ಗುಟ್ಕಾ ನಿಷೇಧ : ಕಂಗು ನಂಬಿದವರ ಗತಿಯೇನು?
ಬೆಂಗಳೂರು, ಮೇ.31: ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲ, ಪಾನ್ ಪರಾಗ್..ಇತ್ಯಾದಿ ತಂಬಾಕು ಪದಾರ್ಥಗಳ ಮಾರಾಟಕ್ಕೆ ನಿಷೇಧ ಹೇರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಗುಟ್ಕಾ ನಿಷೇಧದ ಪರ -ವಿರೋಧ ಚರ್ಚೆ ಅಡಿಕೆ ಮರದೆತ್ತರಕ್ಕೆ ಬೆಳೆಯುತ್ತಿದೆ.
ಗುಟ್ಕಾ ನಿಷೇಧದಿಂದ ಏನು ಲಾಭ? ಅಡಿಕೆ ಬೆಳೆಗಾರರಿಗೆ ಇದು ವರವೇ? ಅಥವಾ ಶಾಪವೇ? ಗುಟ್ಕಾ ನಿಷೇಧದ ಜೊತೆಗೆ ಅಡಿಕೆ ಆಮದು ಮಾಡುವ ಬಗ್ಗೆ ಸರ್ಕಾರ ದ್ವಂದ್ವ ಹೇಳಿಕೆ ನೀಡಿರುವುದು ಎಷ್ಟು ಸರಿ? ಮುಂತಾದ ಪ್ರಶ್ನೆಗಳತ್ತ ಸಣ್ಣ ನೋಟ ಇಲ್ಲಿದೆ
ಗುಟ್ಕಾ ನಿಷೇಧಕ್ಕೆ ಪ್ರಮುಖ ಕಾರಣವೆಂದರೆ ತಂಬಾಕು ಸೇವನೆಯಿಂದ ಆಗುತ್ತಿರುವ ಆರೋಗ್ಯ ದುಷ್ಪರಿಣಾಮಗಳು. ತಂಬಾಕು ಹಾಗೂ ಸಿಗರೇಟು ಸೇವನೆ ಕ್ಯಾನ್ಸರ್ ಗೆ ಆಹ್ವಾನ ಎಂಬ ಎಚ್ಚರಿಕೆ ಎಲ್ಲರಿಗೂ ಗೊತ್ತೇ ಇದೆ.
ಗುಟ್ಕಾ ನಿಷೇಧಕ್ಕೆ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ. ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ವಿಫಲವಾಗಿರುವುದು ಇಲ್ಲಿ ಮುಖ್ಯವಾಗಿದೆ. ಸರ್ಕಾರ ಏನು ಮಾಡಬೇಕು?

* ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಡಬೇಕು.
* ಅಡಿಕೆ ಬೆಳೆಗಾರರಿಗೆ ನೇರ ಮಾರುಕಟ್ಟೆ ಸಂಪರ್ಕ ಒದಗಿಸಬೇಕು
* ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಅಥವಾ ದಲ್ಲಾಳಿಗಳಿಗೆ ನಿರ್ಬಂಧ ಹೇರಬೇಕು.
* ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಒದಗಿಸಬೇಕು. ಇತರೆ ಬೆಳೆ ಬೆಳೆಯಲು ಅನುಕೂಲ ಅಥವಾ ಅಡಿಕೆ ಬೆಳೆದರೆ ನಿಮಗೆ ನಷ್ಟವಿಲ್ಲ ಎಂಬ ಧೈರ್ಯ ಅಥವಾ ಮಾರ್ಗ ಸೂಚಿಸಬೇಕು.
* ಅಡಿಕೆ ಜೊತೆಗೆ ಕಾಳುಮೆಣಸು, ಕೋಕೋ, ಏಲಕ್ಕಿ, ವೆನ್ನಿಲ್ಲಾ ಬಾಳೆ ಮುಂತಾದ ಬೆಳೆ ಬೆಳೆಯಲು ಬೆಳೆಗಾರರಿಗೆ ಉತ್ತೇಜನ ಸಿಗಬೇಕು. ಹಾಗೂ ಸೂಕ್ತ ಮಾರುಕಟ್ಟೆ ಒದಗಿಸಬೇಕು.
* ಅಡಿಕೆಯಿಂದ ತಯಾರಿಸಬಹುದಾದ ಉತ್ಪನ್ನಗಳ ಸಂಶೋಧಕರಿಗೆ ಪ್ರೋತ್ಸಾಹ ಧನ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
ಬೆಳಗಾರರ ಕಥೆ ಏನು?:
* ಗುಟ್ಕಾ ನಿಷೇಧಿಸಲಾಗಿದೆ ಹೊರತೂ ಅಡಿಕೆ ಬೆಳೆಯುವುದನ್ನು ಮಾರುವುದನ್ನು ನಿಷೇಧಿಸಿಲ್ಲ ಎಂಬುದನ್ನು ಬೆಳೆಗಾರರು ದೃಢವಾಗಿ ಮನಸ್ಸಿನಲ್ಲಿ ಉಳಿಸಿಕೊಳ್ಳಬೇಕು.
* ಅತಿ ವೃಷ್ಟಿ -ಅನಾವೃಷ್ಟಿ ಮುಂತಾದ ಪ್ರಾಕೃತಿಕ ವೈಪರಿತ್ಯಕ್ಕೆ ಸಿಲುಕಿ ಬೆಳೆ ಇಳುವರಿ ಕಡಿಮೆಯಾಗಿದ್ದರೆ ಅದಕ್ಕೆ ತಕ್ಕ ವಿಮೆ ಮಾಡಿಸಿಕೊಳ್ಳುವ ಸೌಲಭ್ಯಕ್ಕೆ ಆಗ್ರಹಿಸಬೇಕು.
* ಪುಣ್ಯಕ್ಕೆ ಪ್ರಸಕ್ತ ವರ್ಷ ಇಳುವರಿ ಹೆಚ್ಚಾಗಿರುವುದರಿಂದ ರೈತರು ಅಡಿಕೆಯಿಂದ ಒಂದಿಷ್ಟು ಕಾಸು ಮಾಡಿಕೊಳ್ಳುವ ಬಗ್ಗೆ ಯೋಚಿಸಬಹುದು.
* ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಸರ್ಕಾರಕ್ಕೆ ಒತ್ತಡ ಹಾಕಬೇಕು.
* ತಂಬಾಕು ಮಾರಾಟ ನಿಷೇಧದ ಜೊತೆಗೆ ತಂಬಾಕು ಬೆಳೆಯುವುದನ್ನು ನಿಷೇಧಿಸಲು ಮನವಿ ಸಲ್ಲಿಸಬೇಕು. ಮದ್ಯ ಸೇವನೆ ವೈಯಕ್ತಿಕವಾದರೆ ಗುಟ್ಕಾಗೂ ಅದೇ ಮಾನದಂಡ ಸರಿಯಾಗಿರುತ್ತದೆ.
* ಗುಟ್ಕಾ ಚಟ ಅಂಟಿಸಿಕೊಂಡವನು ತಕ್ಷಣಕ್ಕೆ ಚಟದಿಂದ ಹೊರ ಬರಲು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯವಾಗಿ ಸುಪಾರಿ ತಿನ್ನಲು ಆರಂಭಿಸುವ ಸಾಧ್ಯತೆಯಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಇದು ವರದಾನವಾಗಬಹುದು.
* ಅಡಿಕೆ ಹಾಗೂ ಅಡಿಕೆ ಉತ್ಪನ್ನಗಳಾದ ಸೋಪು, ಔಷಧ, ಅಡಿಕೆ ಮಿಠಾಯಿ ಸೇರಿದಂತೆ ಇತರೆ ಬಳಕೆ ಬೇಡಿಕೆ ಹೆಚ್ಚುವಂತೆ ನೋಡಿಕೊಳ್ಳಬೇಕು.
* ಇನ್ಮುಂದೆ ರೈತ, ಬೆಳೆಗಳ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಮೊದಲು ಸರ್ಕಾರ ಒಮ್ಮೆ ರೈತರ ಅಭಿಪ್ರಾಯ ಕೇಳುವಂತೆ ಮಾಡಬೇಕು.












Click it and Unblock the Notifications