ಅವ್ಯವಸ್ಥೆಯ ಆಗರವಾದ ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ
ರಾಮನಗರ, ಜನವರಿ 23: 6ನೇ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಕಷ್ಟು ಅವ್ಯವಸ್ಥೆ, ಗೊಂದಲ ಮತ್ತು ಮಾತಿನ ಚಕಮಕಿಗೆ ಸಾಕ್ಷಿಯಾಗಿದೆ.
ಚಿಕ್ಕ ಸಭಾಂಗಣದಲ್ಲಿ ನಡೆದ ಸಮ್ಮೇಳನ ಅವ್ಯವಸ್ಥೆಯನ್ನು ಎದ್ದು ಕಾಣುವಂತೆ ಮಾಡಿತ್ತು. ಒಂದೆಡೆ ರೈತ ಗೀತೆಗೆ ಗೌರವ ಕೊಡಲಿಲ್ಲ ಎಂಬ ರೈತರ ಆಕ್ರೋಶ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆಯಿಲ್ಲದೇ ಮೂಟೆಗಳಂತ ಬ್ಯಾಗ್ ಗಳನ್ನು ಹೊತ್ತು ನಿಂತಿದ್ದು ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿತ್ತು.
ಅಂದಹಾಗೇ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ರಾಷ್ಟ್ರಗೀತೆ ಹಾಗೂ ನಾಡಗೀತೆಯ ಬಳಿಕ ರೈತಗೀತೆಯನ್ನು ಗಾಯಕರು ಹಾಡಿದರು, ಈ ವೇಳೆ ವೇದಿಕೆಯಲ್ಲಿದ್ದವರು, ವೇದಿಕೆ ಮುಂಭಾಗದಲ್ಲಿದ್ದವರು ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಂಡರು. ಇದರಿಂದ ಕೆರಳಿದ ರೈತ ಮುಖಂಡರು ಹಾಗೂ ರೈತರು ರೈತಗೀತೆಗೆ ಎದ್ದು ನಿಲ್ಲದೇ ಅಗೌರವ ತೋರಿದ್ದಾರೆ ಎಂದು ಆರೋಪಿಸಿ, ರೈತ ಸಂಘದ ಕೆಲ ಮುಖಂಡರು ವೇದಿಕೆ ಏರಲು ಮುಂದಾದರು.

ಕಾರ್ಯಕ್ರಮದ ಆರಂಭದಲ್ಲೇ ರೈತಗೀತೆ ವಿಚಾರವಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಮ್ಮೇಳನಕ್ಕೆ ರೈತರನ್ನು ಆಹ್ವಾನಿಸಿ ರೈತ ಪರ ಚರ್ಚೆಗೂ ವೇದಿಕೆ ನೀಡಿ, ರೈತ ಗೀತೆಗೆ ಅವಮಾನ ಮಾಡುವುದು ಯಾವ ನ್ಯಾಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಾಹಿತ್ಯ ಪರಿಷತ್ತಿನ ಕೆಲ ಮುಖಂಡರು ಸಮಾಧಾನ ಪಡಿಸಿದರು.

ಇನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದರಿಂದ ನಗರದ ಬಹುತೇಕ ಕಾಲೇಜು ವಿದ್ಯಾರ್ಥಿಗಳನ್ನು ಸಮ್ಮೇಳನಕ್ಕೆ ಕರೆತರಲಾಗಿತ್ತು. 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನಕ್ಕೆ ಆಗಮಿಸಿದ್ದರೂ ಆಸನಗಳೇ ಇಲ್ಲದೇ ಪರದಾಡುವಂತಾಗಿತ್ತು.

ಕಾಲೇಜಿಗೆ ಬಂದ ವಿದ್ಯಾರ್ಥಿಗಳು ನೇರವಾಗಿ ಸಮ್ಮೇಳನಕ್ಕೆ ಬಂದಿದ್ದು ಕಿರಿದಾದ ಕಲ್ಯಾಣ ಮಂಟಪದಲ್ಲಿ ಜಾಗವೇ ಇಲ್ಲದಂತಾಗಿದೆ. ಬಾಲ್ಕನಿ ಹಾಗೂ ವೇದಿಕೆ ಮುಂಭಾಗದ ಇಕ್ಕೆಲಗಳಲ್ಲಿ ನಿಂತು ನಿಂತು ಕಾಲ ನೋವಿಗೆ ಒಳಗಾದವರು ನೆಲದ ಮೇಲೆಯೇ ಕುಳಿತು ಸಮ್ಮೇಳನ ವೀಕ್ಷಿಸಿದ್ದಾರೆ. ಅಷ್ಟರ ಮಟ್ಟಿಗೆ ಜಿಲ್ಲಾ ಸಮ್ಮೇಳನವು ಅವ್ಯವಸ್ಥೆಯ ಆಗರವಾಗಿತ್ತು.












Click it and Unblock the Notifications