ಕೈ ಕೊಟ್ಟ ತಂಬಾಕು, ರೈತರ ಜೇಬು ತುಂಬಿಸಿದ ಪರ್ಯಾಯ ಬೆಳೆ
ಮೈಸೂರು, ಸೆಪ್ಟೆಂಬರ್ 08 : ಒಂದು ಕಾಲದಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯ ರೈತರು ತಂಬಾಕು ಬೆಳೆಯುವ ಮೂಲಕ ಬದುಕು ಕಂಡುಕೊಂಡಿದ್ದರು. ವಾಣಿಜ್ಯ ಬೆಳೆಯಾಗಿದ್ದ ತಂಬಾಕು ರೈತರ ಬದುಕನ್ನು ಹಸನುಗೊಳಿಸಿತ್ತು.
ಬದಲಾದ ಪರಿಸ್ಥಿತಿಯಲ್ಲಿ ಎಲ್ಲೆಡೆ ತಂಬಾಕು ನಿಷೇಧವಾಗುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ತಂಬಾಕು ಕೃಷಿಯನ್ನೇ ನಿಷೇಧಗೊಳಿಸುವ ಮಾತುಗಳು ಕೇಳಿಬರುತ್ತಿದೆ. ರೈತರು ಇದೀಗ ತಂಬಾಕು ಬೆಳೆಯತ್ತ ನಿರಾಸಕ್ತಿ ತೋರುತ್ತಿದ್ದು, ಪರ್ಯಾಯ ಕೃಷಿಯತ್ತ ಚಿತ್ತ ಹರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ತಂಬಾಕಿಗೆ ಉತ್ತಮ ದರ ಲಭಿಸದ ಕಾರಣದಿಂದಾಗಿ ಬಹಳಷ್ಟು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಾಡಿದ ಸಾಲಕಟ್ಟಲಾಗದೆ ಆತ್ಮಹತ್ಯೆಗೆ ಶರಣಾದ ಉದಾಹರಣೆಗಳು ಬೇಕಾದಷ್ಟಿವೆ. ಆದ್ದರಿಂದ ಬೇರೆ ಕೃಷಿಯತ್ತ ತೊಡಗಿಸಿಕೊಳ್ಳುತ್ತಿದ್ದಾರೆ.
ತಂಬಾಕು ಗಿಡ ನಾಟಿ ಮಾಡಿ ಅದು ಬೆಳೆದು ಕೊಯ್ಲುಗೆ ಬಂದು ಮುಂದೆ ಅದನ್ನು ಹದಗೊಳಿಸಿ ಮಾರುಕಟ್ಟೆಗೆ ತಲುಪುವ ತನಕ ಅದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಹಾಕಿದರೆ ಅದರಿಂದ ಯಾವ ಲಾಭವೂ ರೈತರಿಗೆ ದೊರೆತಂತೆ ಕಾಣುತ್ತಿಲ್ಲ.

ರೇಷ್ಮೆಯತ್ತ ಒಲವು
ಹುಣಸೂರು ತಾಲೂಕಿನ ಶೀರೇನಹಳ್ಳಿ ಗ್ರಾಮದ ರೈತ ಸಹದೇವೇಗೌಡ ಅವರು ತಂಬಾಕು ಬಿಟ್ಟು ಬೇರೆ ಬೆಳೆಯತ್ತ ಗಮನ ಹರಿಸಿದ್ದಾರೆ. ಹಾಗೆ ನೋಡಿದರೆ ಶೀರೇನಹಳ್ಳಿಯಲ್ಲಿ ಸುಮಾರು 150 ಜನ ತಂಬಾಕು ಲೈಸನ್ಸ್ ಹೊಂದಿರುವ ಕೃಷಿಕರಿದ್ದು, ಇವರ ನಡುವೆ ಸಹದೇವೇಗೌಡರು ಒಬ್ಬರಾಗಿದ್ದಾರೆ.
ಮೇಲಿಂದ ಮೇಲೆ ನಷ್ಟ ಅನುಭವಿಸಿದ ಕಾರಣ ಅವರು ತಂಬಾಕು ಕೃಷಿಯನ್ನು ಬಿಟ್ಟು ರೇಷ್ಮೆಯತ್ತ ಒಲವು ತೋರಿದ್ದಾರೆ. ಜತೆಗೆ ತರಕಾರಿಯನ್ನು ಬೆಳೆಯುತ್ತಿದ್ದು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.

ಪರ್ಯಾಯ ಬೆಳೆಗಳು ಯಾವುದು?
ಸಹದೇವೇಗೌಡರು ತಮಗೆ ಇರುವ ಮೂರು ಎಕರೆ ಜಮೀನಿನಲ್ಲಿ ರೇಷ್ಮೆ ಇಲಾಖೆಯಿಂದ 1.50 ಲಕ್ಷ ರೂ ಅನುದಾನ ಪಡೆದು ರೇಷ್ಮೆ ಹುಳು ಸಾಕಾಣೆಗೆ ಮನೆ ನಿರ್ಮಿಸಿಕೊಂಡಿದ್ದು 1 ಎಕರೆ ರೇಷ್ಮೆ, ಅರ್ಧ ಎಕರೆ ಶುಂಠಿ, ಉಳಿದ ಜಮೀನಿನಲ್ಲಿ ಹೆಸರು, ಉದ್ದು, ತೊಗರಿ, ಅಲಸಂದೆ, ಹೂ ಕೋಸು, ಎಲೆ ಕೋಸು, ಬದುಗಳಲ್ಲಿ ಸುತ್ತ 250 ತೇಗದ ಸಸಿ, ತುರುಕು ಬೇವು, ಸುಬ್ಬಾಬುಲ್ಲಾ, ನಿಂಬೆ, ಸೀತಾಫಲ, ಗೋಡಂಬಿ, ಅರಳು ಹಾಗೂ ಹಸುಗಳಿಗೆ ಸೀಮೆಹುಲ್ಲು ಬೆಳೆದಿದ್ದಾರೆ.

ಎರೆಹುಳು ಗೊಬ್ಬರ ತೊಟ್ಟಿ
ಸಹದೇವೇಗೌಡರು 18 ಸಾವಿರ ರೂ ಅನುದಾನದಲ್ಲಿ ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಮಾಡಿಕೊಂಡು ಎರೆಹುಳು ಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾರೆ. 2 ಹಸು, 2 ಮೇಕೆ ಹಾಗೂ 20 ನಾಟಿ ಕೋಳಿಗಳನ್ನು ಸಾಕಿದ್ದಾರೆ.

ಸಾಲಗಾರರು ಆಗಬೇಕಾಗುತ್ತದೆ
ಸಹ ದೇವೇಗೌಡರಿಗೆ ಪತ್ನಿ ಜ್ಯೋತಿ ಸಾಥ್ ನೀಡುತ್ತಿದ್ದಾರೆ. ಇದರಿಂದ ಒಂದಷ್ಟು ಆದಾಯ ಜತೆಗೆ ನೆಮ್ಮದಿಯಿದೆ. 'ತಂಬಾಕು ಬೆಳೆಗೆ ಹೆಚ್ಚಿನ ಬಂಡವಾಳ ಬೇಕು ಜತೆಗೆ ಉತ್ತಮ ದರ ಸಿಕ್ಕರೆ ಮಾತ್ರ ಬೆಳೆಗಾರನಿಗೆ ಲಾಭ. ಇಲ್ಲದೆ ಹೋದರೆ ಸಂಪೂರ್ಣ ನಷ್ಟ ಅನುಭವಿಸಿ ಸಾಲಗಾರನಾಗಬೇಕಾಗುತ್ತದೆ' ಎನ್ನುತ್ತಾರೆ ಅವರು.
ಈಗಾಗಲೇ ಹಲವರು ಸಾಲಗಾರರಾಗಿದ್ದಾರೆ. ಇದೀಗ ಸಹದೇವೇಗೌಡರನ್ನು ನೋಡಿ ಹಲವರು ತಂಬಾಕು ಕೃಷಿಯನ್ನು ಬಿಟ್ಟು ಬೇರೆ ಕೃಷಿಯತ್ತ ತೊಡಗಿಸಿಕೊಳ್ಳುತ್ತಿದ್ದು ಒಳ್ಳೆಯ ಬೆಳವಣಿಗೆಯಾಗಿದೆ.












Click it and Unblock the Notifications