ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಟ್ಯಾಂತರ ರೂ, ಭ್ರಷ್ಟಾಚಾರ
ದಾವಣಗೆರೆ, ಜನವರಿ 13: ರಾಜ್ಯದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 2015 ರಿಂದ 2019 ರವರೆಗೆ ಭಾರೀ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಮುಕ್ತ ತನಿಖೆ ನಡೆಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ್ ನಾಯ್ಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮಾಹಿತಿ ನೀಡಿ 22 ದಿನಗಳಾಗಿದೆ. ಆದರೂ ಇಲ್ಲಿಯವರೆಗೂ ಯಾವುದೇ ತನಿಖೆ ನಡೆಸದಿರುವುದು ದುರಂತ. ಅಧಿಕಾರಿಗಳಿಂದ ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಸುಮಾರು ನೂರಾರು ಕೋಟಿ ರುಪಾಯಿ ಹಗರಣ ನಡೆದಿದೆ ಎಂದು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆ ಬಾವಿ ಕೊರೆಯುವಲ್ಲಿ ಒಂದೇ ಕುಟುಂಬಕ್ಕೆ 2-3 ಯೋಜನೆಗಳನ್ನು ನೀಡಲಾಗಿದೆ. ಕೊಳವೆ ಬಾವಿಯಲ್ಲಿ ನೀರು ಬರದಿದ್ದರೂ ಸಹ, ಸುಳ್ಳು ವರದಿ ನೀಡಿ ಅಧಿಕಾರಿಗಳು ಮತ್ತು ಏಜೆನ್ಸಿಗಳು ಬಿಲ್ ಪಡೆದಿದ್ದಾರೆ ಎಂದು ಆರೋಪಿಸಿದರು.

ಗುಣಮಟ್ಟವಿಲ್ಲದ ಕೇಸಿಂಗ್ ಪೈಪ್ ಹಾಕಲಾಗಿದೆ. ಅದು ಸಹ ಅತೀ ಹೆಚ್ಚು ಆಳಕ್ಕೆ ಪೈಪ್ ಹಾಕಿದ್ದೇವೆ ಎಂದು ಸುಳ್ಳು ವರದಿ ನೀಡಿ ಬಿಲ್ ಮಾಡಲಾಗಿದೆ. ಇನ್ನು ಫಲಾನುಭವಿಗಳು ಕೊರೆಯಿಸಿರುವ ಎಲ್ಲಾ ಕೊಳವೆ ಬಾವಿಗಳಲ್ಲಿ ಆಯಾ ಫಲಾನುಭವಿಗಳೇ ಮೋಟಾರ್ ಪಂಪ್ ಗಳನ್ನು ಸ್ವಂತವಾಗಿ ಹಾಕಿಸಿಕೊಂಡಿದ್ದಾರೆ. ಆದರೆ ಏಜೆನ್ಸಿ ಮತ್ತು ಅಧಿಕಾರಿಗಳು ಮಾತ್ರ ಬೋಗಸ್ ಬಿಲ್ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂದು ಚಿನ್ನಸಮುದ್ರ ಶೇಖರ್ ನಾಯ್ಕ್ ಹೇಳಿದರು.
2015 ರಿಂದ 2019 ರವರೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಡ್ರಿಲಿಂಗ್ ಏಜೆನ್ಸಿ ಹಾಗೂ ಮೋಟಾರ್ ಪಂಪ್ ಸಾಮಗ್ರಿಗಳನ್ನು ಸರಬರಾಜು ಮಾಡಿದ ಎಲ್ಲಾ ಏಜೆನ್ಸಿಗಳಿಗೆ ಯಾವುದೇ ರೀತಿಯ ಬಿಲ್ ನೀಡಬಾರದು. ಅವರಿಗೆ ಹೊಸ ಕೆಲಸ ಕೊಡಬಾರದು ಎಂದು ಆಗ್ರಹಿಸಿದರು.

ಇಲ್ಲಿಯವರೆಗೂ ಕಾರ್ಯನಿರ್ವಹಿಸಿದ ಏಜೆನ್ಸಿಗಳ ಠೇವಣಿ ಮೊತ್ತವನ್ನು ಪಾವತಿಸಬಾರದು. ಈ ಕೂಡಲೇ ಮುಖ್ಯಮಂತ್ರಿಗಳು ಪ್ರಾಮಾಣಿಕ ಅಧಿಕಾರಿಗಳ ವಿಶೇಷ ತಂಡ ರಚಿಸಿ ಮುಕ್ತವಾಗಿ ತನಿಖೆ ನಡೆಸಿ ಭಷ್ಟಾಚಾರ ನಡೆಸಿದ ಅಧಿಕಾರಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೆ ಹಗರಣದ ತನಿಖೆ ಮುಗಿಯುವವರೆಗೆ ಡ್ರಿಲಿಂಗ್ ಏಜೆನ್ಸಿ ಹಾಗೂ ಪಂಪ್ ಮೋಟಾರ್ ಸಾಮಗ್ರಿಗಳನ್ನು ಸರಬರಾಜು ಮಾಡಿದ ಎಲ್ಲಾ ಏಜೆನ್ಸಿಗಳನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು. ಸಾರ್ವಜನಿಕರ ಹಣ ದುರುಪಯೋಗ ಮಾಡಿರುವುದನ್ನು ಮುಟ್ಟುಗೋಲು ಹಾಕಿಕೊಂಡು ಭ್ರಷ್ಟಾಚಾರ ಕಾಯ್ದೆಯಡಿ ಅವ್ಯವಹಾರ ನಡೆಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ರೈತ ಮುಖಂಡ ಚಿನ್ನಸಮುದ್ರ ಶೇಖರ್ ನಾಯ್ಕ್ ಅವರು ದಾವಣಗೆರೆಯಲ್ಲಿ ಆಗ್ರಹಿಸಿದರು.












Click it and Unblock the Notifications