಇಂಥ ಸಮಯದಲ್ಲಿ ರೈತ ಬೆಳೆಗಳನ್ನು ಕಾಪಾಡುವುದನ್ನು ಬಿಟ್ಟು ಹೆಂಡತಿ ಮಕ್ಕಳ ಸಮೇತ ಬೆಂಗಳೂರಿಗೆ ಬಂದು ಹೋರಾಟ ಮಾಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣ ಮಧ್ಯ ಪ್ರವೇಶಿಸಿ ಸಂಧಾನ ಮಾಡದಿದ್ದರೆ, ಮಹದಾಯಿ ವಿವಾದಕ್ಕೆ ಅಂತ್ಯ ಹಾಡದಿದ್ದರೆ, ರೈತ ರೈತನಾಗಿ ಉಳಿಯುವುದಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+