ಮಾವು ಬೆಳೆಯುವ ರೈತರಿಗೆ ಇಸ್ರೇಲ್ ತಂತ್ರಜ್ಞಾನದ ಸಲಹೆಗಳು
ಬೆಂಗಳೂರು, ಜುಲೈ 08 : ಮಾವು ಬೆಳೆಯುವ ರೈತರು ಸವರುವಿಕೆ ತಂತ್ರಜ್ಞಾನವನ್ನು ತಮ್ಮ ತೋಟಗಳಲ್ಲಿ ಅಳವಡಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. ಇದು ಇಸ್ರೇಲ್ ಮಾದರಿ ತಂತ್ರಜ್ಞಾನವಾಗಿದೆ ಎಂದು ತೋಟಗಾರಿಕಾ ಇಲಾಖೆ ಹೇಳಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆಯ ಜಿ. ನಾರಾಯಣ ಗೌಡ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಇಂಡೋ -ಇಸ್ರೇಲ್ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಮಾವು ಬೆಳೆ ಉತ್ಕೃಷ್ಟ ಕೇಂದ್ರದಲ್ಲಿ ಆಧುನಿಕ ಬೇಸಾಯ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ.
ಇಸ್ರೇಲ್ ದೇಶದ ತಜ್ಞರಿಂದ ಮಾಹಿತಿಗಳನ್ನು ಪಡೆದು ಇಲ್ಲಿನ ಹವಾಮಾನ ಹಾಗೂ ಮಣ್ಣಿನ ಗುಣಗಳಿಗೆ ಹೊಂದುವಂತೆ ಪ್ರಯೋಗ ಮಾಡಲಾಗಿದೆ. ಮಾವಿನ ತೋಟದಲ್ಲಿ ಇಳುವರಿ ಹಾಗೂ ಹಣ್ಣಿನ ಗುಣಮಟ್ಟವನ್ನು ಹೆಚ್ಚಿಸುವ ತಂತ್ರಜ್ಞಾನಗಳನ್ನು ಕೈಗೊಳ್ಳಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಇಸ್ರೇಲ್ ದೇಶದ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಮಾವಿನಲ್ಲಿ ಸವರುವಿಕೆ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುತ್ತಿದೆ. ಸವರುವಿಕೆ ತಂತ್ರಜ್ಞಾನವನ್ನು ತಮ್ಮ ತೋಟಗಳಲ್ಲಿ ಅಳವಡಿಸಿಕೊಂಡು ರೈತರು ಉತ್ತಮ ಇಳುವರಿ ಪಡೆಯಬಹುದಾಗಿದೆ.

ಮಾವಿನ ಮರಗಳ ಆರೈಕೆ
ಸವರುವಿಕೆ ಎಂದರೆ ಮಾವಿನ ಮರಗಳ ಎತ್ತರ ಹಾಗೂ ಆಕಾರವನ್ನು ಅವಲಂಬಿಸಿ ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು ತೆಗೆದು ಹಾಕುವುದು. ಗಾಳಿ ಹಾಗೂ ಸೂರ್ಯನ ಕಿರಣಗಳನ್ನು ಬೀಳುವಂತೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸುವುದಾಗಿದೆ.

ಸವರುವಿಕೆಯ ಉಪಯೋಗಗಳು
ಸೂರ್ಯನ ಕಿರಣಗಳು ಎಲ್ಲಾ ದಿಕ್ಕಿನಲ್ಲಿ ಬಿದ್ದು, ಎಲೆಗಳಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ಹೆಚ್ಚಿಸುವುದಲ್ಲದೇ, ರೋಗ ಹಾಗೂ ಕೀಟ ಬಾಧೆಯನ್ನು ಕಡಿಮೆಗೊಳಿಸುತ್ತದೆ. ಹೂವು ಹಾಗೂ ಹಣ್ಣು ಬಿಡುವ ರೆಂಬೆಗಳು ಮಿತಿಗೊಂಡು ಇರುವ ರೆಂಬೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂ ಕಚ್ಚಿ, ಹಣ್ಣಿನ ಗಾತ್ರ ಹೆಚ್ಚಾಗಿ ಎಲ್ಲಾ ಹಣ್ಣುಗಳು ಗಾತ್ರದಲ್ಲಿ ಸಮನಾಗಿರುತ್ತದೆ.

ಬೇಸಾಯಕ್ಕೆ ಅನುಕೂಲ
ಮರದ ಎತ್ತರವನ್ನು ಮಿತಿಗೊಳಿಸುವುದರಿಂದ ಬೇಸಾಯ ಕ್ರಮಗಳಿಗೆ ಅನುಕೂಲವಾಗುತ್ತದೆ. ವಯಸ್ಸಾದ ಮರಗಳಲ್ಲಿ ಸವರುವಿಕೆಯಿಂದ ಹೆಚ್ಚಿನ ಪೋಷಕಾಂಶವನ್ನು ಮರವು ಪಡೆಯುವುದರಿಂದ ಹೊಸ ಚಿಗುರುಗಳನ್ನು ಮರವು ಹೇರಳವಾಗಿ ಉತ್ಪಾದಿಸುತ್ತದೆ.

500 ಹೆಕ್ಟೇರ್ ಪ್ರದೇಶ
ಹೊಸ ಮಾವಿನ ಮರಗಳ ಸವರುವಿಕೆ, ಫಸಲು ನೀಡುತ್ತಿರುವ ಮರಗಳಲ್ಲಿ ಸವರುವಿಕೆ ಹೀಗೆ ಎರಡು ವಿಧಗಳಿವೆ. ಶ್ರೀನಿವಾಸಪುರ, ಕೋಲಾರ ಹಾಗೂ ಮುಳಬಾಗಿಲು ತಾಲೂಕಿನಲ್ಲಿ ಮಾವು ಬೆಳೆಯುವ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಈ ಪ್ರಾತ್ಯಕ್ಷಿಕೆಯನ್ನು ನಡೆಸಿದ್ದು. ಉತ್ತಮ ಇಳುವರಿ ಹಾಗೂ ಗುಣಮಟ್ಟದ ಹಣ್ಣನ್ನು ರೈತರು ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9480100394.












Click it and Unblock the Notifications