ಆಕಾಶವಾಣಿಯ 'ರೈತ ದನಿ' ಗುಂಡಣ್ಣ ವಿಧಿವಶ

ಮಾಧ್ಯಮ ತಜ್ಞ, ಕೃಷಿಕರ ಬದುಕು ಹಸನು ಮಾಡಿದ ಜಿ.ಆರ್. ಗುಂಡಪ್ಪ (69) ಅವರು ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸುಮನಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.
'ಗುಂಡಣ್ಣ' ಆಕಾಶವಾಣಿ, ದೂರದರ್ಶನ, ಪತ್ರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಮೂಲಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಶ್ರಮಿಸಿದರು. ಗ್ರಾಮೀಣ ಪ್ರದೇಶದ ಅಪಾರ ಅನುಭವ ಹೊಂದಿದ್ದ ಅವರು, ಆಕಾಶವಾಣಿ ಮೂಲಕ ರೈತರಿಗೆ ಕೃಷಿ ಸಂಬಂಧಿ ಸಲಹೆ ನೀಡಿದರು. ಮೂರೂವರೆ ದಶಕಗಳ ಕಾಲ ಗ್ರಾಮಲಕ್ಷ್ಮೀ ಕಾರ್ಯಕ್ರಮಗಳ ಮೂಲಕ ರೈತರ ಜ್ಞಾನಾರ್ಜನೆಗೆ ಕಾರಣರಾಗಿದ್ದರು.
1970ರ ದಶಕದಲ್ಲಿ ಗ್ರಾಮಾಂತರ ರೇಡಿಯೊ ಗೋಷ್ಠಿಗಳನ್ನು ಸ್ಥಾಪಿಸಿದ ಅವರು ವಯಸ್ಕರ ಶಿಕ್ಷಣ, ಗ್ರಾಮ ನೈರ್ಮಲ್ಯ, ಆಧುನಿಕ ಬೇಸಾಯ, ಯುವಕ ಸಂಘಗಳ ಪಾತ್ರ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರು. ಈ ಮೂಲಕ ಗ್ರಾಮೀಣ ಯುವಕರಲ್ಲಿ ದುಡಿಮೆಯ ಒಲವನ್ನು ಬೆಳೆಸಿದರು ಎಂಬುದರಲ್ಲಿ ಎರಡು ಮಾತಿಲ್ಲ. ಗುಂಡಪ್ಪನವರು 'ಪ್ರಜಾವಾಣಿ' ಪತ್ರಿಕೆಯಲ್ಲಿ 'ಕೃಷಿ ಮಂಥನ' ಅಂಕಣ ಬರೆಯುತ್ತಿದ್ದ ಅವರು, ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಅವರು ಸಲ್ಲಿಸಿರುವ ಸೇವೆಗಾಗಿ 1996 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಣ್ಣ ಉಳಿತಾಯ ಕ್ಷೇತ್ರದಲ್ಲಿನ ಅವರ ಸಾಧನೆಗೆ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.












Click it and Unblock the Notifications