ದೆಹಲಿಯಲ್ಲಿ ಲಕ್ಷಾಂತರ ಅನ್ನದಾತರ ಪ್ರತಿಭಟನೆ: ಸರ್ಕಾರ, ಮಾಧ್ಯಮಗಳ ನಿರ್ಲಕ್ಷ್ಯ

ನವದೆಹಲಿ, ನವೆಂಬರ್ 29: ದೆಹಲಿಯ ಜಂತರ್‌ಮಂತರ್‌ನಲ್ಲಿ ಲಕ್ಷಾಂತರ ಅನ್ನದಾತ ರೈತರು ಒಟ್ಟು ಸೇರಿ ಕೇಂದ್ರದ ವಿರುದ್ಧ ಕೆಂಪು ಬಾವುಟ ಹಾರಿಸಿದ್ದಾರೆ. ಇಂದು ಮತ್ತು ನಾಳೆ ದಿನಗಳ ಕಾಲ ಅವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ.

ದೇಶದ ವಿವಿದೆಡೆಗಳಿಂದ ಕೇಂದ್ರದ ಆಡಳಿತ ಸ್ಥಾನಕ್ಕೆ ತಲುಪಿರುವ ಲಕ್ಷಾಂತರ ಸಂಖ್ಯೆಯ ರೈತರು, ತಮ್ಮ ಬದುಕನ್ನು ಉತ್ತಮ ಪಡಿಸಿ, ನಮ್ಮ ಹಕ್ಕುಗಳನ್ನು ನಮಗೆ ನೀಡಿ, ನಮಗೆ ಆದ್ಯತೆ ಕೊಡಿ ಎಂದು ಕೇಂದ್ರಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ಕಳೆದ ಬಾರಿ ಅಕ್ಟೋಬರ್‌ನಲ್ಲಿ ರೈತರು ಮಾಡಿದ್ದ ಪ್ರತಿಭಟನೆ ಸಮಯ ಕೇಂದ್ರದ ಪೊಲೀಸರು ರೈತರ ಮೇಲೆ ಜಲಫೀರಂಗಿಗಳನ್ನು ಪ್ರಯೋಗಿಸಿ ಹಿಮ್ಮೆಟ್ಟಿಸಿದ್ದರು. ಅದರ ನೆನಪು ಆರುವ ಮುನ್ನಾ ಅಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತೆ ಇಂದು ದೆಹಲಿಗೆ ನುಗ್ಗಿದ್ದಾರೆ.

ಸಾವಿರಾರು ಸಂಖ್ಯೆಯ ರೈತರು ನಡೆದುಕೊಂಡೇ, ಒಡೆದು ರಕ್ತ ಒಸರಿದ ಪಾದಗಳೊಂದಿಗೆ, ಅರೆ-ಬರೆ ಉಂಡ ಹೊಟ್ಟೆ, ಹರಿದ ಬಟ್ಟೆಗಳೊಂದಿಗೆ ದೆಹಲಿಗೆ ಬಂದಿದ್ದಾರೆ. ಕೆಲವರು ರೈಲು ಹತ್ತಿ ಬಂದಿದ್ದಾರೆ, ತಮಗಾಗಿ-ತಮ್ಮ ಜೊತೆಗಾರ ರೈತರ ಹಕ್ಕುಗಳಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಇದೇ ವರ್ಷದಲ್ಲಿ ಹಲವು ಬಾರಿ ಹೀಗೆ ಬೃಹತ್‌ ಪ್ರಮಾಣದಲ್ಲಿ ರೈತರು ದೆಹಲಿಗೆ ಬಂದಿದ್ದಾರೆ. ಆರಂಭದಲ್ಲಿ ತಮಿಳುನಾಡು ರೈತರು ದೆಹಲಿಗೆ ಬಂದು ಬಹುಕಾಲ ಪ್ರತಿಭಟನೆ ಮಾಡಿದ್ದರು. ತಲೆ ಬುರುಡೆಗಳನ್ನು ಹಿಡಿದುಕೊಂಡು, ಕೌಫೀನಗಳನ್ನು ಕಟ್ಟಿಕೊಂಡು, ನೆಲದ ಮೇಲೆ ಅನ್ನ ಬಡಿಸಿಕೊಂಡು ತಿಂದು, ಸತ್ತ ಹೆಗ್ಗಣಗಳನ್ನು ಬಾಯಲ್ಲಿ ಕಚ್ಚಿಕೊಂಡು ಹೀಗೆ ಅನೇಕ ರೀತಿಯಲ್ಲಿ ರೂಕ್ಷವಾಗಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆದರೆ ಫಲಕಾಣದೆ ತಂತಮ್ಮ ಹೊಲಗಳಿಗೆ ಮರಳಿದ್ದರು ಈಗ ಮತ್ತೆ ವಾಪಸ್ ಬಂದಿದ್ದಾರೆ.

ಚಳಿಯಲ್ಲಿ ದೆಹಲಿಯಲ್ಲೇ ಇರಲಿದ್ದಾರೆ ರೈತರು

ಚಳಿಯಲ್ಲಿ ದೆಹಲಿಯಲ್ಲೇ ಇರಲಿದ್ದಾರೆ ರೈತರು

ರೈತರ ಈ ಪ್ರತಿಭಟನೆಗೆ 'ಕಿಸಾನ್ ಮುಕ್ತಿ ಮೋರ್ಚಾ' ಎಂದು ಹೆಸರಿಟ್ಟಿದ್ದಾರೆ. ಎರಡು ದಿನಗಳ ಕಾಲ ರೈತರು ದೆಹಲಿಯ ಜಂತರ್‌ಮಂಥರ್‌ನಲ್ಲೇ ಇರಲಿದ್ದಾರೆ. ಈಗ ದೆಹಲಿಯಲ್ಲಿ ಭರ್ಜರಿ ಚಳಿ. ಈ ಚಳಿಯ ನಡುವೆಯೇ ಅಲ್ಲೇ ನೆಲದ ಮೇಲೆ ರೈತರು ಮಲಗಲಿದ್ದಾರೆ. ಹೀಗೆ ರೈತರನ್ನು ಒಟ್ಟು ಕರೆದುಕೊಂಡು ಬರುವಲ್ಲಿ 'ಕಿಸಾನ್ ಸಂಘರ್ಷ ಕೋ-ಆರ್ಡಿನೇಶನ್ ಕಮಿಟಿ' ಪ್ರಮುಖ ಪಾತ್ರ ವಹಿಸಿದೆ. ಈ ಹಿಂದೆ ಮಹಾರಾಷ್ಟ್ರಕ್ಕೆ ರೈತರ ಬೃಹತ್ ಪಾದಯಾತ್ರೆಯಲ್ಲಿಯೂ ಈ ಸಮಿತಿ ಪ್ರಮುಖ ಪಾತ್ರ ವಹಿಸಿತ್ತು.

ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯ

ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯ

ಅನ್ನನೀಡುವ ರೈತರ ಬೃಹತ್ ಪ್ರತಿಭಟನೆ ಯಾವ ಮುಖ್ಯವಾಹಿನಿ ಮಾಧ್ಯಮಗಳಿಗೆ ಪ್ರಮುಖ ಸುದ್ದಿ ಎಂದು ಎನಿಸಿಯೇ ಇಲ್ಲವಲ್ಲ ಎಂದು ಕೆಲವು ವಿಚಾರವಂತರು ಸಾಮಾಜಿಕ ಜಾಲತಾಣದಲ್ಲಿ ಕಳಕಳಿ ವ್ಯಕ್ತಪಡಿಸಿದ್ದಾರೆ. ಬಹುತೇಕ ಸುದ್ದಿ ಮಾಧ್ಯಮಗಳು ರೈತರ ಈ ಬೃಹತ್ ಪ್ರತಿಭಟನೆಯನ್ನು ಒಂದು ನಿಮಿಷ ಸುದ್ದಿಯಾಗಿಯೂ ಪ್ರಸಾರ ಮಾಡಿಲ್ಲ.

ಪಂಚ ರಾಜ್ಯದ ಚುನಾವಣಾ ಬ್ಯುಸಿಯಲ್ಲಿ ಸರ್ಕಾರ

ಪಂಚ ರಾಜ್ಯದ ಚುನಾವಣಾ ಬ್ಯುಸಿಯಲ್ಲಿ ಸರ್ಕಾರ

ರೈತರಿಗಾಗಿ ವಿಶೇಷ ಅಧಿವೇಶನವನ್ನು ಸರ್ಕಾರ ಮಾಡಬೇಕು, ಸಾಲಮನ್ನಾ, ಬೆಂಬಲ ಬೆಲೆ, ಬೆಳೆ ವಿಮೆಯಲ್ಲಾದ ಅನ್ಯಾಯ ಸರಿಪಡಿಕೆ, ರೈತರ ಆದಾಯ ತಲಾ ಹೆಚ್ಚಳದ ಬಗ್ಗೆ ನೀಡಿದ್ದ ಭರವಸೆ ಈಡೇರಿಕೆ ಹೀಗೆ ಹತ್ತು ಹಲವು ಬೇಡಿಕೆಗಳನ್ನು ರೈತರು ಕೇಂದ್ರದ ಮುಖಕ್ಕೆ ಹಿಡಿದಿದ್ದಾರೆ. ಪಂಚ ರಾಜ್ಯ ಚುನಾವಣೆಯ ಬ್ಯುಸಿಯಲ್ಲಿರುವ ಮೋದಿ ಹಾಗೂ ಅವರ ಮಂತ್ರಿ ಮಂಡಲಕ್ಕೆ ಇದು ಕಾಣುತ್ತದೆಯೋ ಇಲ್ಲವೋ ನೋಡಬೇಕು?

ವಿರೋಧ ಪಕ್ಷವೂ ರೈತರ ಜೊತೆ ಇಲ್ಲ

ವಿರೋಧ ಪಕ್ಷವೂ ರೈತರ ಜೊತೆ ಇಲ್ಲ

ವಿರೋಧ ಪಕ್ಷಗಳೂ ಸಹ ಈ ರೈತರ ಪ್ರತಿಭಟನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸಿಪಿಐ ಹೊರತು ಪಡಿಸಿ ಇನ್ನಾವ ಪಕ್ಷವೂ ರೈತರಿಗೆ ಬೆಂಬಲ ನೀಡಿದ್ದಾಗಲಿ, ಅವರ ಪ್ರತಿಭಟನೆಗೆ ಜೊತೆ ಆಗಿದ್ದಾಗಲಿ ನಡೆದಿಲ್ಲ. ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೇರುವ ಕನಸಿನಲ್ಲಿರುವ ಕಾಂಗ್ರೆಸ್‌ ಸಹ ರೈತರತ್ತ ದೃಷ್ಠಿಹರಿಸಿಲ್ಲ. ಅದೂ ಸಹ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿ ಇದೆ.

ಸಾಮಾಜಿಕ ಜಾಲತಾಣದಲ್ಲಿ ಬೆಂಬಲ

ಸಾಮಾಜಿಕ ಜಾಲತಾಣದಲ್ಲಿ ಬೆಂಬಲ

ರೈತರ ಈ ಬೃಹತ್ ಪ್ರತಿಭಟನೆಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹಲವರು ದೆಹಲಿಯಲ್ಲಿ ರೈತರ ಪ್ರತಿಭಟನೆಯ ವಿಡಿಯೋಗಳನ್ನು, ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಪ್ರತಿಭಟನೆ ಬಗ್ಗೆ ನಿರಾಸಕ್ತಿ ತೋರಿರುವ ಮಾಧ್ಯಮಗಳನ್ನು ರಾಜಕಾರಣಿಗಳನ್ನು ಜರಿದಿದ್ದಾರೆ. ಆದರೆ ಈ ನವೆಂಬರ್ ಚಳಿಯಲ್ಲಿ ದೆಹಲಿಯಲ್ಲಿ ಅರೆ-ಬರೆ ಬಟ್ಟೆಯಲ್ಲಿ ಧರಣಿ ಕೂತ ರೈತರಿಗೆ ಸಾಮಾಜಿಕ ಜಾಲಾಣದ ಬೆಂಬಲವಲ್ಲ ಭೌತಿಕ ಬೆಂಬಲದ ಅಗತ್ಯವಿದೆ.

ಮೋದಿ-ರಾಹುಲ್ ರೈತರ ಮಾತನಾಡುತ್ತಿದ್ದಾರೆ

ಮೋದಿ-ರಾಹುಲ್ ರೈತರ ಮಾತನಾಡುತ್ತಿದ್ದಾರೆ

ಲಕ್ಷಾಂತರ ರೈತರು ಇತ್ತಕಡೆ ದೆಹಲಿಯಲ್ಲಿ ತಮ್ಮ ಹಕ್ಕುಗಳಿಗಾಗಿ, ತಮ್ಮ-ತಮ್ಮ ನಂತರದ ತಲೆಮಾರುಗಳ ಜೀವನಕ್ಕಾಗಿ ಹೋರಾಟ ಮಾಡುತ್ತಿರುವ ಇದೇ ಹೊತ್ತಿನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಅವರು ಇದೇ ರೈತರ ಬಗ್ಗೆ ಮಾತನಾಡುತ್ತಿದ್ದಾರೆ, ನಮ್ಮ ಸರ್ಕಾರ ರೈತರಿಗೆ ಏನೇನೋ ಮಾಡಿದೆಯೆಂದು ಹೇಳುತ್ತಿದ್ದಾರೆ. ಅತ್ತ ರಾಹುಲ್ ಸಹ ರೈತರ ಪರವಾಗಿ ನಾವಿದ್ದೇವೆ ಎಂದು ಹೇಳುತ್ತಾ ಮೈಕಿನ ಮುಂದೆ ಭಾಷಣ ಕೊಚ್ಚುತ್ತಿದ್ದಾರೆ. ದೆಹಲಿಯಲ್ಲಿ ನಡುಗುತ್ತಿರುವ ರೈತರ ಬಳಿಗೆ ಇಬ್ಬರೂ ನಾಯಕರು ಸುಳಿಯಲಾರರು, ಆದರೆ ಮತ ಕೇಳಲು ಇಬ್ಬರೂ ರೈತರ ಹೆಸರನ್ನೇ ಬಳಸುತ್ತಿದ್ದಾರೆ, ವಿಪರ್ಯಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+