ಕಲಬುರಗಿ; ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ
ಕಲಬುರಗಿ, ಏಪ್ರಿಲ್ 08 : ಲಾಕ್ ಡೌನ್ ಪರಿಣಾಮ ಬೆಳೆದ ಕಲ್ಲಂಗಡಿಯನ್ನು ಮಾರಾಟ ಮಾಡಲು ಸಾಧ್ಯವಾಗದೇ ಕಲಬುರಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸರ್ಕಾರದ ವತಿಯಿಂದ ರೈತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಕೃಷಿ ಸಚಿವ ಬಿ. ಸಿ. ಪಾಟೀಲ್ ರೈತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸ್ವಾಂತ್ವನ ಹೇಳಿದರು. ಸರ್ಕಾರದಿಂದ 5 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ಅನ್ನು ಮೃತ ರೈತನ ಪತ್ನಿಗೆ ನೀಡಿದರು.
ರೈತ ಸಮುದಾಯಕ್ಕೆ ಆತ್ಮಹತ್ಯೆ ಪರಿಹಾರವಲ್ಲ, ಇದ್ದು ಜಯಿಸಬೇಕು ಕರೆ ನೀಡಿದರು.
ಕಲಬುರಗಿಯ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದ ರೈತ ಚಂದ್ರಕಾಂತ ನಾಗೀಂದ್ರಪ್ಪ ಬಿರಾದರ ಮಾರ್ಚ್ 31 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಕಲ್ಲಂಗಡಿ ಬೆಳೆದಿದ್ದ ರೈತ ಲಾಕ್ ಡೌನ್ ಪರಿಣಾಮ ಅದನ್ನು ಸಾಗಣೆ ಮಾಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು.

"ರೈತನ ಕುಟಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ನೆರವನ್ನು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ನೀಡಲಿದ್ದಾರೆ. ಧೈರ್ಯದಿಂದ ಇರಿ" ಎಂದು ಕೃಷಿ ಸಚಿವರು ಕುಟುಂಬಸ್ಥರಿಗೆ ಭರವಸೆ ನೀಡಿದರು.
ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ 20 ಸಾವಿರ ರೂ. ಮತ್ತು ಅಂತ್ಯಸಂಸ್ಕಾರದ ವೆಚ್ಚ 5 ಸಾವಿರ ರೂ.ಗಳನ್ನು ಸಹ ಕುಟುಂಬಕ್ಕೆ ನೀಡಲಾಯಿತು. ರೈತನ ಪತ್ನಿ ಜಗದೇವಿ ಚಂದ್ರಕಾಂತ ಅವರಿಗೆ ಮಾಸಿಕ 2000 ರೂ. ಒದಗಿಸುವ ವಿಧವಾ ಪಿಂಚಣಿ ಆದೇಶದ ಪ್ರತಿಯನ್ನು ಸಹ ವಿತರಣೆ ಮಾಡಲಾಯಿತು.
ಸರ್ಕಾರದಿಂದ ನೀಡಿದ 5 ಲಕ್ಷ ರೂ. ಜೊತೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ವೈಯಕ್ತಿಕವಾಗಿ ರೈತನ ಕುಟುಂಬಕ್ಕೆ 1 ಲಕ್ಷ ರೂ. ಮೊತ್ತ ನಗದನ್ನು ಇದೇ ಸಂದರ್ಭದಲ್ಲಿ ನೀಡಿದರು.












Click it and Unblock the Notifications