ಮಡಿಕೇರಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ರಂಪಾಟ
ಮಡಿಕೇರಿ, ಜುಲೈ 07 : ಮೊದಲೆಲ್ಲ ಬೇಸಿಗೆಯಲ್ಲಿ ಮಾತ್ರ ಕಾಡಾನೆಗಳು ನೀರು, ಆಹಾರ ಹುಡುಕಿಕೊಂಡು ನಾಡಿನತ್ತ ಬರುತ್ತಿದ್ದವು. ಆದರೆ, ಈಗ ಮಳೆಗಾಲದಲ್ಲೂ ಗದ್ದೆ, ತೋಟಕ್ಕೆ ಆನೆಗಳು ಲಗ್ಗೆಯಿಡುತ್ತಿರುವುದರಿಂದ ಕೊಡಗಿನ ಬೆಳೆಗಾರರು ಆತಂಕಗೊಂಡಿದ್ದಾರೆ.
ಕಾಫಿತೋಟದಲ್ಲಿ ವಾರ ಗಟ್ಟಲೆ ಬೀಡು ಬಿಡುತ್ತಿರುವ ಆನೆಗಳಿಂದಾಗಿ ಕಾರ್ಮಿಕರು ತೋಟದತ್ತ ಸುಳಿಯಲು ಭಯಪಡುತ್ತಿದ್ದಾರೆ. ಇದರಿಂದ ಯಾವುದೇ ರೀತಿಯ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. [ಅಪಹರಿಸಲಾಗಿದ್ದ ಕಾಡಾನೆ ದಂತ ಪತ್ತೆ!]

ಇತ್ತೀಚೆಗಿನ ವರ್ಷಗಳಲ್ಲಿ ಬಿದಿರು ನಾಶವಾಗಿದ್ದು ಅವು ಮತ್ತೆ ಬೆಳೆದು ಕಾಡಾನೆಗಳಿಗೆ ಹೊಟ್ಟೆ ತುಂಬುವಷ್ಟು ಆಹಾರ ಸಿಗುವ ತನಕ ಆನೆಗಳ ಹಾವಳಿ ತಪ್ಪಿದಲ್ಲ ಎಂಬುದು ಅನುಭವಸ್ಥರ ಅಭಿಪ್ರಾಯ. ಕಾಫಿ ತೋಟಗಳಲ್ಲಿ ಹಲಸಿನ ಮರಗಳಿದ್ದು ಅವುಗಳು ಬಿಡುವ ಹಣ್ಣುಗಳು ಕೊಳೆತು ವಾಸನೆ ಬರುತ್ತವೆ. ಈ ಹಣ್ಣಿನ ವಾಸನೆಯ ಜಾಡು ಹಿಡಿದು ಕಾಡಾನೆಗಳು ಬರುತ್ತಿವೆ. [ದುಬಾರೆ ಅರಣ್ಯ ಪ್ರವಾಸಿಗರಿಗೆ ಸ್ವರ್ಗ, ಗಿರಿಜನರಿಗೆ ನರಕ]
ಬಹಳಷ್ಟು ತೋಟಗಳಲ್ಲಿ ಹಲಸನ್ನು ಮಿಡಿಯಲ್ಲೇ ಕಿತ್ತು ಹಾಕಲಾಗುತ್ತದೆ. ಆದರೂ ಅಳಿದುಳಿದ ಹಣ್ಣನ್ನು ಅರಸಿಕೊಂಡು ಕಾಡಾನೆಗಳು ನಾಡಿನತ್ತ ಬರುತ್ತಿವೆ. ಹೀಗೆ ಬರುವ ಕಾಡಾನೆಗಳು ತೋಟಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಕಾಫಿ, ಬಾಳೆ ಸೇರಿದಂತೆ ಫಸಲು ಬರುವ ಗಿಡಗಳನ್ನು ನಾಶ ಮಾಡುತ್ತವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. [ಹುಣಸೂರಿನಲ್ಲಿ ಕಾಡಾನೆಗಳ ಪರೇಡ್, ಜನರಲ್ಲಿ ಆತಂಕ]

ಕಾಡಾನೆಗಳು ಆನೆಕಾಡು ಅರಣ್ಯ ಪ್ರದೇಶದಿಂದ ಆಗಾಗ್ಗೆ ಸುತ್ತಮುತ್ತಲಿನ ಕಾಫಿತೋಟಗಳಿಗೆ ಲಗ್ಗೆಯಿಡುವುದು ಮಾಮೂಲಿಯಾಗಿದೆ. ಇದೀಗ ಸುಂಟಿಕೊಪ್ಪ ಸಮೀಪದ ಎಮ್ಮೆಗುಂಡಿ, ನೆಟ್ಲಿ ಎ ಕಕ್ಕುಳಿ ತೋಟದಲ್ಲಿ ಒಂದು ಮರಿ ಆನೆ ಸೇರಿದಂತೆ 5 ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ.
ಸುಂಟಿಕೊಪ್ಪ ಮಾದಾಪುರ ರಾಜ್ಯ ಹೆದ್ದಾರಿಯ ಪನ್ಯಾದ ಮಾರಿಯಮ್ಮ ದೇವಾಲಯದ ಬಳಿಯ ಕಾಫಿ ತೋಟದಲ್ಲಿ ಐದು ಕಾಡಾನೆಗಳು ಅಡ್ಡಾಡುತ್ತಿದ್ದು. ಇವುಗಳನ್ನು ಕಂಡ ವಾಹನ ಚಾಲಕರು ತಮ್ಮ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿದ್ದಾರೆ.

ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವುದರಿಂದ ಯಾವಾಗ ಎಲ್ಲಿಗೆ ಹೋಗುತ್ತವೆ? ಎಂಬುದೇ ಅರಿಯದಾಗಿದೆ. ಮಳೆಯೂ ಸುರಿಯುತ್ತಿರುವುದರಿಂದ ಅವುಗಳನ್ನು ಕಾಫಿತೋಟಗಳಿಂದ ಕಾಡಿನತ್ತ ಅಟ್ಟುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ, ಕಾಫಿ ತೋಟಗಳ ನಡುವೆ ಇರುವ ಕಾರ್ಮಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾಗಿದೆ.












Click it and Unblock the Notifications