ರೈತರನ್ನು ಕಡೆಗಣಿಸುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕು
"ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ (ಸಿ2+50%) ನೀಡುತ್ತೇವೆ ಎಂದು ಚುನಾವಣಾ ಪ್ರಚಾರ ಭಾಷಣಗಳಲ್ಲಿ ಹೇಳಿದ್ದರು. ಅಧಿಕಾರಕ್ಕೆ ಬಂದ ನಂತರ ಸ್ವಾಮಿನಾಥನ್ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್ ನೀಡಿತು.''
"ಎರಡನೇ ಬಾರಿ ಅಧಿಕಾರಕ್ಕೆ ಬರುವಾಗ ರೈತರ ಆದಾಯವನ್ನು 2022ಕ್ಕೆ ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂತು. ಇನ್ನು ಕೆಲವು ತಿಂಗಳು ಮಾತ್ರ ಬಾಕಿ ಉಳಿದಿದೆ. ರೈತರ ಆದಾಯದ ಬದಲು ಉತ್ಪಾದನಾ ವೆಚ್ಚವನ್ನು ಏರಿಕೆ ಮಾಡುವ ಕೆಲಸ ಆಗಿದೆ. ರೈತರು ಬಳಸುವ ಡೀಸೆಲ್, ರಸಗೊಬ್ಬರ, ಕೃಷಿ ಒಳಸುರಿಗಳು ಹಾಗೂ ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಲಾಗಿದೆ. ಜೊತೆಗೆ ರೈತರನ್ನು ಸರ್ವನಾಶ ಮಾಡುವ ಮರಣಶಾಸನ ಕಾಯ್ದೆಗಳನ್ನು ಬರೆಯಿತು.''
"ಈ ರೀತಿಯಾಗಿ ಪ್ರಧಾನಮಂತ್ರಿಗಳು ರೈತರನ್ನು ಮೋಸಗೊಳಿಸುತ್ತಾ ಹುಸಿ ಭರವಸೆಗಳನ್ನು ನೀಡುತ್ತಾ ಅಧಿಕಾರ ನಡೆಸುತ್ತಿದ್ದಾರೆ. ರೈತರನ್ನು ವಂಚಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ನೀಡುವ ಎಂಎಸ್ಪಿ ಶಾಸನಬದ್ಧವಾಗಿ ಖಾತ್ರಿಪಡಿಸಿ ನೀಡುವಂತಾಗಬೇಕು ಎಂದು ವರದಿ ನೀಡಿದ ಮೋದಿಯವರು, ಪ್ರಧಾನಿಯಾಗಿ ಅದು ಸಾಧ್ಯವಿಲ್ಲ ಎನ್ನುತ್ತಾರೆ.''

"ಇಂತಹ ಇಬ್ಬಗೆಯ ನೀತಿಯನ್ನು ಅನುಸರಿಸಿ ರೈತರನ್ನು ವಂಚಿಸುತ್ತಿದ್ದಾರೆ. ರೈತರ ರಸಗೊಬ್ಬರಕ್ಕೆ ನೀಡುತ್ತಿದ್ದ 1,30,000 ಲಕ್ಷ ಸಬ್ಸಿಡಿಯನ್ನು ಕಡಿಮೆ ಮಾಡಿ ಇದರಲ್ಲಿ ಉಳಿಕೆಯಾಗುವ ಹಣವನ್ನು ರೈತರಿಗೆ 6000 ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡುತ್ತೇನೆಂದು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲಾ ರೈತದ್ರೋಹಿ ನೀತಿಗಳು.''
"220 ದಿನಗಳಿಂದ ದೆಹಲಿಯಲ್ಲಿ 550ಕ್ಕೂ ಹೆಚ್ಚು ಚಳವಳಿ ನಿರತ ರೈತರು ಹುತಾತ್ಮರಾಗಿದ್ದಾರೆ. ಆದರೂ ಸಹ ಪ್ರಧಾನಮಂತ್ರಿಗಳಿಗೆ ಮನಸ್ಸು ಕರಗಲಿಲ್ಲ. ಭಾರತ ದೇಶ ಹೆಚ್ಚು ರೈತರನ್ನು ಹೊಂದಿರುವ ದೇಶ. ರೈತರನ್ನು ನಿರ್ಲಕ್ಷ್ಯ ಮಾಡುವುದು ಯಾವ ಸರ್ಕಾರಕ್ಕೂ ಶೋಭೆ ತರುವುದಿಲ್ಲ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಿದೆಯೇನೋ ಎಂಬಂತೆ ಭಾಸವಾಗುತ್ತಿದೆ.''
"ಇಂತಹ ನಡವಳಿಕೆಯನ್ನು ಖಂಡಿಸಲು ಇಡೀ ದೇಶದ ರೈತರು ನಿರಂತರ ಹೋರಾಟ ನಡೆಸಲು ಮುಂದಾಗಿದ್ದಾರೆ. ರೈತರ ವಿಚಾರದಲ್ಲಿಯೇ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ. ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಮುಂದಿನ ಉತ್ತರಪ್ರದೇಶದ ಚುನಾವಣೆ ಬಿಜೆಪಿ ಪಾಲಿಗೆ ಮರಣಮೃದಂಗವಾಗುತ್ತದೆ ಎಂಬುದನ್ನು ಅರಿಯಬೇಕು.''
ಕುರುಬೂರು ಶಾಂತಕುಮಾರ್
ರಾಜ್ಯ ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ.
ಸಂಚಾಲಕರು, ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ.












Click it and Unblock the Notifications