ಕಬ್ಬಿನ ಬೆಳೆಯಲ್ಲಿ ಬಿಳಿ ನೊಣದ ಹಾವಳಿ ನಿಯಂತ್ರಣಕ್ಕೆ ಸಲಹೆಗಳು
ಬೆಂಗಳೂರು, ಆಗಸ್ಟ್ 25: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಬ್ಬು ಬೆಳೆಯುವ ರೈತರು ಬಿಳಿ ನೊಣದ ಹಾವಳಿಯನ್ನು ಎದುರಿಸುತ್ತಿದ್ದಾರೆ. ಕೃಷಿ ಇಲಾಖೆ ಬಿಳಿ ನೊಣದ ಹಾವಳಿ ನಿಯಂತ್ರಣಕ್ಕೆ ಸಲಹೆಗಳನ್ನು ನೀಡಿದೆ.
Recommended Video
ಕಬ್ಬು ಬೆಳೆಯುವ ಎಲ್ಲಾ ರೈತ ಬಾಂಧವರು ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುರಿಸಬೇಕು ಎಂದು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ್ ಜವಳಗಿ ಅವರು ತಿಳಿಸಿದ್ದಾರೆ.
ಈ ಬಿಳಿ ನೊಣವು ಆಸರೆ ಬೆಳೆಗಳಾದ ಕಬ್ಬು, ಜೋಳ, ಬಿದಿರು ಹಾಗೂ ಇನ್ನಿತರ ಹುಲ್ಲಿನ ಜಾತಿಗೆ ಸೇರಿರುವ ಬೆಳೆಗಳಿಗೆ ಹಾನಿ ಮಾಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮಣ್ಣಿನಲ್ಲಿದ್ದಂತಹ ತೇವಾಂಶ ಹೆಚ್ಚಾಗಿ ಪೊರೈಸಿದ ಸಾರಜನಕ ಬೆಳೆಗೆ ಸಮರ್ಪಕವಾಗಿ ದೊರೆಯದೆ ಇರುವುದರಿಂದ ಬಿಳಿನೊಣದ ಬಾದೆ ಏಕಾಏಕಿಯಾಗಿ ಹೆಚ್ಚಾಗಿದೆ.
ಮರಿ ಮತ್ತು ಪ್ರೌಢ ಕೀಟಗಳು ಸತತವಾಗಿ ಎಲೆಯ ಕೆಳಭಾಗದಿಂದ ರಸ ಹೀರುವುದರಿಂದ ಎಲೆಗಳು ಹಳದಿ ಹಾಗೂ ಗುಲಾಬಿ ಅಥವಾ ನೇರಳೆ/ಕೆಂಪು ಬಣ್ಣಕ್ಕೆ ತಿರುಗಿ ನಂತರ ಒಣಗಿ ಹೋಗುತ್ತವೆ. ಬಿಳಿನೊಣದ ಕೋಶದ ಕವಚ ಕಪ್ಪು ಬಣ್ಣದಿಂದ ಕೂಡಿರುವುದರಿಂದ ಎಲೆಗಳು ಬೀಳಿ ಮತ್ತು ಕಪ್ಪು ಚುಕ್ಕೆಗಳಾಗಿ ಕಾಣುತ್ತದೆ.

ಬಿಳಿ ನೊಣದ ಹಾವಳಿ
ಸಕ್ಕರೆ ಅಂಶ ಕೂಡಿದ ಪದಾರ್ಥದಿಂದಾಗಿ ಕಬ್ಬಿನ ಎಲೆಯ ಮೇಲ್ಭಾಗದಲ್ಲಿ ಕಪ್ಪು ಬೂಷ್ಟ್ ಬೆಳೆಯುತ್ತದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಹಾಗೂ ಶೇ.25-30 ರಷ್ಟು ಇಳುವರಿ ಕಡಿಮೆಯಾಗುತ್ತದೆ ಎಂದು ಕೃಷಿ ಇಲಾಖೆ ಹೇಳಿದೆ.

ನಿರ್ವಹಣೆ ಕ್ರಮಗಳು
ಬಿಳಿ ನೊಣದ ಬಾಧೆ ಕಂಡ ತಕ್ಷಣ 0.5 ಗ್ರಾಂ. ಥಯೋಮಿಥಾಕ್ಸಾಮ್ 25 ಡಬ್ಲ್ಯ್ಲೂ.ಜಿ ಅಥವಾ 2 ಮೀ.ಲೀ. ಡೈಮಿಥೋಯೆಟ್ 30 ಇ.ಸಿ. ಅಥವಾ 0.5 ಮಿ.ಲಿ. ಇಮಿಡಾಕ್ಲೋಪ್ರಿಡ 17.8 % ಎಸ್.ಎಲ್. ಅಥವಾ ಎಸಿಪೇಟ 75 % ಎಸ್.ಪಿ. 1.5 ಗ್ರಾಂ ಅಥವಾ ಎಸಿಟಾಮಾಪ್ರಿಡ 20 % ಎಸ್.ಪಿ. 0.5 ಗ್ರಾಂ ಪ್ರತಿ ಲೀಟರ ನೀರಿಗೆ + ಜೋತೆಗೆ ಶೇ. 2 ರ ಯೂರಿಯಾ (20 ಗ್ರಾಂ) ಪ್ರತಿ ಲೀಟರ್ ನೀರಿನಲ್ಲಿ ಬೆರಿಸಿ ಸಿಂಪರಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

15 ದಿನಗಳ ಅಂತರ ಕೊಡಿ
ಕೀಟದ ತೀವ್ರತೆಗೆ ಅನುಗುಣವಾಗಿ 15 ದಿನಗಳ ಅಂತರದಲ್ಲಿ 2ನೇ ಸಿಂಪರಣೆ ಮಾಡಬೇಕು. ಮೇಲ್ಗೊಬ್ಬರವಾಗಿ ನೀರು ಕೊಟ್ಟ ನಂತರ ಪ್ರತಿ ಎಕರೆಗೆ 20-25 ಕಿ.ಗ್ರಾಂ ಯೂರಿಯಾ + ಜೊತೆಗೆ ಹರಳು ರೂಪದ ಕೀಟನಾಶಕಗಳಾದ ಕ್ಲೋರ್ಯಾಂಟ್ರಿನಿಲಿಪ್ರೊಲ್ 0.4 ಜಿ.ಆರ್ @ 5 ಕಿ.ಗ್ರಾಂ ಪ್ರತಿ ಎಕರೆಗೆ ಕೊಡುವುದು ಸೂಕ್ತ. ಕಬ್ಬಿನ ಪರಿಸರದಲ್ಲಿ ಪರಭಕ್ಷಕ ಕೀಟ (ಗುಲಗಂಜಿ ಹುಳು) ಹಾಗೂ ಜೈವಿಕ ಶೀಲಿಂದ್ರ (ಅಕ್ರಿಮೊನಿಯಂ ಜೈಲ್ಯಾನಿಕಂ) ಕಂಡುಬಂದಲ್ಲಿ ಅವನ್ನು ಉತ್ತೇಜಿಸುವುದು. ಇಂತಹ ಸಮಯದಲ್ಲಿ ರಾಸಾಯನಿಕವನ್ನು ಬಳಸುವುದು ಸೂಕ್ತವಲ್ಲ ಎಂದು ತಿಳಿಸಲಾಗಿದೆ.

ರೈತ ಸಂಪರ್ಕ ಕೇಂದ್ರಕ್ಕೇ ಭೇಟಿ ಕೊಡಿ
ರೈತರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಡಾ. ಬಸವರಾಜ ಇವರ ಮೊಬೈಲ್ ಸಂಖ್ಯೆ 9945488197 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications