ಕರ್ನಾಟಕ ಬಜೆಟ್ 2023; ರೈತರ ಒತ್ತಾಯಗಳು
ಬೆಂಗಳೂರು, ಜುಲೈ 02: ಕರ್ನಾಟಕದ ಮುಖ್ಯಮಂತ್ರಿ, ಹಣಕಾಸು ಸಚಿವ ಸಿದ್ದರಾಮಯ್ಯ 2023-24ನೇ ಸಾಲಿನ ಬಜೆಟ್ ಅನ್ನು ಜುಲೈ 7ರಂದು ಮಂಡನೆ ಮಾಡಲಿದ್ದಾರೆ. ಜುಲೈ 3 ರಿಂದ 14ರ ತನಕ ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನ ನಡೆಯಲಿದೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ (ರಿ) 2023ರ ರಾಜ್ಯ ಬಜೆಟ್ ರೈತರ ಒತ್ತಾಯಗಳು ಎಂದು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ರೈತರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

ಕುರುಬೂರು ಶಾಂತಕುಮಾರ್ ರಾಜ್ಯಾಧ್ಯಕ್ಷರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಕರ್ನಾಟಕ ಈ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಬಜೆಟ್ ಹಿನ್ನಲೆಯಲ್ಲಿ ರೈತರ ಬೇಡಿಕೆಗಳೇನು? ಎಂಬ ಪಟ್ಟಿ ಇಲ್ಲಿದೆ.
ರೈತರ ಒತ್ತಾಯಗಳು
* ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಅಕ್ಕಿ, ರಾಗಿ, ಜೋಳ, ಸಿರಿಧಾನ್ಯಗಳನ್ನು ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಳೆ ನಿರ್ಧರಿಸಿ, ಖರೀದಿಸಬೇಕು.
* ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆಲಂಗಾಣ, ಆಂಧ್ರ, ಪಂಜಾಬ್ ಮಾದರಿಯಲ್ಲಿ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಸಕಾಲಕ್ಕೆ ತೆರೆಯುವಂತಾಗಬೇಕು, ಖರೀದಿಸಿದ ಉತ್ಪನ್ನಗಳಿಗೆ ಒಂದು ವಾರದಲ್ಲಿ ರೈತರಿಗೆ ಹಣ ಪಾವತಿ ಮಾಡುವಂತಾಗಬೇಕು.
* ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಬೇಕು, ಗ್ಯಾಂಬ್ಲಿಂಗ್ ಆಟ, ಕುದುರೆ ರೇಸ್, ಬೆಟ್ಟಿಂಗ್, ಕೆಸಿನೊಗಳಿಗೆ ಜಿಎಸ್ಟಿ ಇಲ್ಲ, ರೈತರಿಗೆ ಯಾಕೆ ?
* ಪ್ರಸಕ್ತವಾಗಿರುವ ಕೃಷಿ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಭೂಮಿ ಮೌಲ್ಯದ ಶೇಕಡ 75 ರಷ್ಟು ಸಾಲ ನೀಡುವಂತೆ ನೀತಿ ರೂಪಿಸಿ, ಕೃಷಿ ಸಾಲ ಸಿಬಿಲ್ ನೀತಿ ಕೈಬಿಡಬೇಕು.
* ಕಬ್ಬಿನ ಎಫ್ಆರ್ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು, ಕಬ್ಬು ಕಟಾವು ಸಾಗಾಣಿಕೆ ಸುಲಿಗೆ ತಪ್ಪಿಸಲು ಅತ್ಯವಶ್ಯಕ.
* ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವಂತೆ ಕಾನೂನು ಜಾರಿ ತರಬೇಕು.
* ಈ ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಫಸಲ್ ಬಿಮಾ ಬೆಳೆ ವಿಮೆ ಜಾರಿ ಮಾಡಬೇಕು. ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಬೇಕು. ವಾಣಿಜ್ಯ ಬೆಳೆ ಅಡಿಕೆಗೆ ಬೆಳೆ ವಿಮೆ ಜಾರಿ ಮಾಡಿರುವಂತೆ ಕಬ್ಬು, ಬಾಳೆಗೂ ಬೆಳೆ ವಿಮೆ ಜಾರಿ ಮಾಡಬೇಕು,
* ಅತಿವೃಷ್ಟಿ/ ಅನಾವೃಷ್ಟಿ, ಅಕಸ್ಮಿಕ ಬೆಂಕಿ, ಪ್ರವಾಹ ಹಾನಿ, ಬೆಳೆ ನಾಶ ಪರಿಹಾರ ಮಾನದಂಡ ಬದಲಾಸಬೇಕು.
* ಪ್ರತಿಯೊಂದು ರೈತ ಕುಟುಂಬಕ್ಕೂ ಕೃಷಿ ಕಾರ್ಮಿಕರಿಗೂ ತೆಲಂಗಾಣ ಮಾದರಿಯಲ್ಲಿ 5 ಲಕ್ಷ ರೂಪಾಯಿಗಳ ಜೀವವಿಮೆ ಯೋಜನೆ ಜಾರಿಗೆ ತರಬೇಕು.
* ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು.
* ಗೋ ಹತ್ಯೆ ನಿಷೇಧ ಕಾನೂನು ಉಳಿಸಿ ಕೆಲವು ತಿದ್ದುಪಡಿಗಳನ್ನು ಮಾಡಬೇಕು.
* ಕಾಡಂಚಿನಲ್ಲಿ ರೈತರಿಗೆ ಪ್ರಾಣಿಗಳ ಹಾವಳಿ, ಪ್ರಾಣ ಹಾನಿ ತಪ್ಪಿಸಲು ಕಾಡಿನ ಒಳಗೆ ಇರುವ ಎಲ್ಲಾ ಮೋಜಿನ ತಾಣಗಳು, ರೆಸಾರ್ಟ್ಗಳನ್ನು ಮುಚ್ಚಿಸಬೇಕು, ಕಾಡಿನ ಒಳಗೆ ಗಣಿಗಾರಿಕೆ ನಿಲ್ಲಿಸಬೇಕು.
* ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ನಿರಂತರ 12 ಗಂಟೆಗಳ ವಿದ್ಯುತ್ ನೀಡಬೇಕು.
ರಾಜ್ಯ ಸರ್ಕಾರ ಈ ಬಗ್ಗೆ ಬಜೆಟ್ನಲ್ಲಿ ಗಂಭೀರವಾಗಿ ಗಮನ ಹರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.












Click it and Unblock the Notifications