ಸಂದರ್ಶನ: ಆಂದೋಲನ ಭಾಷೆಯಲ್ಲಿ ನಡೆಯಲ್ಲ, ಭಾವನೆಗಳಲ್ಲಿ ನಡೆಯುತ್ತದೆ; ಉತ್ತರ ಮತ್ತು ದಕ್ಷಿಣ ಒಂದಾಗಬೇಕು…
ಕಳೆದ ಮೂರು ದಿನಗಳಿಂದ ಕರ್ನಾಟಕದಲ್ಲಿ ರೈತ ಸಭೆಗಳು, ಜಾಥಾಗಳಲ್ಲಿ ಭಾಗವಹಿಸಲು ಬಂದಿರುವ ದೆಹಲಿಯ ರೈತ ಚಳುವಳಿಯ ನೇತಾರ ರಾಕೇಶ್ ಟಿಕಾಯತ್ ಮಾರ್ಚ್ 19 ರಂದು ಶುಕ್ರವಾರ ಬೆಂಗಳೂರಿಗೆ ಬಂದವರು, ವಿಮಾನ ನಿಲ್ದಾಣದಿಂದ ನೇರ ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರ ಮನೆಗೆ ಬಂದರು. ಪ್ರೊ.ಎಂಡಿಎನ್ ಮನೆಯ ಮುಂದೆ ನೆರೆದಿದ್ದ ರೈತರು ಮತ್ತು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅವರು ಟಿಕಾಯತ್ರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಒಂದೆರಡು ನಿಮಿಷ ಕುಶಲೋಪರಿ ಮಾತನಾಡಿದ ಬಳಿಕ ಅವರು, ವಿಶ್ರಾಂತಿ ಪಡೆಯುವ ಕೋಣೆಗೆ ಹೊರಟರು. ಅದು ಪ್ರೊ.ಎಂಡಿಎನ್ ಅವರು ತಮ್ಮ ಅಧ್ಯಯನಕ್ಕೆ ಹಾಗೂ ವಿಶ್ರಾಂತಿಗಾಗಿ ಬಳಸುತ್ತಿದ್ದ ರೂಮ್ ಆಗಿತ್ತು. ಆ ಬಗ್ಗೆ ಕುತೂಹಲದಿಂದ ಅವರನ್ನು ಮಾತಿಗೆಳೆದಾಗ ಹಲವು ವಿಷಯಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ.
ರೈತರ ಚಳವಳಿ ಮುಂದುವರೆಯಲಿದೆ; ರಾಕೇಶ್ ಟಿಕಾಯತ್
ಸಂಬಂಧಗಳಿಗೆ ತುಂಬಾ ಬೆಲೆ ಕೊಡ್ತಿದ್ರು
1. ಪ್ರೊ. ಎಂಡಿಎನ್ ಅವರ ಮನೆಗೆ ಬಂದಾಗ ನಿಮಗೆ ಮೊದಲಿಗೆ ಏನು ನೆನಪಾಗುತ್ತದೆ?
ರಾಕೇಶ್ ಟಿಕಾಯತ್: ಪ್ರೊಫೆಸರ್ ಮನೆಗೆ ಬಂದಾಗ ಅವರ ಪುಸ್ತಕಗಳು, ಇಲ್ಲಿರುವ ವಸ್ತುಗಳು ಎಲ್ಲವನ್ನೂ ನೋಡ್ತಿದ್ರೆ, ಅದೊಂದು ಚಳವಳಿಯ ಮ್ಯೂಸಿಯಂ ತರ ಕಾಣ್ತದೆ. ಅದೆಲ್ಲಾ ನೋಡಿದಾಗ ಎಂಡಿಎನ್ ಅವರ ವಿಚಾರಧಾರೆಗಳು ನಮ್ಮ ಅರಿವಿಗೆ ಮತ್ತೆ ಮತ್ತೆ ಬರುತ್ತವೆ. ನಮ್ಮ ಮತ್ತು ಪ್ರೊಫೆಸರ್ ಕುಟುಂಬದ ಸಂಬಂಧ ಕೇವಲ ಸಾಂಘಿಕ ಸಂಬಂಧ ಅಷ್ಟೇ ಅಲ್ಲ. ಇದು ಮೂರ್ನಾಲ್ಕು ದಶಕದ ಕೌಟುಂಬಿಕ ಸಂಬಂಧ. ಇಲ್ಲಿಗೆ ಬಂದರೆ ನಮ್ಮ ಮನೆಗೆ ಬಂದ ಹಾಗೆಯೇ ಅನಿಸುತ್ತದೆ. ಅವರು ಸಂಬಂಧಗಳಿಗೆ ತುಂಬಾ ಬೆಲೆ ಕೊಡ್ತಿದ್ರು.
ಅಂತಾರಾಷ್ಟ್ರೀಯ ಕೃಷಿ ಪಾಲಿಸಿಗಳ ಬಗ್ಗೆ ಹೇಳುತ್ತಿದ್ದರು
2. ನಿಮ್ಮ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಅವರ ಸಮಕಾಲೀನರಾದ ಎಂಡಿಎನ್ ಅವರೊಂದಿಗೆ ನಿಮ್ಮನ್ನು ಹೇಗೆ ಗುರುತಿಸಿಕೊಳ್ಳುತ್ತೀರಿ? ಮತ್ತು ಅವರನ್ನು ಹೇಗೆ ನೆನಪಿಸಿಕೊಳ್ತೀರಿ?
ರಾಕೇಶ್ ಟಿಕಾಯತ್: ಈ ಮನೆಯಲ್ಲಿದ್ದಾಗ ನನಗೆ, ಅವರು ರೈತರ ವಿಚಾರಗಳನ್ನು ಮಾತಾಡುತ್ತಿದ್ದದ್ದು, ಅಂತಾರಾಷ್ಟ್ರೀಯ ಕೃಷಿ ಪಾಲಿಸಿಗಳ ಬಗ್ಗೆ ಅವರು ಹೇಳ್ತಿದ್ದದ್ದು, 93ರಲ್ಲಿ GATT ಒಪ್ಪಂದ ಬಂದಾಗ ಅದರ ಬಗ್ಗೆ ಅರ್ಥೈಸುತ್ತಿದ್ದದ್ದು ಎಲ್ಲಾ ನೆನಪಿಗೆ ಬರುತ್ತೆ.
ಕೃಷಿ ನಿಯಂತ್ರಣಕ್ಕೆ ಹಲವು ಕಾನೂನು ಬರಲಿವೆ; ಟಿಕಾಯತ್ ಎಚ್ಚರಿಕೆ
3. ಈಗ ಅವರ ಮಕ್ಕಳಿಗೆ ಏನು ಹೇಳಲಿಕ್ಕೆ ಇಚ್ಛೆ ಪಡ್ತೀರಿ?
ರಾಕೇಶ್ ಟಿಕಾಯತ್: ದೇಶದ ಯಾವುದೇ ಭಾಗಕ್ಕೆ ಹೋದರೂ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾರತದ ಎಲ್ಲಿಗೆ ಹೋದರೂ ಪ್ರೊ.ಎಂಡಿಎನ್ ಅವರ ವಿಚಾರಧಾರೆಗಳ ಪರಿಚಯ ರೈತರಿಗಿದೆ. ಅವರು ಹೇಳುತ್ತಿದ್ದ ವಿಷಯಗಳನ್ನು ಅರ್ಥ ಮಾಡಿಕೊಂಡ ರೈತರಿದ್ದಾರೆ. ಪ್ರೊಫೆಸರ್ vision ಏನಿತ್ತು ಅದನ್ನು ಅವರ ಮಕ್ಕಳಾದ ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ಮುಂದುವರೆಸುವ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಇದಕ್ಕೆ ಭಾಷೆಯ ತೊಡಕು ಬರುವುದಿಲ್ಲ.
ಇಡೀ ದೇಶದಲ್ಲಿ ಚಳುವಳಿಯನ್ನು ಕಟ್ಟಿದರು
ನನ್ನ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಸಾಬ್ ಅವರಿಗೆ ಇಂಗ್ಲೀಷ್, ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಪ್ರೊ.ಎಂಡಿಎನ್ ಅವರಿಗೆ ಹಿಂದಿ ಬರುತ್ತಿರಲಿಲ್ಲ. ಆದರೂ ಅವರೀರ್ವರೂ ಇಡೀ ದೇಶದಲ್ಲಿ ಚಳುವಳಿಯನ್ನು ಕಟ್ಟಿದರು. ಆಂದೋಲನ ಭಾಷೆಯಲ್ಲಿ ಆಗಲ್ಲ, ಭಾವನೆಗಳಲ್ಲಿ ನಡೆಯುವುದು. ಭಾಷೆ ಚಳವಳಿಗೆ ಎಂದೂ ಅಡ್ಡ ಬರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರೊ. ಮಕ್ಕಳು ಇಡೀ ದೇಶ ಸುತ್ತಿ ರೈತರನ್ನು ಸಂಘಟಿಸಬೇಕು.
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಯುವ ಚಳುವಳಿಗಾರರನ್ನು ಸೇರಿಸಿ ಅಮೃತಭೂಮಿಯಲ್ಲಿ ಹೊಸ ಸಮಸ್ಯೆಗಳು ಸವಾಲುಗಳ ಬಗ್ಗೆ ಮೂರ್ನಾಲ್ಕು ದಿನಗಳ ಅಧ್ಯಯನ ಶಿಬಿರಗಳನ್ನು ಏರ್ಪಡಿಸಬೇಕು. ಇಡೀ ದೇಶದಲ್ಲಿ ಅಂಥಾ ಕೇಂದ್ರಗಳು ಸ್ಥಾಪನೆ ಆಗಬೇಕು. ಈಗ್ಗೆ 20-25 ವರ್ಷಗಳ ಹಿಂದೆಯೇ ಪ್ರೊ.ಎಂಡಿಎನ್ ಅವರಿಗೆ ಅಂತಹ ಕೇಂದ್ರದ ಅಗತ್ಯತೆ ತಿಳಿದಿತ್ತು. ಅದಕ್ಕೇ ಅವರು ಅಮೃತಭೂಮಿ ಸ್ಥಾಪಿಸಿದರು.
Recommended Video
4. ರೈತರ ವಿಚಾರವಾಗಿ ಈಗಿನ ದಿನಗಳಲ್ಲಿ ದೇಶದ ಪರಿಸ್ಥಿತಿ ಹೇಗಿದೆ ?
ರಾಕೇಶ್ ಟಿಕಾಯತ್: ಇವತ್ತಿನ ದಿನಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹಿಂದಿನ ಸರ್ಕಾರಗಳು ರೈತರ ಜೊತೆ ಚರ್ಚೆ ಮಾಡ್ತಿದ್ವು. ಸಮಾಧಾನವಾಗಿ ಮಾತನಾಡ್ತಿದ್ವು. ಇಂದು ಸರ್ಕಾರ ರೈತರ ಜೊತೆ ಮಾತನಾಡುವ ಬದಲು ಕಂಪನಿಗಳ ಜೊತೆ ಮಾತಾಡ್ತಿವೆ. ಅವುಗಳ ಪ್ರಭಾವಕ್ಕೆ ಒಳಗಾಗಿವೆ. ಹಾಗಾಗಿಯೇ ಇವತ್ತು ಇಷ್ಟು ದೊಡ್ಡ ಆಂದೋಲನ ನಡೀತಿರೋದು.
ಈ ಚಳುವಳಿಯನ್ನು ಇನ್ನೂ ದೊಡ್ಡದಾಗಿ ಮಾಡಬೇಕಿದೆ. ಇದನ್ನು ನಾವು ಕೈಬಿಟ್ಟರೆ ಮುಂದಿನ ದಿನಗಳಲ್ಲಿ ರೈತರು ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಈಗ ನಡೀತಿರೋದು ರೊಟ್ಟಿಯ, ಅನ್ನದ ಆಂದೋಲನ. ಅನ್ನದ ಮೇಲೆ, ಹಸಿವಿನ ಮೇಲೆ ವ್ಯಾಪಾರ ಆಗಬಾರದು. ನಮ್ಮ ಊಟದ ಮೇಲೆ ಕಂಪನಿಗಳು ಅಧಿಕಾರ ಸ್ಥಾಪಿಸಬಾರದು. ಈ ವಿಷಯವನ್ನು ನಮ್ಮ ರೈತರ ಅಂತಾರಾಷ್ಟ್ರೀಯ ವೇದಿಕೆ ಏನಿದೆ, ಅದರ ಮುಂದೆಯೇ ತೆಗೆದುಕೊಂಡು ಹೋಗಬೇಕು. ಈಗಿನ ಪರಿಸ್ಥಿತಿಯನ್ನು ಬದಲಾವಣೆ ಮಾಡುವ ಕಡೆಗೆ ಪ್ರಯತ್ನಿಸಲು ಎಲ್ಲರೂ ಸೇರಬೇಕು, ಚಳುವಳಿ ಮುಂದುವರೆಸಬೇಕು.