ಭಾರತದಲ್ಲಿ ನ.27ರವರೆಗೆ 306.06 ಲಕ್ಷ ಟನ್ ಭತ್ತ ಸಂಗ್ರಹ: ಕೇಂದ್ರ
ಬೆಂಗಳೂರು, ನವೆಂಬರ್ 28: ಪ್ರಸಕ್ತ ಸಾಲಿನ 2022-23 ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಕೇಂದ್ರ ಸರ್ಕಾರ ಈವರೆಗೆ ಒಟ್ಟು 306.06 ಲಕ್ಷ ಟನ್ಗಳಷ್ಟು ಭತ್ತ ದಾಸ್ತಾನು ಮಾಡಿಕೊಂಡಿದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.
ಸಾಮಾನ್ಯವಾಗಿ ಮುಂಗಾರು ಮಳೆ (ನೈರುತ್ಯ) ಕೊನೆಯಾಗಿ ಹಿಂಗಾರು (ಈಶಾನ್ಯ) ಮಳೆ ಆರಂಭವಾಗುವ ಅಕ್ಟೋಬರ್ನಿಂದ ಭತ್ತ ಸಂಗ್ರಹಣೆ ಪ್ರಾರಂಭವಾಗುತ್ತದೆ. ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಸೆಪ್ಟೆಂಬರ್ನಿಂದ ತಿಂಗಳಿನಿಂದ ಖರೀದಿ ಪ್ರಾರಂಭವಾಗುತ್ತದೆ.
Karnataka Rains : ಕರ್ನಾಟಕದಲ್ಲಿ ಮೂರು ದಿನ ಸಾಧಾರಣ ಮಳೆ ಸಾಧ್ಯತೆ
ಅದೇ ರೀತಿ ಈವರೆಗೆ ಕೇಂದ್ರ ಸರ್ಕಾರ ಪಂಜಾಬ್, ಹರಿಯಾಣ, ಛತ್ತೀಸ್ಗಢ ಮತ್ತು ತೆಲಂಗಾಣ ರಾಜ್ಯಗಳ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಖರೀದಿಸಿ ತಂದು ಸಂಗ್ರಹಿಸಿಟ್ಟುಕೊಂಡಿದೆ.
ಕೇಂದ್ರ ಸರ್ಕಾರ ಪ್ರಸಕ್ತ ವರ್ಷದಲ್ಲಿ (2022-23) 775.72 ಲಕ್ಷ ಟನ್ ಭತ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಹಿಂದಿನ ಖಾರಿಫ್ ಮಾರುಕಟ್ಟೆ 759.32 ಲಕ್ಷ ಟನ್ಗಳಷ್ಟು ದಾಖಲೆಯ ಮಟ್ಟದಲ್ಲಿ ಸಂಗ್ರಹಿಡಲಾಗಿತ್ತು. ಸದ್ಯದ ಅಂಕಿ ಅಂಶಗಳ ಪ್ರಕಾರ ಈ ವರ್ಷ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ನವೆಂಬರ್ 27ರವರೆಗೆ 306.06 ಲಕ್ಷ ಟನ್ ಭತ್ತ ಖರೀದಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 280.51 ಲಕ್ಷ ಟನ್ ಆಗಿತ್ತು ಎಂದು ತಿಳಿದು ಬಂದಿದೆ.
ವಿವಿಧ ರಾಜ್ಯಗಳಲ್ಲಿನ ಭತ್ತ ಸಂಗ್ರಹದ ವಿವರ
ಪಂಜಾಬ್ನಲ್ಲಿ ಹಿಂದಿನ ವರ್ಷ ಇದೇ ಅವಧಿಯಲ್ಲಿ ಭತ್ತ ಸಂಗ್ರಹಣೆ 186.79 ಲಕ್ಷ ಟನ್, ಈ ವರ್ಷ 181.62 ಲಕ್ಷ ಟನ್ ಸಂಗ್ರಹ ಮೂಲಕ ಶೇ. 2.76 ಕುಸಿತ ಕಂಡು ಬಂದಿದೆ. ಅದೇ ರೀತಿ ಹರಿಯಾಣದಲ್ಲಿ ಧಾನ್ಯದ ಖರೀದಿಯು ಶೇ. 8.18ರಷ್ಟು ಹೆಚ್ಚಾಗಿ ಅಂದರೆ 58.96 ಲಕ್ಷಕ್ಕೆ ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಆ ರಾಜ್ಯದಲ್ಲಿ 54.50 ಲಕ್ಷ ಟನ್ಗಳಷ್ಟಿತ್ತು. ಛತ್ತೀಸ್ಗಢದಲ್ಲಿ ಈ ಬಾರಿ 16.88 ಲಕ್ಷ ಟನ್ ತಲುಪಿದೆ.
ತೆಲಂಗಾಣ ರಾಜ್ಯದಲ್ಲಿ ಪ್ರಸಕ್ತ ವರ್ಷ ಭತ್ತ ಸಂಗ್ರಹಣೆ ಈವರೆಗೆ 16.18 ಲಕ್ಷ ಟನ್ಗಳಷ್ಟು ಆಗಿದೆ. ಕಳೆದ ವರ್ಷ ಅಲ್ಲಿ 10.94 ಲಕ್ಷ ಟನ್ಗಳಷ್ಟಿತ್ತು. ಉತ್ತರ ಪ್ರದೇಶದಲ್ಲಿ ಭತ್ತದ ಖರೀದಿ 9.20 ಲಕ್ಷ ಟನ್ಗಳಿಂದ 10.28 ಲಕ್ಷ ಟನ್ಗಳಿಗೆ ಈ ವರ್ಷ ಏರಿಕೆ ಆಗಿದೆ.
ಭತ್ತದ ಖರೀದಿಯನ್ನು ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ) ಮತ್ತು ಖಾಸಗಿ ಏಜೆನ್ಸಿಗಳು ಕೈಗೊಳ್ಳುತ್ತವೆ. ಭತ್ತವನ್ನು ರೈತರಿಂದ ನೇರವಾಗಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ ಎಂದು ಕೇಂದ್ರ ಆಹಾರ ಸಚಿವಾಲಯ ಮಾಹಿತಿ ನೀಡಿದೆ.