ಜಾನುವಾರು ಮೇವು, ನಿರ್ವಹಣಾ ವೆಚ್ಚದಿಂದ ಕಂಗಾಲಾದ ರೈತರು: ಹಾಲಿನ ದರ ಏರಿಕೆಗೆ ಒತ್ತಾಯ
ಬೆಂಗಳೂರು, ಜುಲೈ 14; ಹಣದುಬ್ಬರ ಈಗ ಎಲ್ಲಾ ಕ್ಷೇತ್ರಗಳನ್ನೂ ಬಾಧಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕೃಷಿ ವಲಯದ ಮೇಲೂ ಹಣದುಬ್ಬರ ಪರಿಣಾಮ ಬೀರಿದೆ, ಬಿತ್ತನೆ ಬೀಜ, ರಸಗೊಬ್ಬರದ ಬೆಲೆ ಕೂಡ ಹೆಚ್ಚಾಗಿದೆ. ಅದೇ ರೀತಿ, ಕೃಷಿ ವಲಯಕ್ಕೆ ಪೂರಕವಾದ ಪಶುಸಂಗೋಪನೆ, ಡೈರಿ ವಲಯದ ಮೇಲೂ ಹಣದುಬ್ಬರ ಪ್ರಭಾವ ಬೀರಿದೆ.
ದುಬಾರಿ ಇಂಧನ ಬೆಲೆ, ಸಾಗಾಟ ವೆಚ್ಚಗಳ ಹೆಚ್ಚಳದಿಂದ ಬಲವಾದ ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತಿರುವ ಡೈರಿ ಸಂಘಟನೆ ಕೂಡ ಹೊಡೆತ ತಿಂದಿದೆ. ಸಂಘಟಿತ ಸಂಗ್ರಹಣೆ, ಮಾರುಕಟ್ಟೆ ಮತ್ತು ತುಲನಾತ್ಮಕವಾಗಿ ಸುಗಮ ಪ್ರಕ್ರಿಯೆಯ ಅನುಕೂಲಗಳ ಹೊರತಾಗಿಯೂ ದಾಖಲೆಯ ಹೆಚ್ಚಿನ ವೆಚ್ಚಗಳು ಡೈರಿ ವಲಯವನ್ನು ಬಿಕ್ಕಟ್ಟಿಗೆ ತಳ್ಳುತ್ತಿವೆ.
ಎಲ್ಲ ರೀತಿಯ ಜಾನುವಾರು ಮೇವಿನ ಬೆಲೆ ಏರಿಕೆಯಾಗಿದೆ. ಉದಾಹರಣೆಗೆ 50 ಕೆಜಿ ಗೋಧಿ ಒಣಹುಲ್ಲಿನ ಚೀಲದ ಬೆಲೆ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮೊದಲು 850 ರುಪಾಯಿ ಇದ್ದರೆ ಈಗ 1,200 ರುಪಾಯಿಗಳಿಗೆ ಹೆಚ್ಚಳವಾಗಿದೆ. ಕಡಲೆಕಾಯಿ ಹಿಂಡಿ ಬೆಲೆ ಕೆ.ಜಿ.ಗೆ 45 ರುಪಾಯಿಗೆ ಹೆಚ್ಚಾಗಿದೆ. ಹುಲ್ಲಿನ ಬೆಲೆ 2019 ರಲ್ಲಿ 5 ಕೆಜಿಗೆ 12 ರುಪಾಯಿ ಇದ್ದದ್ದು ಈಗ 25 ರೂ.ಗೆ ಏರಿಕೆಯಾಗಿದೆ.
ಅಧಿಕ ವೆಚ್ಚದಿಂದ ರೈತರಿಗೆ ಹೊರೆ; "ಮೇವು ಖರೀದಿಸುವುದು ಕಾರ್ಯಸಾಧ್ಯವಲ್ಲ. ಒಂದು ಹಸು ವರ್ಷಕ್ಕೆ ಗರಿಷ್ಠ 3,000 ಲೀಟರ್ ಹಾಲು ನೀಡಬಲ್ಲದು, ಅದರ ಮೌಲ್ಯ ಸುಮಾರು 90,000 ರುಪಾಯಿ ಮತ್ತು ಅದರ ಗೊಬ್ಬರವು ಸುಮಾರು 5,000 ರುಪಾಯಿ ಆದರೆ ಇದಕ್ಕಾಗಿ ಒಬ್ಬ ರೈತ ಮೇವು, ಕೂಲಿ, ಔಷಧ ಮತ್ತಿತರ ವೆಚ್ಚ ಸೇರಿ 90 ಸಾವಿರಕ್ಕೂ ಹೆಚ್ಚು ಹಣ ಬಂಡವಾಳ ಹೂಡಬೇಕು" ಎನ್ನುತ್ತಾರೆ ಮೈಸೂರಿನ ರೈತ ಪ್ರಶಾಂತ್ ಜಯರಾಂ.
ಚಿಕ್ಕಬಳ್ಳಾಪುರದ ಹೈನುಗಾರ ರಾಜಗೋಪಾಲ್, "ರೈತರು ತಮ್ಮ ಎಲ್ಲಾ ಜಾನುವಾರುಗಳಿಗೆ ಆಹಾರವನ್ನು ನೀಡಬೇಕು, ಆದರೆ ಎಲ್ಲಾ ಜಾನುವಾರುಗಳೂ ಏಕಕಾಲದಲ್ಲಿ ಹಾಲು ಕೊಡುವುದಿಲ್ಲ" ಎಂದು ಹೇಳುತ್ತಾರೆ.

ರೈತರಿಂದ ಹಾಲು ಸಂಗ್ರಹಣೆ ದರ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ. ಕರ್ನಾಟಕದಾದ್ಯಂತ ಡೈರಿ ಸಹಕಾರಿ ಸಂಘಗಳು ಪ್ರತಿ ಲೀಟರ್ಗೆ ಗರಿಷ್ಠ 34 (ಕನಿಷ್ಠ ರೂ 27) ರುಪಾಯಿ ನೀಡುತ್ತಿದ್ದು, 5 ರುಪಾಯಿ ಸರ್ಕಾರದ ಸಬ್ಸಿಡಿ ನೀಡುತ್ತಿದೆ. ಆದರೆ ಈಗಿನ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಕನಿಷ್ಠ 50 ರುಪಾಯಿಗೆ ಹೆಚ್ಚಳ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications