ರೈತರು ದಿಲ್ ಖುಷ್; ಜನರೂ ಫುಲ್ ಖುಷ್: ಕಣ್ಣೀರು ಹಾಕ್ಸಲ್ಲ ಕಣ್ರಿ ಈರುಳ್ಳಿ!?
ನವದೆಹಲಿ, ಜುಲೈ 20: ಭಾರತದಲ್ಲಿ ಮಾನ್ಸೂನ್ ಮಳೆಯ ಪ್ರಾರಂಭದಿಂದ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿಗಳು ಬರುತ್ತಿವೆ. ಹೀಗಾಗಿ ಅಖಿಲ ಭಾರತ ಚಿಲ್ಲರೇ ಮಾರುಕಟ್ಟೆಯಲ್ಲಿ ಟೊಮ್ಯಾಟೋ ದರದಲ್ಲಿ ಶೇ.29ರಷ್ಟು ಇಳಿಕೆಯಾಗಿದೆ.
ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿದೆ. ಇದರ ಮಧ್ಯೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಗಳು ಹೆಚ್ಚಾಗಿ ನಿಯಂತ್ರಣದಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.9ರಷ್ಟು ಕಡಿಮೆ ದರದಲ್ಲಿ ವಹಿವಾಟು ನಡೆಸುತ್ತಿವೆ.
ದೇಶದಲ್ಲಿ ಮಾನ್ಸೂನ್ ಮಳೆಯ ಪರಿಣಾಮದಿಂದ ತರಕಾರಿ ಬೆಳೆಯು ಉತ್ತಮವಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿದ್ದು ಬೆಲೆ ಕುಸಿತದಿಂದ ರೈತರನ್ನು ರಕ್ಷಿಸುವುದರಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯು ಪ್ರಮುಖ ಪಾತ್ರ ವಹಿಸುತ್ತದೆ. ಈರುಳ್ಳಿ ಮತ್ತು ಟೊಮ್ಯಾಟೋ ದರದ ಏರಿಳಿತವನ್ನು ನಿಯಂತ್ರಿಸುವುದಕ್ಕೆ ಸರ್ಕಾರದ ಪ್ರಯತ್ನ ಹೇಗಿದೆ?, ಇನ್ನೊಂದು ವರ್ಷ ರೈತರಿಗೆ ಈರುಳ್ಳಿಯಿಂದ ಲಾಸ್ ಇಲ್ಲ, ಜನರಿಗೆ ಅದು ಕಣ್ಣೀರು ಹಾಕಿಸುವುದಿಲ್ಲ. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಅಡುಗೆ ಮನೆ ರಾಜಾ-ರಾಣಿ, ಈ ಈರುಳ್ಳಿ, ಆ ಟೊಮ್ಯಾಟೋ!
ಅಡುಗೆ ಮನೆಯ ಪಾಲಿಗೆ ಈರುಳ್ಳಿ-ಟೊಮ್ಯಾಟೊ ಎನ್ನುವುದೇ ರಾಜಾ-ರಾಣಿ ಎನ್ನುವ ಹಾಗಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ಅಡುಗೆಗೂ ಈ ಎರಡು ತರಕಾರಿಯು ಅತ್ಯಗತ್ಯವಾಗಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಕಾಲಗಳಲ್ಲೂ ಈರುಳ್ಳಿ ಮತ್ತು ಟೊಮ್ಯಾಟೊ ಇಲ್ಲದೇ ಅಡುಗೆ ಇರುವುದಿಲ್ಲ. ಆದರೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದ ಸೇರಿದಂತೆ ಎಲ್ಲಾ ಕಾಲದಲ್ಲೂ ಈ ಎರಡು ತರಕಾರಿಗಳ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. 2022-23ನೇ ಸಾಲಿನಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆಯನ್ನು ಇರಿಸಿದೆ.

ಈರುಳ್ಳಿ ಸಂಗ್ರಹಕ್ಕೆ ಮುಂದಾದ ಸರ್ಕಾರ
ಭಾರತದಲ್ಲಿ 2021-22ನೇ ಸಾಲಿನಲ್ಲಿ ಒಟ್ಟು 2.0 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಲಾಗಿತ್ತು. ಕಳೆದ ಬಾರಿ ಬೇಸಿಗೆಯಲ್ಲಿ ಬೆಲೆ ಏರಿಕೆ ಸವಾಲನ್ನು ಎದುರಿಸಿದ ಹಿನ್ನೆಲೆ ಸರ್ಕಾರವು ಎಚ್ಚರಿಕೆ ನಿರ್ಧಾರವನ್ನು ತೆಗೆದುಕೊಂಡಿದೆ. 2022-23ನೇ ಸಾಲಿನಲ್ಲಿ 2.50 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಿದೆ. ಹಿಂದಿನ ವರ್ಷಕ್ಕಿಂತ 50 ಲಕ್ಷ ಟನ್ ಹೆಚ್ಚುವರಿ ಈರುಳ್ಳಿ ಸಂಗ್ರಹಿಸಿಡುವ ಮೂಲಕ ಬೆಲೆ ಏರಿಕೆಯ ಸವಾಲನ್ನು ಜಾಣತನದಿಂದ ನಿರ್ವಹಿಸುವುದಕ್ಕೆ ತೀರ್ಮಾನಿಸಿದೆ.

ಈರುಳ್ಳಿ ಬೆಲೆ ನಿರ್ವಹಣೆಗಾಗಿ ಸಂಗ್ರಹಣೆಯ ತಂತ್ರ ಅನುಸರಣೆ
ಪ್ರಸ್ತುತ ಉತ್ಪಾದನೆ ಹೆಚ್ಚಾಗಿರುವ ಸಂದರ್ಭದಲ್ಲಿ ಈರುಳ್ಳಿ ಬೆಲೆಯು ಇಳಿಕೆ ಆಗಿರಲಿದ್ದು, ಮಾರುಕಟ್ಟೆಯಲ್ಲಿ ಅದರ ಪ್ರಮಾಣ ಕಡಿಮೆಯಾಗುತ್ತಿದದ್ಂತೆ ಬೆಲೆ ಏರಿಕೆ ಪ್ರಾರಂಭವಾಗುತ್ತದೆ. ಆ ಹಂತದಲ್ಲಿ ಸಂಗ್ರಹಿಸಿದ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಈರುಳ್ಳಿಯ ಬೆಲೆಗಳು ತೀವ್ರವಾಗಿ ಏರಿಕೆಯಾದಾಗ ಹಲವು ನಿದರ್ಶನಗಳಿವೆ. ಇಂಥ ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕೆ ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಿಕೊಳ್ಳುತ್ತದೆ. ವ್ಯಾಪಾರಿಗಳಲ್ಲಿ ಸಂಗ್ರಹಣೆಗೆ ಮಿತಿ ಹೇರುವುದರ ಜೊತೆಗೆ ರಫ್ತಿನ ಮೇಲೆ ನಿರ್ಬಂಧವನ್ನು ಹಾಕಲಾಗುತ್ತದೆ.

ರಬಿ ಕಾಲದಲ್ಲಿ ಶೇ.65ರಷ್ಟು ಈರುಳ್ಳಿ ಉತ್ಪಾದನೆ
ಏಪ್ರಿಲ್-ಜೂನ್ ಅವಧಿಯಲ್ಲಿ ಕೊಯ್ಲು ಮಾಡಿದ ರಬಿ ಈರುಳ್ಳಿಯು ಭಾರತದ ಈರುಳ್ಳಿ ಉತ್ಪಾದನೆಯ ಶೇ.65ರಷ್ಟು ಹೊಂದಿರುತ್ತದೆ. ಇದು ನಂತರ ಅಕ್ಟೋಬರ್-ನವೆಂಬರ್ನಲ್ಲಿ ಖಾರಿಫ್ ಬೆಳೆ ಕೊಯ್ಲು ಮಾಡುವವರೆಗೆ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ. "ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ವರದಿ ಮಾಡಿದ 317.03 ಲಕ್ಷ ಟನ್ಗಳ ದಾಖಲೆಯ ಉತ್ಪಾದನೆ ಹೊರತಾಗಿಯೂ ಈ ವರ್ಷ ಈರುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವುದನ್ನು ತಡೆಯಲು ಸಂಗ್ರಹಣೆಯು ಸಹಕಾರಿ ಆಗಿರುತ್ತದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.











Click it and Unblock the Notifications