ಕೊಪ್ಪಳದ ಮಾವು ಬೆಳೆಯುವ ರೈತರಿಗೆ ಸಿಹಿಸುದ್ದಿ

ಕೊಪ್ಪಳ, ಜೂನ್ 23; ರತ್ನಗಿರಿ, ಆಪೊಸ್ ತಳಿಗಳ ಮಾದರಿಯಲ್ಲಿ ದೇಶದಾದ್ಯಂತ ' ಕೊಪ್ಪಳ ಕೇಸರ' ತಳಿ ಬ್ರಾಂಡ್ ಆಗಲು ತೋಟಗಾರಿಕಾ ಇಲಾಖೆ ಸಹಕಾರ ನೀಡಲಿದೆ. ಜಿಲ್ಲೆಯ ಮಾವು ಬೆಳೆಗಾರರಿಗೆ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ.

ಕೊಪ್ಪಳ ಜಿಲ್ಲಾ ತೋಟಗಾರಿಕೆ ಇಲಾಖೆ 'ಕೇಸರ' ಮಾವು ಮತ್ತು ವಿವಿಧ ತಳಿಯ ಮಾವಿನ ಮಾರುಕಟ್ಟೆ ಮತ್ತು ಮಾರಾಟ ವ್ಯವಸ್ಥೆ ಕುರಿತು ಕಲ್ತಾವರಗೇರಾ ಗ್ರಾಮದಲ್ಲಿ ಮಾವು ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.

ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು, ಕಲ್ತಾವರಗೇರಾ, ಹಾಲಳ್ಳಿ, ಕಾಮನೂರು, ದನಕನದೊಡ್ಡಿ, ಕೂಕನಪಳ್ಳಿ, ಇಂದರಗಿ ಹಾಗೂ ವಣಬಳ್ಳಾರಿ ಗ್ರಾಮದ ಸುಮಾರು 150 ಜನ ಮಾವು ಬೆಳೆಗಾರರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವರ್ಷದ ಮಾವಿನ ಫಸಲು ಈಗಾಗಲೇ ಮಾರುಕಟ್ಟೆಯಲ್ಲಿದೆ. ಕೊಪ್ಪಳದಲ್ಲಿ ನಡೆದ ಮಾವು ಮೇಳದಲ್ಲಿ ಎಲ್ಲಾ ತಳಿಯ ಹಣ್ಣುಗಳಲ್ಲಿ 'ಕೇಸರ' ತಳಿಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದ್ದರಿಂದ ಮೇಳವನ್ನು 3 ದಿನಗಳ ಕಾಲ ವಿಸ್ತರಣೆ ಮಾಡಿ ನೇರವಾಗಿ ರೈತ ಫಲಾನುಭವಿಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲಾಗಿತ್ತು.

ನೇರ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ

ನೇರ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, "ಕಳೆದ ಎರಡು-ಮೂರು ವರ್ಷಗಳಲ್ಲಿ ಮಾವು ಬೆಳೆಗಾರರ ಸಂಖ್ಯೆ ಮತ್ತು ಮಾವು ಬೆಳೆಯ ಪ್ರದೇಶ ವಿಸ್ತರಣೆ ಗಣನೀಯವಾಗಿ ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿ ಮಾವು ಬೆಳೆಗಾರರಿಗೆ ಹೊರ ರಾಜ್ಯ/ ದೇಶಕ್ಕೆ ರಫ್ತು ಮತ್ತು ಉತ್ತಮ ರೀತಿಯ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು" ಎಂದು ಜಿಲ್ಲೆಯ ಮಾವು ಬೆಳೆಗಾರರಿಗೆ ಭರವಸೆ ನೀಡಿದರು.

ಮಾವು ಬೇಸಾಯ ಹೇಗೆ ಮಾಡಬೇಕು?

ಮಾವು ಬೇಸಾಯ ಹೇಗೆ ಮಾಡಬೇಕು?

ಕೇಸರ್ ತಳಿಯ ಮಾವನ್ನು ಅಧಿಕ ಸಾಂದ್ರತೆ ಪದ್ದತಿಯಲ್ಲಿ ಅಳವಡಿಸಲು 12 ಅಡಿ ಸಾಲಿನಿಂದ ಸಾಲಿಗೆ ಮತ್ತು 3 ಅಡಿ ಗಿಡದಿಂದ ಗಿಡಕ್ಕೆ ಅಂದರೆ 12 ಅಡಿ x 3 ಅಡಿ = 1200 ಸಸಿಗಳನ್ನು ಮತ್ತು 12 ಅಡಿ x 6 ಅಡಿ = 600 ಸಸಿಗಳನ್ನು ಒಂದು ಎಕರೆ ನಾಟಿ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಲಾಗಿದೆ. ಮಾವು ಬೆಳೆಯಲ್ಲಿ ಅಧಿಕ ಸಾಂದ್ರತೆಯನ್ನು ಅಳವಡಿಸಲು ರೈತರಿಗೆ ಮಾಹಿತಿ ಕೊಡಲಾಗಿದೆ. ಪ್ರಾತ್ಯಕ್ಷಿಕೆಯನ್ನು ಗಿಣಗೇರಾ ತೋಟಗಾರಿಕೆ ಕ್ಷೇತ್ರದಲ್ಲಿ ಈಗಾಗಲೇ ಅಳವಡಿಸಿದ್ದು, ರೈತರು ಅದನ್ನು ವೀಕ್ಷಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಕಲ್ತಾವರಗೇರಾ ಗ್ರಾಮ ಒಂದರಲ್ಲೇ ಸುಮಾರು 500 ಎಕರೆ ಮಾವು ಈಗಾಗಲೇ ಬೆಳೆಯಲಾಗಿದೆ. ಕಳೆದ 2 ವರ್ಷದಲ್ಲಿ ಸುಮಾರು 200 ಎಕರೆಯಲ್ಲಿ ಕೇಸರ ತಳಿಯ ಪ್ರದೇಶ ವಿಸ್ತರಣೆಯನ್ನು ಇಲಾಖೆಯಿಂದ ಕೈಗೊಂಡಿದ್ದು, ಪ್ರಸ್ತುತ ವರ್ಷದಲ್ಲಿ ಹೆಚ್ಚಿನ ಬೇಡಿಕೆ ಬಂದಿರುವ ಕಾರಣ ಅಧಿಕ ಸಾಂದ್ರತೆ ತಾಂತ್ರಿಕತೆ ಅಳವಡಿಸಿಕೊಳ್ಳಲು ಸೂಚಿಸಲಾಯಿತು.

ಮಾವು ಸಂಸ್ಕಾರಣಾ ಘಟಕ ಸ್ಥಾಪನೆ

ಮಾವು ಸಂಸ್ಕಾರಣಾ ಘಟಕ ಸ್ಥಾಪನೆ

ರತ್ನಗಿರಿ, ಆಪೊಸ್ ಹೇಗೆ ತನ್ನ ಹೆಸರನ್ನು ದೇಶದಾದ್ಯಂತ ವ್ಯಾಪಿಸಿದೆಯೋ ಅದೇ ಮಾದರಿಯಲ್ಲಿ 'ಕೊಪ್ಪಳ ಕೇಸರ' ಎಂಬ ಬ್ರಾಂಡ್ ಆಗಬೇಕು ಎಂದು ಇಲಾಖೆ ರೈತರಿಗೆ ಸಹಕಾರ ನೀಡಲಿದೆ. ಮಾವಿನ ಹಣ್ಣಿನ ಮಾರುಕಟ್ಟೆಯು ಹಣ್ಣಿನ ತೂಕದ ಮೇಲೆ ನಿಂತಿದ್ದು ಎ, ಬಿ ಮತ್ತು ಸಿ ಗ್ರೇಡ್ ಎಂದು ವಿಂಗಡಿಸಿ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಮಾವು ಬೆಳೆ ಪ್ರದೇಶ ವಿಸ್ತೀರ್ಣ ಹೆಚ್ಚಾದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸುವ ಬಗ್ಗೆ ಮತ್ತು ಅದಕ್ಕೆ ಸರ್ಕಾರದ ಮತ್ತು ಇಲಾಖೆಯಿಂದ ಸಹಾಯಧನ ಒದಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತ ಶಂಕರ ರೆಡ್ಡಿ ಕಾಟ್ರಳ್ಳಿ ಮಾತನಾಡಿ ಅಧಿಕ ಸಾಂದ್ರತೆ ಮಾವು ಬೆಳೆಯುವ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಸಹಜ ಆರ್ಗಾನಿಕ್ ಕಂಪನಿಯೊಂದಿಗೆ ಮಾವು ಬೆಳೆ ಕೃಷಿ ಬಗ್ಗೆ ಚರ್ಚಿಸಿ 200 ಎಕರೆ ಅಧಿಕ ಸಾಂದ್ರತೆ ಮಾವು ಬೆಳೆಗೆ ಮಾರುಕಟ್ಟೆವರೆಗೂ ತಾಂತ್ರಿಕ ಸಹಾಯ ನೀಡುವ ಬಗ್ಗೆ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಮಾವು ಮೇಳ ಯಶಸ್ವಿಯಾಗಿದೆ

ಮಾವು ಮೇಳ ಯಶಸ್ವಿಯಾಗಿದೆ

2022ರ ಮೇ ತಿಂಗಳಿನಲ್ಲಿ ಕೊಪ್ಪಳ ತೋಟಗಾರಿಕೆ ಕಚೇರಿ ಆವರಣದಲ್ಲಿ ನಡೆದ ಮಾವು ಮೇಳ ಯಶಸ್ವಿಯಾಗಿದೆ. ಬೇರೆ ಜಿಲ್ಲೆಯವರು ಸಹ ಕೊಪ್ಪಳ 'ಕೇಸರ' ಕೊಪ್ಪಳ ಮಾವು ಎಂದು ಮಾತನಾಡುವ ಮಟ್ಟಿಗೆ ಮೇಳಕ್ಕೆ ಪ್ರಚಾರ ಸಿಕ್ಕಿದೆ. ಮಾವು ಬೆಳೆಗೆ ಪ್ರತ್ಯೇಕವಾಗಿ ರೈತ ಉತ್ಪಾದಕರ ಸಂಘ ಸ್ಥಾಪನೆ ಮಾಡಲು ಚರ್ಚಿಸಿ, ಗುಚ್ಚ ಮಾದರಿ ಮಾರುಕಟ್ಟೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು ಮಾತನಾಡಿ, ಮಾವು ಮೇಳದಿಂದ ಸಾಕಷ್ಟು ತಿಳುವಳಿಕೆ ಬಂದಿದ್ದು, ಮೊದ ಮೊದಲು ಪ್ರತಿ ಕೆಜಿಗೆ ರೂ. 20 ರಿಂದ 30 ರೂ. ಗಳಿಗೆ ಮಾರಾಟವಾಗುತ್ತಿದ್ದ ಹಣ್ಣು, ಮಾವು ಮೇಳದಿಂದ ಬೇಡಿಕೆ ಹೆಚ್ಚಾದ ಪರಿಣಾಮ ಪ್ರತಿ ಕೆಜಿಗೆ ರೂ. 80 ರಿಂದ 100 ರೂ. ಗಳಿಗೆ ಮಾರಾಟವಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಲಾಭ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+