ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ಮುಂದಾದ ನೂರಾರು ರೈತರ ಬಂಧನ
ಮಂಡ್ಯ, ಜೂನ್ 28: ತಮ್ಮ ಜಮೀನಿನ ಕಾಲುವೆಗಳಿಗೆ ಕೆಆರ್ಎಸ್ ಅಣೆಕಟ್ಟೆಯಿಂದ ತಕ್ಷಣವೇ ನೀರು ಹರಿಸುವಂತೆ ಆಗ್ರಹಿಸಿ ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸಿದ ರೈತರು ಇಂದು ಕೆಆರ್ ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಮುಂದಾದ ವೇಳೆ ಪೊಲೀಸರು ಬಂಧಿಸಿದ್ದಾರೆ.
ರೈತರು ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮಂಡ್ಯದ ಕಾವೇರಿ ಪ್ರಾಧಿಕಾರದ ಎದುರಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಇಂದು ಕೆಆರ್ ಎಸ್ ಅಣೆಕಟ್ಟೆ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳಕ್ಕೆ ಬಂದ ರೈತರು, ನೀರು ಹರಿಸುವಂತೆ ಒತ್ತಾಯಿಸಿ ಡ್ಯಾಂ ಮುತ್ತಿಗೆಗೆ ಯತ್ನಿಸಿದ್ದಾರೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದಾಗ ಪೊಲೀಸರು ನೂರಾರು ರೈತರನ್ನು ಬಂಧಿಸಿದ್ದಾರೆ.
ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಅವರನ್ನು ಬಂಧಿಸಲಾಗಿದೆ. ಇನ್ನುಳಿದ ರೈತರನ್ನು ಸುಮಾರು ಐದು ಬಸ್ ಗಳಲ್ಲಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ಸಿಎಂಗೆ ಖಡಕ್ ವಾರ್ನಿಂಗ್: ನಮ್ಮ ನಾಲೆಗಳಿಗೆ ನೀರು ಬಿಡದೆ ಹೋದರೆ ಮಂಡ್ಯದಲ್ಲಿ ಅದು ಹೇಗೆ ಓಡಾಡುತ್ತೀರೋ ನೋಡೋಣ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ದೆಹಲಿಗೆ ಹೋಗಿ ಹೋರಾಟ ಮಾಡಿ ಎನ್ನುತ್ತೀರಿ. ನಿಮ್ಮನ್ನು ಆಯ್ಕೆ ಮಾಡಿರುವುದು ನಮ್ಮ ಕೆಲಸ ಮಾಡುವುದಕ್ಕೆ. ನಮ್ಮ ಅಹವಾಲನ್ನು ನೀವು ದೆಹಲಿಯಲ್ಲಿ ಪ್ರತಿನಿಧಿಸಬೇಕು. ಆದರೆ ನಮ್ಮ ಅಹವಾಲಿಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications