ದೆಹಲಿಯಲ್ಲಿ ಮತ್ತೆ ಅನ್ನದಾತರ ಪ್ರತಿಭಟನೆ ಆರಂಭ, ಕನಿಷ್ಠ ಬೆಂಬಲ ಬೆಲೆಗೆ ಆಗ್ರಹ
ನವದೆಹಲಿ, ಡಿ. 19: ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ವರ್ಷಗಳಿಗೂ ಹೆಚ್ಚು ಕಾಲ ನಡೆದ ರೈತರ ಆಂದೋಲನ ವಿಶ್ವದ ಗಮನ ಸೆಳೆದಿತ್ತು. ಈಗ ಮತ್ತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದಾರೆ.
ಭಾರತೀಯ ಕಿಸಾನ್ ಸಂಘದ ರೈತರು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಒತ್ತಾಯಿಸಿ ಕಿಸಾನ್ ಘರ್ಜನಾ ರ್ಯಾಲಿಯನ್ನು ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾದ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಆಯೋಜಿಸುತ್ತಿರುವ ರ್ಯಾಲಿಗಾಗಿ ದೇಶದ ವಿವಿಧ ಭಾಗಗಳಿಂದ 55,000 ಕ್ಕೂ ಹೆಚ್ಚು ರೈತರು ಸೋಮವಾರ ದೆಹಲಿ ತಲುಪಿದ್ದಾರೆ. ರೈತರ ಸ್ಥಿತಿಗತಿ ಸುಧಾರಿಸಲು ವಿವಿಧ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಬೆಳಗ್ಗೆ 11 ರಿಂದ ಸಂಜೆ 6 ರವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.

ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ 'ಜನ ಜಾಗರಣ' ಕಾರ್ಯಕ್ರಮದ ಭಾಗವಾಗಿ ರೈತರು ರಾಮಲೀಲಾ ಮೈದಾನವನ್ನು ತಲುಪಲಿದ್ದಾರೆ ಎಂದು ಬಿಕೆಎಸ್ ಅಧಿಕೃತ ಪ್ರಕಟಣೆ ತಿಳಿಸಿದೆ.
"ಕಳೆದ 4 ತಿಂಗಳುಗಳಲ್ಲಿ, ಬಿಕೆಎಸ್ ದೇಶದಾದ್ಯಂತ ದಕ್ಷಿಣ ರಾಜ್ಯ ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಬೃಹತ್ ಸಭೆಗಳನ್ನು ಒಳಗೊಂಡಂತೆ ಸುಮಾರು 20,000 ಕಿಮೀ ಪಾದಯಾತ್ರೆ, 13,000 ಕಿಮೀ ಸೈಕಲ್ ರ್ಯಾಲಿಗಳು ಮತ್ತು 18,000 ಬೀದಿ ಸಭೆಗಳನ್ನು ಆಯೋಜಿಸಿದೆ. ಬಳಿಕ ಈ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಿಸಾನ್ ಘರ್ಜನಾ ರ್ಯಾಲಿಯನ್ನು ಆಯೋಜಿಸಲಾಗಿದೆ" ಎಂದು ಬಿಕೆಎಸ್ನ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ರಾಘವೇಂದ್ರ ಪಟೇಲ್ ತಿಳಿಸಿದರು.

"ಈ ರ್ಯಾಲಿಯನ್ನು ನಾಲ್ಕು ಪ್ರಮುಖ ಬೇಡಿಕೆಗಳ ಮೇಲೆ ಆಯೋಜಿಸಲಾಗಿದೆ. ಅವುಗಳೆಂದರೆ, ಮೊದಲನೆಯದಾಗಿ, ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆಯನ್ನು ಜಾರಿಗೊಳಿಸಬೇಕು ಮತ್ತು ಖಚಿತಪಡಿಸಿಕೊಳ್ಳಬೇಕು. ಎರಡನೆಯದಾಗಿ, ಎಲ್ಲಾ ರೀತಿಯ ಕೃಷಿ ಉತ್ಪನ್ನದ ಮೇಲೆ ಜಿಎಸ್ಟಿ ಹೇರಬಾರದು. ಮೂರನೆಯದಾಗಿ, ಕೇಂದ್ರದ ಯೋಜನೆಯಾದ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಏರಿಕೆ ಮಾಡಬೇಕು. ನಾಲ್ಕನೆಯದಾಗಿ, ಕುಲಾಂತರಿ ಬೆಳೆಗಳಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು" ಎಂದು ರಾಘವೇಂದ್ರ ಪಟೇಲ್ ಹೇಳಿದ್ದಾರೆ.












Click it and Unblock the Notifications