ಮಂಡ್ಯ; ತೆಂಗು ಬಿಟ್ಟು ಅಡಿಕೆ ಬೆಳೆಯತ್ತ ರೈತರ ಚಿತ್ತ
ಮಂಡ್ಯ, ಜೂ 24: ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲ್ಲೂಕು ಅರೆ ನೀರಾವರಿ ಪ್ರದೇಶವಾಗಿದ್ದು, ಇತ್ತೀಚಿನ ದಿನಗಳಲ್ಲಿ ರೈತರು ತೆಂಗು ಬಿಟ್ಟರೆ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.
ತಾಲ್ಲೂಕಿನಾದ್ಯಂತ ಸುಮಾರು ಎರಡು ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕೆರೆ, ಬಯಲು ಪ್ರದೇಶಕ್ಕೆ ಸಿಮೀತವಾಗಿದ್ದ ಅಡಿಕೆ ಬೆಳೆ ಈಗ ತಾಲೂಕಿನ ನೀರಾವರಿ ಪ್ರದೇಶಕ್ಕೂ ವಿಸ್ತರಣೆಯಾಗುತ್ತಿದೆ.
ಲಾಭಾಂಶದ ಕೊರತೆ ಮತ್ತು ಕೂಲಿ ಕಾರ್ಮಿಕರ ಸಮಸ್ಯೆಯಿಂದ ನಲುಗುತ್ತಿರುವ ರೈತರು ಭತ್ತ, ಕಬ್ಬು ಮುಂತಾದ ಬೆಳೆಗಳಿಂದ ವಿಮುಖರಾಗುತ್ತಿದ್ದು ಅಡಿಕೆ ಬೆಳೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಪ್ರತಿವರ್ಷ ತಾಲೂಕಿನಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳು ವಿಸ್ತರಣೆಯಾಗುತ್ತಿವೆ. ಆದರೆ ತಾಲ್ಲೂಕಿನಲ್ಲಿ ಅಡಿಕೆ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಸೇರಿದಂತೆ ಯಾವುದೇ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಸಹ ಒದಗಿಸದಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಸೂಕ್ತ ಸೌಲಭ್ಯ ಒದಗಿದ ಎಪಿಎಂಸಿ
ಅಡಿಕೆ ಬೆಳೆಗಾರರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಪಟ್ಟಣದಲ್ಲಿ ನಿಗದಿತ ಮಾರುಕಟ್ಟೆ ಇಲ್ಲದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಟ್ಟಣದ ಎಪಿಎಂಸಿ ಮತ್ತು ಕಿಕ್ಕೇರಿಯ ಎಪಿಎಂಸಿ ಆವರಣದಲ್ಲಿ ತೆಂಗು ಮತ್ತು ಎಳನೀರು ಮಾರುಕಟ್ಟೆಯಿದೆ. ಇದರಿಂದ ತೆಂಗು ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆಯಿಲ್ಲ. ಆದರೆ ಅಡಿಕೆ ಬೆಳೆಗಾರರಿಗೆ ಎಪಿಎಂಸಿ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿಲ್ಲ.
ಇದರ ಪರಿಣಾಮ ಶೇ 75 ರೈತರುಗಳು ಅಡಿಕೆ ಬೆಳೆಯನ್ನು ಚೇಣಿ ನೀಡುತ್ತಿದ್ದಾರೆ. ಅಡಿಕೆ ವ್ಯಾಪಾರಿಗಳು ರೈತರ ತೋಟಕ್ಕೆ ಆಗಮಿಸಿ ಗಿಡದ ಫಸಲು ನೋಡಿ ತೋಟದಲ್ಲಿ ಇದ್ದಂತೆಯೇ ವಾರ್ಷಿಕವಾಗಿ ಇಂತಿಷ್ಟು ಎಂದು ಬೆಲೆ ನಿಗದಿ ಪಡಿಸಿ ಮಾಲು ಕೊಯ್ದುಕೊಳ್ಳುತ್ತಿದ್ದಾರೆ. ಮಾರುಕಟ್ಟೆಯ ಅರಿವಿಲ್ಲದ ರೈತ ಅಡಿಕೆ ದಳ್ಳಾಳಿಗಳ ವ್ಯಾಪಾರದ ಬೆಲೆಗೆ ಸಿಲುಕಿ ಸಾಕಷ್ಟು ಪ್ರಮಾಣದಲ್ಲಿ ನಷ್ಟಕ್ಕೊಳಗಾಗುತ್ತಿದ್ದಾನೆ. ಅಡಿಕೆ ಬೆಳೆಗಾರನಿಗಿಂತಲೂ ಅಡಿಕೆ ತೋಟಗಳನ್ನು ಚೇಣಿ ಪಡೆಯುತ್ತಿರುವ ವರ್ತಕರಿಗೆ ಇದರಿಂದ ಹೆಚ್ಚು ಆದಾಯವಾಗುತ್ತಿದೆ.

ಅಡಿಕೆ ಬೆಳೆಗೆ ತಗಲುವ ರೋಗಕ್ಕೆ ಸೂಕ್ತ ಔಷಧಿ ಕೊರತೆ
ತಾಲ್ಲೂಕಿನಲ್ಲಿ ನೂರಾರು ಗ್ರಾಮಗಳಲ್ಲಿ ಸಾವಿರಾರು ಅಡಿಕೆ ಬೆಳೆಗಾರ ರೈತರಿದ್ದರೂ ಅಡಿಕೆ ಬೆಳೆಯನ್ನು ಕೊಯ್ಲು ಮಾಡಿ ಸಂಸ್ಕರಣೆ ಮಾಡುವವರು ಮಾತ್ರ ಬೆರಳೆಣಿಕೆ ಮಂದಿ ಮಾತ್ರ. ತಾಲೂಕಿನ ಬೂಕನಕೆರೆ ಸೇರಿದಂತೆ ಒಂದೆರಡು ಗ್ರಾಮಗಳಲ್ಲಿ ಅಡಿಕೆ ಬೆಳೆಯನ್ನು ಸಂಸ್ಕರಣೆ ಮಾಡುವವರಿದ್ದರೂ ಅವರುಗಳಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತೋಟಗಾರಿಕೆ ಇಲಾಖೆ ವಿಫಲವಾಗಿದೆ. ಅಡಿಕೆ ಸುಲಿಯುವ ಯಂತ್ರ, ಸಂಸ್ಕರಣೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ಹೊರ ಜಿಲ್ಲೆಗಳಿಂದ ಖರೀದಿಸಬೇಕಾದ ಅನಿವಾರ್ಯತೆ ಇದೆ.
ಅಡಿಕೆಗೆ ಪ್ರಮುಖವಾಗಿ ಬರುವ ರೋಗವೆಂದರೆ ಸುಳಿ ಕೊಳೆರೋಗ. ಗೊನೆಕೊಳೆರೋಗ, ಹರಳು ಉದುರುವುದು, ಹೊಂಬಾಳೆ ಒಣಗುವುದು. ಅದರಲ್ಲೂ ಕೊಳೆರೋಗ ಬಂದರೆ ಮರಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಮರಗಳು ಸಾಯುವ ಹಂತಕ್ಕೆ ತಲುಪುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಕೊಳೆರೋಗ ಬಂದರೆ ಮರಗಳನ್ನು ಕಾಪಾಡುವುದು ಕಷ್ಟ ಎನ್ನುವುದು ಬೆಳೆಗಾರರ ಆತಂಕ.

ಬಯಲು ಸೀಮೆ ಅಡಿಕೆ ಬೆಳೆಯುವ ಪ್ರದೇಶಗಳಿಗೂ ವಿಸ್ತರಣೆ
ಪಟ್ಟಣದ ಎಪಿಎಂಸಿಯಲ್ಲಿ ಪ್ರತಿ ಬುಧವಾರ ಅಡಿಕೆ ವ್ಯಾಪಾರ ನಡೆಯುತ್ತಿದೆ. ಅಧಿಕೃತ ಅಡಿಕೆ ಮಾರುಕಟ್ಟೆಯಿಲ್ಲದಿರುವುದರಿಂದ ಹೊರಗಿನಿಂದ ಅಡಿಕೆ ವ್ಯಾಪಾರಿಗಳು ಆಗಮಿಸುವುದಿಲ್ಲ. ರೈತರು ತಮ್ಮ ದೈನಂದಿನ ಖರ್ಚಿಗಾಗಿ ಅಡಿಕೆಯನ್ನು ತಂದು ಮಾರಾಟ ಮಾಡುವಾಗಲೂ ಸ್ಥಳೀಯ ವ್ಯಾಪಾರಿಗಳ ಹಿಡಿತಕ್ಕೆ ಸಿಲುಕುತ್ತಾರೆ. ತೂಕದಲ್ಲಿನ ಮೋಸ, ಚೀಲದ ತೂಕ, ವೇಸ್ಟೇಜ್ ಸೇರಿದಂತೆ ಹಲವು ರೀತಿಯಲ್ಲಿ ರೈತ ವಂಚನೆಗೆ ಒಳಗಾಗುತ್ತಿದ್ದಾನೆ.
ಅಡಿಕೆಯನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡಿರುವ ರೈತರಿಗೆ ಅಡಿಕೆ ಮರಗಳ ಸಾವು ಸಂಕಷ್ಟಕ್ಕೆ ದೂಡಿದಂತಾಗುತ್ತದೆ. ಇದಕ್ಕೆ ಸೂಕ್ತ ಔಷಧಿ ಇಲ್ಲದಿರುವುದು ಬೆಳೆಗಾರರನ್ನು ನಿದ್ರೆಗೆಡಿಸಿದೆ. ಅಡಿಕೆ ಬೆಳೆಗೆ ಇಷ್ಟೆಲ್ಲಾ ಸಮಸ್ಯೆಗಳನ್ನು ದಾಟಿ ರೈತ ಅಡಿಕೆಯನ್ನು ಸಂಸ್ಕರಿಸಿ, ಸಂಗ್ರಹಿಸಿ ಸೂಕ್ತ ಬೆಲೆಗೆ ಮಾರಾಟ ಮಾಡಲು ವರ್ಷಾನುಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಒಳ್ಳೆಯ ಬೆಲೆ ಸಿಕ್ಕರೆ ಮಾತ್ರ ಹಾಕಿದ ಬಂಡವಾಳಕ್ಕೆ ಸ್ವಲ್ಪ ಲಾಭ ನೋಡಬಹುದು ಇಲ್ಲವಾದಲ್ಲಿ ನಷ್ಟವೇ ಹೆಚ್ಚಾಗುವ ಆತಂಕ ಅಡಿಕೆ ಮಾರಾಟಗಾರನ್ನು ಕಾಡುತ್ತಿದೆ.

ಅಡಿಕೆ ಬೆಳೆಗೆ ಯಾವುದೇ ಉತ್ತೇಜಕ ಯೋಜನೆ ಜಾರಿಗೊಳಿಸದ ಇಲಾಖೆ
ಎಳನೀರು ಮಾರುಕಟ್ಟೆಯಂತೆ ತಾಲೂಕಿನಲ್ಲಿ ಅಡಿಕೆ ಮಾರುಕಟ್ಟೆ ಸ್ಥಾಪನೆಯಾಗಬೇಕು. ಕೇವಲ ಮಲೆನಾಡು ಪ್ರದೇಶಕ್ಕೆ ಸೀಮಿತವಾಗಿರುವ ಅಡಿಕೆ ಅಭಿವೃದ್ದಿ ಮಂಡಳಿಯ ಕಾರ್ಯವ್ಯಾಪ್ತಿ ಬಯಲು ಸೀಮೆಯ ಅಡಿಕೆ ಬೆಳೆಯುವ ಪ್ರದೇಶಗಳಿಗೂ ವಿಸ್ತರಣೆಯಾಗಬೇಕು. ತೆಂಗು ಅಭಿವೃದ್ದಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ತೋಟಗಾರಿಕೆ ಇಲಾಖೆ ಅಡಿಕೆ ಬೆಳೆಗಾರರಿಗೂ ವಿಸ್ತರಿಸಬೇಕೆಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲೂಕು ವ್ಯಾಪ್ತಿಯಲ್ಲಿ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಪ್ರತಿವರ್ಷ ಅಡಿಕೆ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿದೆ. ಅಡಿಕೆ ಬೆಳೆಗೆ ಪೂರವಾದ ವಾತಾವರಣ ಮತ್ತು ನೀರಿನ ಸೌಲಭ್ಯ ಇಲ್ಲಿದೆ. ನಾಟಿ ತಳಿ ಅಡಿಕೆಗೆ ರೈತರು ಹೆಚ್ಚು ಒತ್ತು ನೀಡಿದ್ದಾರೆ ಆದರೆ ಕೆ. ಆರ್.ಪೇಟೆ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶವೆಂದು ಪರಿಗಣಿಸಲ್ಪಟ್ಟಿಲ್ಲ. ಇದರಿಂದ ರಾಜ್ಯ ಸರ್ಕಾರ ಇಲ್ಲಿ ಅಡಿಕೆ ಬೆಳೆಗೆ ಯಾವುದೇ ಉತ್ತೇಜಕ ಯೋಜನೆಗಳನ್ನು ತೋಟಗಾರಿಕಾ ಇಲಾಖೆಯ ಮೂಲಕ ಜಾರಿಗೊಳಿಸಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಎಂ. ಡಿ. ಲೋಕೇಶ್ ತಿಳಿಸಿದ್ದಾರೆ.












Click it and Unblock the Notifications