15 ದಿನದಿಂದ ಈ ಮಹಿಳೆಯರು ನೀರಿನಲ್ಲೇ ಇದ್ದಾರೆ
ಖಾಂಡ್ವಾ (ಮಧ್ಯಪ್ರದೇಶ), ಸೆ. 8: ಭಾರತಕ್ಕೂ ಸತ್ಯಾಗ್ರಹಗಳಿಗೂ ಎಂಥದೋ ಅವಿನಾಭಾವ ಸಂಬಂಧ. ನಮ್ಮ ದೇಶ ಎಂತೆಂತಹದೋ ಸತ್ಯಾಗ್ರಹಗಳನ್ನು ನೋಡಿ- ಬಿಟ್ಟಿದೆ. ಆದರೆ ಇದ್ಯಾವುದಿದು ಇಲ್ಲಿ ನಡೆದಿರುವ ಸತ್ಯಾಗ್ರಹ.

ಮಧ್ಯಪ್ರದೇಶದ ನರ್ಮದಾ ಕಣಿವೆಯ ಆಯಕಟ್ಟಿನ ಜಾಗದಲ್ಲಿರುವ ಖಾಂಡ್ವಾ ಪ್ರದೇಶದ ಘೋಗಲ್ ಗ್ರಾಮವಿದು. ಇಂದಿಗೆ (ಸೆ. 8) 15 ದಿನಗಳಿಂದ ಗ್ರಾಮದ 51 ಮಂದಿ ಸಾಂಕೇತಿಕವಾಗಿ ಜಲ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಯಾಕಪ್ಪಾ ಅಂದರೆ, ಮಧ್ಯ ಪ್ರದೇಶದಲ್ಲಿ ಇಂದಿರಾ ಸಾಗರ ಮತ್ತು ಓಂಕಾರೇಶ್ವರ ಎಂಬ ಅಣೆಕಟ್ಟು ಇದೆ. ಸುಪ್ರೀಂಕೋರ್ಟಿನ ಆದೇಶಕ್ಕೆ ಎಳ್ಳುನೀರು ಬಿಟ್ಟಿರುವ ಮಧ್ಯಪ್ರದೇಶ ಸರಕಾರ ಆಗಸ್ಟ್ 24ರಂದು ಈ ಅಣೆಕಟ್ಟೆಗಳ ಎಲ್ಲ ಗೇಟುಗಳನ್ನು ಅಕ್ರಮವಾಗಿ ತೆರೆದಿಟ್ಟುಬಿಟ್ಟಿದೆ. ಇದರಿಂದ ಘೋಗಲ್ ಸೇರಿದಂತೆ ಸುಮಾರು 30 ಹಳ್ಳಿಗಳು ಮುಳುಗಡೆಯಾಗಿವೆ.
ಎಲ್ಲಿಯವರೆಗೆ ಈ ಜಲ ಸತ್ಯಾಗ್ರಹ?:
ಹಿನ್ನೀರಿನಲ್ಲಿ ಘೋಗಲ್ ಗ್ರಾಮಸ್ಥರ ಬದುಕು, ಭವಿಷ್ಯ, ಸಂಸ್ಕೃತಿ ನೀರು ಪಾಲಾಗಿದೆ. ಹಾಗಾಗಿ, ಸಂತ್ರಸ್ತಗೊಂಡ ಗ್ರಾಮಸ್ಥರು ಪರಿಹಾರ ಕೋರಿ ಈ ವಿನೂತನ ಪ್ರತಿಭಟನೆಯಲ್ಲಿ ನೀರು ಪಾಲಾಗಿದ್ದಾರೆ. ನೀರಿನ ಮಟ್ಟ ತಗ್ಗಿಸದ ಹೊರತು ಮತ್ತು 5 ಎಕರೆ ಜಮೀನು ವಿತರಿಸದ ಹೊರತು, ಕೃಷಿ ಕಾರ್ಮಿಕರಿಗೆ 2.5 ಲಕ್ಷ ರೂ. ಪರಿಹಾರ ಸಂದಾಯವಾಗದ ಹೊರತು ನಾವು ನೀರಿನಿಂದ ಎದ್ದು ಬರುವುದಿಲ್ಲ ಎಂದು ಪ್ರತಿಭಟನಾಕಾರರು ಜಲಗ್ರಸ್ಥರಾಗಿದ್ದಾರೆ.
ಅವರ ಆರೋಗ್ಯವೋ ಆ ಓಂಕಾರೇಶ್ವರನೇ ಬಲ್ಲ. ಆದರೆ ಸರಕಾರಕ್ಕೆ ಮಾತ್ರ 'ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ'. ಕನಿಷ್ಠ ವೈದ್ಯಕೀಯ ನೆರವನ್ನೂ ಒದಗಿಸಿಲ್ಲ. ಸ್ಥಳೀಯ ಆಡಳಿತವೂ 15 ದಿನಗಳಿಂದ ಈ ಕಡೆ ತಲೆಹಾಕಿಲ್ಲ. ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಣ್ಮುಚ್ಚಿ ಕುಳಿತಿದ್ದಾರೆ. ಆದರೆ ಓಂಕಾರೇಶ್ವರ ಗ್ರಾಮಸ್ಥರು ಮಾತ್ರ ನೀರಿನಿಂದ ಎದ್ದುಬರುವುದಿಲ್ಲ ಎಂದಿದ್ದಾರೆ.












Click it and Unblock the Notifications