ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಹಾನಿ ಆಗಿದ್ದು ಎಷ್ಟು?
ದಾವಣಗೆರೆ, ಸೆಪ್ಟೆಂಬರ್, 29: ಈ ಬಾರಿ ಸುರಿದ ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಮುಂಗಾರು ಹಂಗಾಮಿನಲ್ಲಿ ಸುರಿದ ಅಧಿಕ ಮಳೆಯಿಂದ ಮೆಕ್ಕೆಜೋಳ, ಹತ್ತಿ, ಭತ್ತ, ತೋಟಗಾರಿಕೆ ಬೆಳೆಗಳು ಸೇರಿದಂತೆ 16,228 ಹೆಕ್ಟೇರ್ಗಿಂತಲೂ ಅಧಿಕ ಬೆಳೆಗಳು ನಾಶವಾಗಿವೆ. ಪರಿಣಾಮ 19,515ರಷ್ಟು ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಮೆಕ್ಕೆಜೋಳ ಬೆಳೆದವರು ದಿಕ್ಕು ತೋಚದಂತೆ ತಲೆ ಮೇಲೆ ಕೈ ಹೊತ್ತು ಕುಳಿಕೊಳ್ಳುವಂತೆ ಆಗಿದೆ. ಮುಂಗಾರು ಹಾಗೂ ಹಿಂಗಾರು ಮಳೆಯಿಂದ ಜಗಳೂರು, ಹೊನ್ನಾಳಿ, ಹರಿಹರ, ಚನ್ನಗಿರಿ, ಮಾಯಕೊಂಡ ಸೇರಿದಂತೆ ಎಲ್ಲೆಡೆ ಬೆಳೆಗಳು ನೆಲಕಚ್ಚಿವೆ. ಎರಡು ಬಾರಿ ಮೆಕ್ಕೆಜೋಳ ಬೆಳೆ ಹಾಕಿದ್ದರೂ ಕೈಗೆ ಬಾರದೇ ನೀರುಪಾಲಾಗಿದ್ದು, ಇದರಿಂದ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಲು ಸರ್ವೇ ನಡೆಸಲಾಗುತ್ತಿದೆ. ಕೆಲವೆಡೆ ಸರಿಯಾಗಿ ಸರ್ವೇ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಅಧಿಕಾರಿಗಳು ಮಳೆ ನಿಂತ ಮೇಲೂ ಸಮರ್ಪಕವಾಗಿ ಸರ್ವೇ ನಡೆಸದಿದ್ದರೆ ಹೇಗೆ ಎಂದು ರೈತರು ಪ್ರಶ್ನೆ ಕೇಳುವ ಆಕ್ರೋಶ ಹೊರಹಾಕುತ್ತಿದ್ದಾರೆ. ಸಮೀಕ್ಷೆ ನಡೆಸಿದ್ದು, ಈಗಾಗಲೇ 17.87 ಕೋಟಿ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಅದೇ ರೀತಿ ಅಧಿಕ ಮಳೆಯಿಂದ ಅನೇಕ ಜನರು ಮನೆಗಳನ್ನು ಕಳೆದುಕೊಂಡಿದ್ದು, ಕೆಲವು ಮನೆಗಳು ದುರಸ್ಥಿಗೆ ಒಳಗಾಗಿವೆ. ಇಂತಹ ಮನೆಗಳಿಗೂ ಪರಿಹಾರವನ್ನು ನೀಡಬೇಕಿದೆ ಎಂದು ಜನರ ಆಗ್ರಹವಾಗಿದೆ.

ಜಲಾವೃತವಾಗಿದ್ದ ರುದ್ರಾಪುರ ಗ್ರಾಮ
ಚನ್ನಗಿರಿ ತಾಲೂಕಿನ ಸೂಳೆಕೆರೆ (ಶಾಂತಿಸಾಗರ) ಹಿನ್ನೀರಿನಿಂದ ರುದ್ರಾಪುರ ಗ್ರಾಮ ನೀರಿನಿಂದ ಆವೃತವಾಗಿದ್ದು, ಜನರ ಜೀವನ ಹೇಳತೀರದಾಗಿತ್ತು. ನದಿ ಪಾತ್ರದಲ್ಲಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಶಾಶ್ವತ ಪರಿಹಾರವಾಗಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದರೂ ಯಾವುದೇ ಪರಿಣಾಮಕಾರಿ ಆಗಿಲ್ಲ.

ಕೆರೆಗಳ ಹರಾಜಿನಿಂದ ಬಂದ ಹಣ?
ಈ ವರ್ಷ ಸುರಿದ ಅಬ್ಬರದ ಮಳೆಗೆ ಜಿಲ್ಲೆಯಲ್ಲಿನ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಕೆರೆಗಳಲ್ಲಿ ಮೀನುಗಳ ಪಾಲನೆ ಮಾಡುವುದರಿಂದ ಸರ್ಕಾರಕ್ಕೆ ಆದಾಯವು ಬರುತಿತ್ತು. ಸ್ಥಳೀಯ ಜನರಿಗೆ ಉದ್ಯೋಗವೂ ದೊರೆಯುತಿತ್ತು. ಪ್ರತಿ ವರ್ಷವೂ ಮೀನುಗಾರಿಕೆಗೆ ಕೆರೆಗಳನ್ನು ಹರಾಜು ಹಾಕಲಾಗುತ್ತದೆ. ಟೆಂಡರ್ ಕರೆದು ಹರಾಜು ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಅದರಂತೆಯೇ ಈ ಬಾರಿ ಕೆರೆಗಳ ಹರಾಜಿನಿಂದ 89 ಲಕ್ಷ ರೂಪಾಯಿ ಬಂದಿದೆ. ಇನ್ನೂ ಹಲವು ಕೆರೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಕೆ
ಭಾರಿ ಮಳೆ ಸುರಿದ ಪರಿಣಾಮ ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿದೆ. ಪ್ರವಾಹ ಬಂದ ಕಾರಣ ಬೇರೆ ಜಿಲ್ಲೆಗಳಿಂದ ಪ್ರವಾಸಿಗರು ಬಾರದ ಕಾರಣ ಈ ಬಾರಿ ಆದಾಯವೂ ಬಂದಿಲ್ಲ. ಕೆರೆ, ಕಟ್ಟೆಗಳು ಒಡೆದ ಪರಿಣಾಮ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದ್ದು, ಸರ್ಕಾರದಿಂದ ನೀಡುವ ಪರಿಹಾರ ಯಾವುದಕ್ಕೂ ಸಾಕಾಗುತ್ತಿಲ್ಲ. ಬೆಳೆದ ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಲಾಭವಿಲ್ಲದೇ ಅಡಿಕೆ ಬೆಳೆಗಾರರು ತತ್ತರ
ಮಳೆ ನಿಂತರೂ ಗೋಳು ತಪ್ಪುತ್ತಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ತೋಟದಲ್ಲಿ ನೀರು ನಿಂತ ಪರಿಣಾಮ ಇಳುವರಿಯೂ ಕಡಿಮೆ ಆಗಿದೆ. ಅಡಿಕೆ ಧಾರಣೆ ಹೆಚ್ಚಿದ್ದರೂ ಬೆಳೆ ಕಡಿಮೆಯಾಗಿರುವ ಕಾರಣ ಲಾಭ ಸಿಗದೇ ಬೆಳೆಗಾರರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ಮಳೆ ನಿಂತರೂ ರೈತರ ಸಂಕಷ್ಟಗಳು ತಪ್ಪುತ್ತಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನಿಂದ ಕಂಗೆಟ್ಟಿದ್ದ ತರಕಾರಿ ಬೆಳೆಗಾರರು, ಈ ಬಾರಿ ಮಳೆಯಿಂದ ಮತ್ತಷ್ಟು ನಷ್ಟವಾಗಿದ್ದು ತತ್ತರಿಸಿ ಹೋಗಿದ್ದಾರೆ. ಜೊತೆಗೆ ತರಕಾರಿಗಳ ಬೆಲೆ ದರ ಗಗನಕ್ಕೇರಿದ್ದು, ಜನರು ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.












Click it and Unblock the Notifications