ರೈತರಿಂದ ನೇರವಾಗಿ ಮೆಕ್ಕಜೋಳ ಖರೀದಿ; ಕ್ವಿಂಟಾಲ್ ದರ ರೂ. 2000
ಶಿವಮೊಗ್ಗ, ನವೆಂಬರ್ 07; ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ರೈತರಿಂದ ನೇರವಾಗಿ ಮೆಕ್ಕೆಜೋಳವನ್ನು ಖರೀದಿ ಮಾಡಲಿದೆ.
ಪ್ರತಿ ಕ್ವಿಂಟಾಲ್ಗೆ 2000 ರೂ. (ಗೋಣಿಚೀಲ ಮತ್ತು ಸಾಗಾಣಿಕಾ ಪ್ರೋತ್ಸಾಹಧನ ರೂ. 38 ಸೇರಿ) ಬೆಲೆಯಲ್ಲಿ ಖರೀದಿಸಲಾಗುವುದು ಎಂದು ಶಿಕಾರಿಪುರ ಪಶು ಆಹಾರ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಬಿ. ಟಿ. ಕಿಶೋರ್ ಮಾಹಿತಿ ನೀಡಿದ್ದಾರೆ.
ಮೆಕ್ಕೆಜೋಳ ಬೆಳೆದಿರುವ ರೈತರು ನವೆಂಬರ್ 9ರಿಂದ ತಮ್ಮ ಆಧಾರ್ ಸಂಖ್ಯೆಯನ್ನು ಪ್ರೂಟ್ಸ್ ಸಂಖ್ಯೆಯೊಂದಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದು.

ಕರ್ನಾಟಕ ಹಾಲು ಮಹಾಮಂಡಳ ಶಿಕಾರಿಪುರ ಪಶು ಆಹಾರ ಘಟಕಕ್ಕೆ ಅವಶ್ಯವಿರುವ 25000 ಮೆಟ್ರಿಕ್ ಟನ್ ಮೆಕ್ಕಜೋಳವನ್ನು ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಪ್ರದೇಶದ ರೈತರುಗಳಿಂದ ಖರೀದಿ ಮಾಡಲಾಗುತ್ತದೆ.
ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ಮತ್ತು ಸರಕಾರದ ಕೃಷಿ ಇಲಾಖೆ ಸಿದ್ದಪಡಿಸಿರುವ FRUITS ತಂತ್ರಾಂಶದ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ನಡೆಯಲಿದೆ.

ಪ್ರತಿ ಒಬ್ಬ ರೈತರಿಂದ ಗರಿಷ್ಟ 500 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸೀಮಿತಗೊಳಿಸಲಾಗಿದೆ. ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಈ ಅವಕಾಶವನ್ನು ಉಪಯೋಗಿಸಿಕೊಂಡು ರೈತರು ನೇರವಾಗಿ ಸರಬರಾಜು ಮಾಡಬಹುದಾಗಿರುತ್ತದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 9606012571 ಅನ್ನು ಸಂಪರ್ಕಿಸಬಹುದಾಗಿದೆ.
ಭತ್ತದ ಬೆಳೆಯಲ್ಲಿ ರೋಗದ ನಿರ್ವಹಣಾ ಕ್ರಮಗಳು; ಭತ್ತದ ಬೆಳೆಯು ಹೂವಾಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಭತ್ತದ ಬೆಳೆಯಲ್ಲಿ ಕಾಳು ಬಣ್ಣ ಕೆಡುವ ಶಿಲೀಂದ್ರ ರೋಗವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹೊಡೆ/ತೆನೆ ಹಿರಿದ ಭತ್ತದ ಬೆಳೆಗೆ 4 ಗ್ರಾಂ. ಕಾರ್ಬನ್ ಡೈಜಿಂ 50 ಡಬ್ಲ್ಯುಯ.ಪಿ. / ೦.6 ಗ್ರಾಂ ಟ್ರೈಂಯ ಸೈಕ್ಲೊಜೋಲ್ 75 ಡಬ್ಲ್ಯುಯ.ಪಿ. / 1 ಮಿ.ಲೀ. ಎಡಿಫಿನ್ಫಾಸ್ 50 ಇ.ಸಿ. / 1 ಮಿ.ಲೀ. ಕಿಟಾಜಿನ್ 48 ಇ.ಸಿ. ಇವುಗಳಲ್ಲಿ ಯಾವುದಾರೊಂದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಎಕರೆಗೆ 250 ರಿಂದ 300 ಲೀಟರ್ ಸಿಂಪರಣಾ ದ್ರಾವಣ ಬೇಕಾಗುವುದು. ನೀರಿನೊಂದಿಗೆ ಸಗಣಿ ರಾಡಿಯನ್ನು ಬೆಳೆಗಳಿಗೆ ಹರಿಸುವುದರಿಂದ ರೋಗದ ಭಾದೆ ಕಡಿಮೆಯಾಗುವುದು.
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ; ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನವಂಬರ್ 7 ಮತ್ತು 8ರಂದು 25 ಜನರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಆಯೋಜಿಸಲಾಗಿದೆ.
ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು.
ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 08192-233787.
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ; ಕೃಷಿ ಇಲಾಖೆಯು ಆತ್ಮ ಯೋಜನೆಯಡಿ ಕೃಷಿ ವಲಯದಲ್ಲಿ ತಮ್ಮದೇ ಆದ ಅಮೂಲ್ಯ ಅನ್ವೇಷಣೆ, ವಿಶಿಷ್ಟ ಸಾಧನೆ ಮೂಲಕ ರೈತ ಸಮುದಾಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ಜಿಲ್ಲೆಯ ಪರಿಣಿತ ಕೃಷಿಕ ಮಹನಿಯರುಗಳನ್ನು ಗುರುತಿಸಿ 2022-23ನೇ ಸಾಲಿನಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಿದೆ.
ಧಾರವಾಡ ಜಿಲ್ಲೆಯ ರೈತರಿಂದ, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಕರೆಯಲಾಗಿದೆ. ಆಸಕ್ತ ರೈತರು ಜಂಟಿ ಕೃಷಿ ನಿರ್ದೇಶಕರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು ಸಾಧನೆಗಳ ವಿವರ ಬರೆದು ಜಂಟಿ ನಿರ್ದೇಶಕರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ನವೆಂಬರ್ 30ರೊಳಗಾಗಿ ಸಲ್ಲಿಸಬೇಕು.
ಈಗಾಗಲೇ ಪುರಸ್ಕಾರ ಪಡೆದವರು ಮತ್ತೆ ಅರ್ಜಿಗಳನ್ನು ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications