ಹಾಸನದ ಯುವ ರೈತನ ಸಾಹಸ ಎಲ್ಲರಿಗೂ ಮಾದರಿ
ಹಾಸನ, ಫೆಬ್ರವರಿ 16 : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಯುವ ರೈತನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಅವರು ಆರ್ಥಿಕವಾಗಿ ಲಾಭವನ್ನು ಗಳಿಸುತ್ತಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಯಲೇಚಾಗಹಳ್ಳಿ ಗ್ರಾಮದ ರೈತ ರವಿ (21) ತಮ್ಮ 6 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಪಡೆದು ವಿವಿಧ ಬೆಳೆ ಬೆಳೆಯುತ್ತಿದ್ದಾರೆ.
ರವಿಯವರ ತಂದೆ ಮಲ್ಲಪ್ಪ ಮುಂಚೆ ತಮ್ಮ ಜಮೀನಿನಲ್ಲಿ ರಾಗಿಯನ್ನು ಬೆಳೆಯುತ್ತಿದ್ದರು. ಇದರಿಂದ ಅವರಿಗೆ ಒಟ್ಟು ಆದಾಯ 5 ಲಕ್ಷ ರೂ. ಬರುತ್ತಿತ್ತು. 2011-12 ನೇ ಸಾಲಿನ ನಂತರದ ದಿನಗಳಲ್ಲಿ ರವಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾದರು.
ಟೋಮ್ಯಾಟೋವನ್ನು 1/2 ಎಕರೆ, ಚೆಂಡು ಹೂ 2 ಎಕರೆ, ಬೀನ್ಸ್ 1/2 ಎಕರೆ, ಎಲೆಕೋಸು 2 ಎಕರೆ ಮತ್ತು 75 ತೆಂಗಿನ ಗಿಡಗಳನ್ನ ಬೆಳೆಯಲು ಮುಂದಾಗಿದ್ದರು. ಇಲಾಖೆ ಅಧಿಕಾರಿಗಳು ನೀಡಿದ ಸಲಹೆಯಂತೆ ಕೃಷಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಕೃಷಿ ಸಿಂಚಾಯಿ ಯೋಜನೆ
ರೈತ ರವಿ ತೋಟಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 2018-19ನೇ ಸಾಲಿನಲ್ಲಿ 90,000 ರೂ.ಗಳ ಸಹಾಯಧನ ಪಡೆದು 2.5 ಎಕರೆಯಲ್ಲಿ ಎಲೆಕೋಸು ಮತ್ತು ಟೋಮ್ಯಾಟೋ ಬೆಳೆ ಬೆಳೆದಿದ್ದಾರೆ.

ತೆಂಗಿನ ಗಿಡಗಳು
2018-19 ನೇ ಸಾಲಿನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 25,000 ರೂ. ಗಳ ಸಹಾಯಧನ ಪಡೆದು 75 ತೆಂಗಿನ ಗಿಡಗಳ ನಿರ್ವಹಣೆಗೆ ಗುಂಡಿ ತೆಗೆಯುವುದು, ನಾಟಿ ಮಾಡುವುದು, ನೀರು ಹಾಯಿಸುವುದು, ಜೊತೆಗೆ ಕಳೆ ನಿಯಂತ್ರಣಕ್ಕೆ ಬಳಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಹೈಬ್ರಿಡ್ ತರಕಾರಿ ಬೇಸಾಯಕ್ಕೆ ಸಹಾಯಧನವಾಗಿ 1,500 ರೂ. ಗಳನ್ನು ಪಡೆದು ಹೈಬ್ರಿಡ್ ಟೋಮ್ಯಾಟೋ ಮತ್ತು ಕ್ಯಾಪ್ಸಿಕಂ ಬೆಳೆಯ ನೆಲಹೊದಿಕೆಗೆ 6, 400 ರೂ. ಗಳ ಸಹಾಯಧನವನ್ನು ಪಡೆದಿದ್ದಾರೆ.

ಉತ್ತಮ ಇಳುವರಿ
ರಾಗಿ ಮತ್ತು ಟೋಮ್ಯಾಟೋ ಬೆಳೆ ಬೆಳೆಯುತ್ತಿದ್ದಾಗ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡಿರಲಿಲ್ಲ. ಆದಾಯ ಬಂದರು ಖರ್ಚು ತುಂಬಾ ಇರುತ್ತಿತ್ತು. ಆದ್ದರಿಂದ, ಆದಾಯ ಕಡಿಮೆ ಇತ್ತು. ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಪಡೆದು ಹನಿ ನೀರಾವರಿ ಅಳವಡಿಕೆಯಿಂದ ನೀರಿನ ಸದ್ಭಳಕೆ, ಭೂಮಿಯಲ್ಲಿ ತೇವಾಂಶ ಕಾಪಾಡಲು ಮತ್ತು ಕಳೆ ನಿಯಂತ್ರಿಸಲು ನೆಲೆಹೊದಿಕೆ ಬಳಕೆಯಿಂದ ಕೂಲಿ ಆಳುಗಳ ಖರ್ಚು ಕಡಿಮೆಯಾಗಿದೆ. ಹೈಬ್ರಿಡ್ ತರಕಾರಿ ಬೀಜಗಳ ಬಳಕೆಯಿಂದ ಉತ್ತಮ ಇಳುವರಿ ಮತ್ತು ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ.

6 ಎಕರೆಯಿಂದ 20 ಲಕ್ಷ ಆದಾಯ
"ಇಲಾಖೆಯ ಹೊಸ ತಾಂತ್ರಿಕತೆಗಳು ಹಾಗೂ ಮಾರ್ಗದರ್ಶನದಿಂದಲೇ ನಾನು ಹೆಚ್ಚಿನ ಆದಾಯಗಳಿಸಲು ಸಹಾಯವಾಯಿತು" ಎನ್ನುತ್ತಾರೆ ರವಿ. ಒಟ್ಟು 6 ಎಕರೆಯಿಂದ 20 ಲಕ್ಷ ರೂಗಳ ಆದಾಯವನ್ನು ಪಡೆದಿದ್ದಾರೆ.
"ಒಂದು ಬೆಳೆಯನ್ನು ನಂಬಿ ಕೃಷಿ ಮಾಡುವುದು ಸೂಕ್ತವಾದ ಬೇಸಾಯ ಪದ್ಧತಿಯಲ್ಲ, ನಾಲ್ಕು ಐದು ಬೆಳೆ ಮಾಡಿದರೆ ಒಂದಿಲ್ಲ ಒಂದಕ್ಕೆ ಉತ್ತಮ ಬೆಲೆ ಸಿಕ್ಕಿ ಆದಾಯ ಹೆಚ್ಚಾಗುತ್ತದೆ, ಜಮೀನನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ಬಹು ಬೆಳೆ ಮಾಡಿದರೆ ನಷ್ಟದ ಮಾತಿಲ್ಲ" ಎನ್ನುತ್ತಾರೆ ರವಿ.












Click it and Unblock the Notifications