ಕಾಡುಹಂದಿಯನ್ನು ಮರದ ಮೇಲೆ ಹೊತ್ತೊಯ್ದ ಚಿರತೆ!
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಜಮೀನೊಂದರ ಮರದ ಮೇಲೆ ಚಿರತೆಯೊಂದು ಕಾಡುಹಂದಿಯನ್ನು ಭಕ್ಷಿಸುವಾಗ ಸ್ಥಳೀಯರಿಗೆ ಕಾಣಿಸಿದೆ. ಆ ನಂತರ ಸ್ಥಳೀಯರಲ್ಲಿ ಅತಂಕ ಹೆಚ್ಚಾಗಿದ್ದು, ಮನೆಯಿಂದ ಆಚೆ ಬರಲು ಸಹ ಹೆದರುತ್ತಿದ್ದಾರೆ
ಚಾಮರಾಜನಗರ, ಮಾರ್ಚ್ 17: ಕಾಡು ಹಂದಿಯನ್ನು ಬೇಟೆಯಾಡಿದ ಚಿರತೆಯೊಂದು ಮರದ ಮೇಲೆ ಹೊತ್ತೊಯ್ದು ತಿನ್ನಲು ಮುಂದಾದ ಸಂದರ್ಭದಲ್ಲಿ ಜನರ ಕೂಗಾಟಕ್ಕೆ ಹೆದರಿ ಪರಾರಿಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರಿನಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದಿಂದ ತಮ್ಮಡಹಳ್ಳಿಗೆ ಹೋಗುವ ಮಾರ್ಗದಲ್ಲಿ ಸಿಗುವ ಕರಿಕಲ್ ಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ಮಾರ್ಚ್ 15ರ ರಾತ್ರಿ 10ರ ವೇಳೆಯಲ್ಲಿ ನಂದೀಶ್ ಎಂಬ ರೈತರ ಜಮೀನಿನಲ್ಲಿರುವ ಮರದ ಮೇಲೆ ಚಿರತೆಯೊಂದು ಕಾಣಿಸಿಕೊಂಡಿತು. ಇದನ್ನು ಕಂಡ ಕೆಲ ರೈತರು ಭಯಗೊಂಡು ಅಕ್ಕಪಕ್ಕದ ಗ್ರಾಮದವರಿಗೆ ತಿಳಿಸಿದ್ದಾರೆ.[ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ]

ಗ್ರಾಮಕ್ಕೆ ಚಿರತೆ ಬಂದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಭಯ ಆರಂಭವಾಗಿದೆ. ಜನ ಚಿರತೆ ಇರುವ ಕಡೆಗೆ ಓಡಿ ಬಂದಿದ್ದಾರೆ. ಬಳಿಕ ಚಿರತೆ ಇದ್ದ ಮರದತ್ತ ಟಾರ್ಚ್ ಹಾಯಿಸಿದ್ದಾರೆ. ಟಾರ್ಚ್ ಬೆಳಕಿಗೆ ಚಿರತೆ ಕಾಡುಹಂದಿಯನ್ನು ಮರದ ಮೇಲೆ ಹೊತ್ತೊಯ್ದು ಅದನ್ನು ತಿನ್ನುತ್ತಿರುವ ದೃಶ್ಯ ಕಂಡು ಬಂದಿದೆ.
ಇದನ್ನು ನೋಡಿದ ಜನ ಕೂಗಾಡಿದ್ದಾರೆ. ಯಾವಾಗ ಜನ ಕೂಗಾಡಲು ಆರಂಭಿಸಿದರೋ ಗಾಬರಿಗೊಂಡ ಚಿರತೆ ಮರದಿಂದ ಕೆಳಕ್ಕೆ ನೆಗೆದು ಓಡಿ ಕತ್ತಲಲ್ಲಿ ಮಾಯವಾಗಿದೆ. ಬೆಳಗ್ಗೆ ಎದ್ದು ಜಮೀನಿತ್ತ ಹೋದ ರೈತರಿಗೆ ಮರದಲ್ಲಿ ಸತ್ತ ಹಂದಿ ಕಂಡು ಬಂದಿದ್ದಲ್ಲದೆ, ಜಮೀನಿನಲ್ಲಿ ಅಡ್ಡಾಡಿದ ಚಿರತೆಯ ಹೆಜ್ಜೆ ಕಂಡಿದೆ.[ಆನೆ ಹಾವಳಿ ಬಗ್ಗೆ ಪತ್ರ ಬರೆದ ಸುಳ್ಯ ಬಾಲಕಿಗೆ ಪ್ರಧಾನಿ ಕಚೇರಿ ಸ್ಪಂದನೆ]
ಇದರಿಂದ ಭಯಗೊಂಡಿರುವ ರೈತರು ಚಿರತೆ ಗ್ರಾಮ ವ್ಯಾಪ್ತಿಯಲ್ಲೇ ಅವಿತುಕೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಯಾವಾಗ ದಿಢೀರ್ ಪ್ರತ್ಯಕ್ಷವಾಗಿ ತಮ್ಮ ಮೇಲೆ ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯ ಅವರನ್ನು ಕಾಡತೊಡಗಿದೆ. ಸಾಕುಪ್ರಾಣಿ, ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಕೂಡಲೇ ಅರಣ್ಯ ಇಲಾಖೆ ಇತ್ತ ಗಮನಹರಿಸಿ ಚಿರತೆಯನ್ನು ಪತ್ತೆ ಹಚ್ಚಿ ಸೆರೆಹಿಡಿಯಬೇಕು ಎನ್ನುವುದು ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ.












Click it and Unblock the Notifications