ಕಾನೂನುಗಳಿಗೆ ಸುಧಾರಣೆ ಬೇಕು, ಅಮೂಲಾಗ್ರ ಬದಲಾವಣೆಯಲ್ಲ: ಕೆ.ಟಿ.ಗಂಗಾಧರ್
ರಾಜ್ಯದ ಹಿರಿಯ ರೈತ ಹೋರಾಟಗಾರ, ರೈತ ಮುಖಂಡ ಕೆ.ಟಿ, ಗಂಗಾಧರ್ ಅವರನ್ನು ಒನ್ಇಂಡಿಯಾ ಕನ್ನಡ ಮಂಗಳವಾರ ಬೆಳಿಗ್ಗೆ ಮಾತನಾಡಿಸಿದಾಗ...
ಕೆ.ಟಿ. ಗಂಗಾಧರ್:
"ಇವತ್ತು ಬಹಳ ಮುಖ್ಯವಾಗಿ ಮಾತನಾಡಬೇಕಾಗಿರುವ ವಿಚಾರ ಏನಪ್ಪಾ ಅಂದ್ರೆ... ನಮ್ಮ ಹೋರಾಟ ನಾಲ್ಕೈದು ವಿಚಾರಗಳ ಮೇಲಿದೆ. ಇಲ್ಲಿ ನಾವು ರೈತರು ಯಾರೂ ರಾಜಕೀಯ ಭಾಷಣಗಳಲ್ಲಿ ತೊಡಗಿಲ್ಲ. ನಮ್ಮ ತರ್ಕವನ್ನು ಸರ್ಕಾರಗಳು ಕೇಳಿಸಿಕೊಳ್ಳಬೇಕು ಮತ್ತು ಅದಕ್ಕೆ ಸರಿಯಾದ ಉತ್ತರ ಕೊಡಬೇಕು.''
ರೈತರಿಗೆ ನಿಜವಾದ ಸ್ವಾತಂತ್ರ್ಯ: ಖಾತ್ರಿಯಾದ ಮಾರುಕಟ್ಟೆ ಮತ್ತು ಖಾತ್ರಿಯಾದ ಬೆಂಬಲ ಬೆಲೆ
ಮೊದಲನೆಯದು, ಕರ್ನಾಟಕದಲ್ಲಿ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ಬಂತಲ್ಲ ಅದು ಅಕ್ಷಮ್ಯ, ಅದು ರದ್ದಾಗಬೇಕು. ಕಾಗೋಡು ಸತ್ಯಾಗ್ರಹದ ಹಿನ್ನೆಲೆಯಲ್ಲಿ ಜಾರಿಗೆ ಬಂದ ಊಳುವವನೇ ಹೊಲದ ಒಡೆಯ ಕಾನೂನನ್ನು ಆಗಿನ ರಾಜ್ಯ ಸರ್ಕಾರ ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸಮರ್ಥವಾಗಿ ಜಾರಿಗೆ ತಂದದ್ದು ಮತ್ತು ಅದರಿಂದಾಗಿ ಸಾಮಾಜಿಕ ಬದಲಾವಣೆಯನ್ನು ಒಮ್ಮೆ ನಾವೆಲ್ಲಾ ನೆನೆಪಿಸಿಕೊಳ್ಳಬೇಕು.''
"ಇನ್ನು ಕೇಂದ್ರ ಸರ್ಕಾರ ಅಮೂಲಾಗ್ರವಾಗಿ ಬದಲಾವಣೆ ತಂದಿರುವ ಎ.ಪಿ.ಎಂ.ಸಿ ಕಾಯಿದೆ, ಗುತ್ತಿಗೆ ಕೃಷಿ, ಅಗತ್ಯ ವಸ್ತುಗಳ ಕಾಯಿದೆ ಹಾಗೂ ವಿದ್ಯುತ್ ಖಾಸಗೀಕರಣದ ವಿರುದ್ಧ ನಾವು ಮಾತನಾಡ್ತಿದ್ದೇವೆ.''
ಮಾನ್ಯ ಪ್ರಧಾನ ಮಂತ್ರಿಗಳು ಬದಲಾವಣೆ ಅನಿವಾರ್ಯವೆಂದೂ, ಅದು ಜಗದ ನಿಯಮವೆಂದೂ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ನಾನು ಹೇಳೋದಿಷ್ಟೇ ಈಗಿರುವ ಕಾನೂನುಗಳನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ. ಆದರೆ ಸುಧಾರಣೆಯ ಅಗತ್ಯವಿದೆ.
Privatization, globalization & liberalization ಬಂದ ನಂತರ ಹಿಂದಿನ ಕೆಲವು ಕಾನೂನುಗಳಿಗೆ ತಿದ್ದುಪಡಿ ತರುವುದು ಸುಧಾರಣೆ ತರುವ ಕೆಲಸ ಮಾಡಬೇಕು. ನಾವೂ ಅದನ್ನು ಒಪ್ತೀವಿ.
""ಆಹಾರದ ವಿಚಾರ ಬಂದಾಗ ಉತ್ಪಾದನೆ, ಸಂಗ್ರಹಣೆ, ವಿತರಣೆ, ಸಂಸ್ಕರಣೆ ಹೀಗೆ ಹಲವು ಹಂತಗಳಲ್ಲಿ ಕೆಲಸಗಳಿವೆ. ಆಹಾರ ಸಂಸ್ಕರಣೆಗೆ ನಿಮ್ಮ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ ಮಾನ್ಯ ವಿತ್ತ ಸಚಿವರೇ, ಪ್ರಧಾನಿಗಳೇ. ಉತ್ಪಾದನೆಗೆ ಏಕೆ ಅವರು ಬೇಕು.? ನಾವಿಲ್ಲವೇ ರೈತರು. ಇಷ್ಟೂ ಕಾಲ ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸಿದವರು.''
ಅದೇ ರೀತಿ ವಿದ್ಯುತ್ ಉತ್ಪಾದನೆ, ವಿತರಣೆ, ಮಾರಾಟವನ್ನು ಖಾಸಗಿಕರಣ ಮಾಡಹೊರಟಿರುವ ನಿಮ್ಮ ನಡೆಯ ಬಗ್ಗೆ ನಮ್ಮ ಆಕ್ಷೇಪವಿದೆ. ಮೊನ್ನೆ ತಾನೆ ಮಾನ್ಯ ವಿತ್ತ ಸಚಿವರು ತಮಿಳುನಾಡಿನಲ್ಲಿ ಮಾತನಾಡುತ್ತಾ ಹೇಳಿದ್ರು. ""ವಿದ್ಯುತ್ ಉತ್ಪಾದನೆ ಮಾಡಲು, ಹೂಡಿಕೆ ಮಾಡಲು ಮುಂದಾಗುವವರಿಗೆ ಲಾಭ ಸಿಗದೆ ಹೋದಲ್ಲಿ. ಅದನ್ನು ನಾವು ಖಾತ್ರಿ ಮಾಡದೇ ಹೋದಲ್ಲಿ ಉತ್ಪಾದನೆಗೆ ಬಂಡವಾಳಿಗರು ಮುಂದೆ ಬರುವುದಿಲ್ಲ'' ಎಂಬುದಾಗಿ ಅವರ ಮಾತಿನ ಓಘ ಸಾಗಿತ್ತು.
ಇಂಥ ಭಾಷಣಗಳಿಗೆ ಪೂರಕವೆಂಬಂತೆ ಅನೇಕ ನೆಟ್ಟಿಗರು ರೈತರಿಗೇಕೆ ಸಬ್ಸಿಡಿ ಕೊಡಬೇಕು. ಅದೂ ನಮ್ಮ ಟ್ಯಾಕ್ಸ್ ಹಣದಲ್ಲಿ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿದ್ದಾರೆ. ಈ ನಾಡಿನ ರೈತ ಸಮುದಾಯದ ಪರವಾಗಿ ನಿಮಗೆ ನಾನು ಹೇಳುವುದಿಷ್ಟೇ.
""ನಮಗೆ ನಿಮ್ಮ ಸಹಾಯ ಧನ ಬೇಡ. ನಾವು ಉತ್ಪಾದನೆ ಮಾಡಿದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿ. ವಿದ್ಯುತ್ ಬಿಲ್, ಕೃಷಿ ಪರಿಕರಗಳ ಖರ್ಚು, ಕೂಲಿ ಹೀಗೆ ಏನೆಲ್ಲಾ ಬಾಬ್ತುಗಳಿವೆಯೋ ಎಲ್ಲವನ್ನೂ ನೀವೆ ವೈಜ್ಞಾನಿಕವಾಗಿ ಲೆಕ್ಕ ಮಾಡಿ ಅದರ ಮೇಲೆ ಲಾಭದಾಯಕವೆಂಬ ಬೆಲೆ ನಮಗೆ ಕೊಡಿ ಆಗ ನಿಮ್ಮ ಸಬ್ಸಿಡಿ ಯಾರಿಗೆ ಬೇಕು?''
"ತರ್ಕವಿಲ್ಲದ ಯಾವ ಕಾನೂನು ದೇಶದ ಜನಸಾಮಾನ್ಯರ ಏಳಿಗೆಗೆ ಪೂರಕವಾಗಿರುವುದಿಲ್ಲ. ಕಾನೂನು ಮಾಡುವವರಿಗೆ ವೈಜ್ಞಾನಿಕ ಚಿಂತನೆ ಬೇಕು.'' ಎಂದು ರೈತ ಮುಖಂಡ ಕೆ.ಟಿ, ಗಂಗಾಧರ್ ಮಾತನಾಡುತ್ತಾ ಹೇಳಿದರು.