ಅಡಿಕೆ ತೋಟದಲ್ಲಿ ಹರಳು ಉದುರುವುದು ತಡೆಯಲು ಸಲಹೆಗಳು
ದಾವಣಗೆರೆ, ಆಗಸ್ಟ್ 21; ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಅಡಿಕೆ ತೋಟಗಳಲ್ಲಿ ತೇವಾಂಶದಿಂದ ಹರಳು ಉದುರುತ್ತಿದೆ. ತೋಟಗಾರಿಕಾ ಇಲಾಖೆ ಇದನ್ನು ನಿಯಂತ್ರಿಸಲು ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಕಳೆದ ಎರಡು ತಿಂಗಳುಗಳಿಂದ ಉತ್ತಮ ಮಳೆಯಾಗಿದ್ದು, ಕೆಲವು ತೋಟಗಳಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ತೋಟಗಳಲ್ಲಿ ಶೀತದ ವಾತಾವರಣ ಹಾಗೂ ಹರಳು ಉದುರುವ ಬಾಧೆ ಕಂಡು ಬಂದಿದೆ. ಇದರ ನಿಯಂತ್ರಣಕ್ಕೆ ಈ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.
ನೀರು ಬಸಿಯದ ತೋಟಗಳಲ್ಲಿ ಬಸಿಗಾಲುವೆಗಳನ್ನು ಮಾಡುವುದು. ತೋಟದ ಸುತ್ತಲೂ ಇರುವ ನೀರು ಕಾಲುವೆಗಳನ್ನು ಸ್ವಚ್ಚಗೊಳಿಸುವುದು. ತೋಟದಲ್ಲಿ ಅಲ್ಲಿ ಇಲ್ಲಿ ನೀರು ನಿಂತಿದ್ದರೆ ಅದನ್ನು ಹೊರಗೆ ಹಾಕಲು ಕಾಲುವೆಗಳನ್ನು ನಿರ್ಮಿಸಬೇಕು.

ಸಣ್ಣ ಗಿಡಗಳಲ್ಲಿ ನೀರು ನಿಂತಿದ್ದರೆ ಅಂತಹ ತೋಟಗಳಿಗೆ ಲಘು ಪೋಷಕಾಂಶದ ಮಿಶ್ರಣ 5 ಗ್ರಾಂ ಪ್ರತಿ ಲೀಟರ್ ನೀರಿನ ಜೊತೆಗೆ, ಕಾರ್ಬನ್ ಡ್ರೈಜಿಯಮ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಅಡಿಕೆ ಎಲೆಗಳ ಬಗ್ಗೆ ಗಮನ ಕೊಡಿ; ಅಡಿಕೆ ಗಿಡದ ಎಲೆಗಳು ಹಳದಿ ಬಣಕ್ಕೆ ತಿರುಗಿದರೆ, ಕ್ಯಾಲ್ಸಿಯಂ ನೈಟ್ರೇಟ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ವಾತಾವರಣ ಬದಲಾವಣೆಯಿಂದಾಗಿ ಸಣ್ಣ ಗಿಡಗಳ ಎಲೆಗಳ ತಳಭಾಗದಲ್ಲಿ ರಸಹೀರುವ ಕೆಂಪು ತಿಗಣೆ ಹಾವಳಿಯಿಂದಾಗಿ ಕೆಳಭಾಗದ ಎಲೆಗಳು ಒಣಗುವ ಸಾಧ್ಯತೆ ಕಂಡು ಬಂದರೆ ಗಿಡಗಳಿಗೆ Propargite ಅಥವಾ Ethion ಕೀಟ ನಾಶಕವನ್ನು 2 ಮಿಲಿ ಮತ್ತು ನೀರಿನಲ್ಲಿ ಕರಗುವ 19:19:19 ಪೋಷಕಾಂಶವನ್ನು 4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

ಜಗಳೂರು ಮತ್ತು ಹೊನ್ನಾಳಿ ತಾಲ್ಲೂಕಿನ ಕೆಲವೆಡೆ ಈರುಳ್ಳಿ ಬೆಳೆಯು ಅತಿ ಹೆಚ್ಚು ಮಳೆಯ ಬಾಧೆಗೆ ಸಿಲುಕಿದೆ. ಈ ಭಾಗದ ರೈತರು ಈರುಳ್ಳಿ, ಬೆಳೆಗೆ ಲಘು ಪೋಷಕಾಂಶದ ಮಿಶ್ರಣ 4 ಗ್ರಾಂ ಮತ್ತು ಹೆಕ್ಸ ಕೊನೊಜೋಲ್ (Hexaconazol Cantaf ಒಂದು ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಒಂದು ವಾರದ ನಂತರ ನೀರಿನಲ್ಲಿ ಕರಗುವ ಪೋಟ್ಯಾಶ್ (SOP) ಅನ್ನು 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬಾಳೆ ಬೆಳೆಯಲ್ಲಿ ಅತಿ ಹೆಚ್ಚು ನೀರು ನಿಂತ ಸಂದರ್ಭದಲ್ಲಿ ಪನಾಮ ಸೊರಗು ರೋಗ ಬರುವ ಎಲ್ಲಾ ಸಂಭವವಿದೆ.
ಇದರ ನಿಯಂತ್ರಣಕ್ಕಾಗಿ ಸಾಫ್ (SAAF: Carbendazim 12% + Mancozeb 63% ) ಎರಡು ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಪ್ರತಿ ಗಿಡದ ಬುಡಕ್ಕೆ ಎರಡು ಲೀಟರಿನಂತೆ ಹಾಕಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications