ಭಾರಿ ಮಳೆಗೆ ಕೊಳೆತ ತರಕಾರಿ, ಸಂಕಷ್ಟಕ್ಕೆ ಸಿಲುಕಿದ ಕಡವಾಡ ಸಾವಯವ ಕೃಷಿಕರು

ಕಾರವಾರ, ಆಗಸ್ಟ್‌, 19: ಮಾರುಕಟ್ಟೆಯಲ್ಲಿ ಅದೆಷ್ಟೇ ಕಡಿಮೆ ಬೆಲೆಗೆ ತರಕಾರಿ ಮಾರಾಟವಾಗುತ್ತಿದ್ದರೂ ಕೂಡ ಜನರು ಮಾತ್ರ ಸಾವಯವ ಕೃಷಿ ತರಕಾರಿಗಳನ್ನೇ ಹುಡುಕಿ ಪಡೆಯುತ್ತಾರೆ. ಆದರೆ, ಕೆಲವು ದಿನಗಳಿಂದ ಸುರಿದ ಮಳೆಗೆ ಬೆಳೆಗಳು ಹಾಳಾಗಿ ಕಡವಾಡ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷವೂ ಸಾವಯವ ಪದ್ಧತಿ ಮೂಲಕ ತರಕಾರಿ ಬೆಳೆಯುತ್ತಿದ್ದ ಈ ಗ್ರಾಮದ ರೈತರು ಇದೀಗ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಈ ಬಾರಿ ಮಳೆರಾಯ ಹೊಡೆತ ನೀಡಿದ್ದು, ಸಾಲ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮೂಡಿಸಿದೆ. ಅಲ್ಲದೆ ಇವರು ಯಾವುದೇ ದಾರಿ ಇಲ್ಲದೇ ಇದ್ದ ಬೆಳೆಗಳನ್ನೇ ಮಾರುಕಟ್ಟೆಗೆ ತಂದು ಹೋಲ್‌ಸೇಲ್‌ ಆಗಿ ಮಾರಾಟ ಮಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗೆ ಕರಾವಳಿ ತಾಲೂಕುಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲಿಯೂ ಕಾರವಾರದಂತಹ ಪ್ರದೇಶಗಳಲ್ಲಿ ನೂರಾರು ಹೆಕ್ಟೇರ್ ಕೃಷಿ ಭೂಮಿಗಳನ್ನು ಪಾಳು ಬಿಡಲಾಗಿದೆ. ಆದರೆ ಕಡವಾಡ ವ್ಯಾಪ್ತಿಯಲ್ಲಿ ಕೆಲವು ರೈತರು ಪ್ರತಿ ವರ್ಷವೂ ಇರುವ ತುಂಡು ಭೂಮಿಯಲ್ಲಿಯೇ ಸಾವಯವ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಯಾವುದೇ ದಾರಿ ಇಲ್ಲದೆ ತರಕಾರಿಗಳನ್ನು ಬೆಳೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಸುರಿದ ಭಾರಿ ಮಳೆ ಇದೀಗ ಕಾರವಾರದ ರೈತರ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ. ಆರಂಭದಲ್ಲಿ ಉತ್ತಮ ಮಳೆ ಆಗಿದ್ದರಿಂದ ತರಕಾರಿ ಬೀಜ ಬಿತ್ತನೆ, ಗೊಬ್ಬರ ಹಾಕುವ ಕಾರ್ಯವನ್ನು ಮಾಡಲಾಗಿತ್ತು. ಇದರಿಂದಾಗಿ ತರಕಾರಿ ಗಿಡಗಳು ಸಮೃದ್ಧವಾಗಿ ಬೆಳೆದು ಇಳುವರಿ ಸಿಗುವ ನಿರೀಕ್ಷೆ ಇತ್ತು. ಆದರೆ ಗಿಡಗಳಲ್ಲಿ ಕಾಯಿ ಹಿಡಿಯುವ ವೇಳೆಯಲ್ಲಿ ಸತತವಾಗಿ ಮಳೆ ಆರ್ಭಟ ಶುರು ಮಾಡಿದ್ದು, ತರಕಾರಿಗಳು ಇದೀಗ ಕೊಳೆಯುತ್ತಲೇ ಇವೆ. ಗಿಡದಲ್ಲಿನ ತರಕಾರಿಗಳಿಗೆ ರೋಗ ತಗುಲಿದಂತಿದ್ದು, ಅವುಗಳು ಪ್ರಯೋಜನಕ್ಕೆ ಬಾರದಂತಾಗಿವೆ. ಅಲ್ಲದೇ ಬಳ್ಳಿಗಳು ಕೂಡ ಕೊಳೆಯುತ್ತಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮೂಡಿದಂತಾಗಿದೆ.

 ಭಾರೀ ಮಳೆಗೆ ಕೊಳೆಯುತ್ತಿರುವ ತರಕಾರಿಗಳು

ಭಾರೀ ಮಳೆಗೆ ಕೊಳೆಯುತ್ತಿರುವ ತರಕಾರಿಗಳು

ಇನ್ನು ಕಡವಾಡ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಕೃಷಿಕರಿದ್ದಾರೆ. ಆದರೆ ಬಹುತೇಕರು ಅಲ್ಪಸ್ವಲ್ಪ ಜಮೀನಿನಲ್ಲಿಯೇ ಕೊಟ್ಟಿಗೆ ಗೊಬ್ಬರ, ಸೊಪ್ಪು ಬಳಸಿ ಸೌತೆಕಾಯಿ, ಬೆಂಡೆಕಾಯಿ, ಬದನೆ, ಸೋರೆಕಾಯಿ, ಪಡವಲಕಾಯಿ, ಹಾಗಲಕಾಯಿ, ಹೀರೆಕಾಯಿ ಹೀಗೆ ಹತ್ತಾರು ಬೆಳೆಗಳನ್ನು ಬೆಳೆದಿದ್ದರು. ಆದರೆ ಮಳೆರಾಯನ ಅಬ್ಬರ ಹಾಗೂ ಆಗಾಗ ಬೀಳುತ್ತಿದ್ದ ಬಿಸಿಲಿನಿಂದಾಗಿ ಬಳ್ಳಿಗಳು ಕೊಳೆತಿವೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಇಳುವರಿ ಭಾರಿ ಪ್ರಮಾದಲ್ಲಿ ಕಡಿಮೆಯಾಗಿದೆ ಎಂದು ಕಡವಾಡದ ಮಂದ್ರಾಳಿ ರೈತ ಸಂತೋಷ್‌ ಗುನಗಿ ಅಸಮಾಧಾನ ಹೊರಹಾಕಿದರು.

 ಅಲ್ಪಸ್ವಲ್ಪ ಬೆಳೆದಿದ್ದ ತರಕಾರಿಗಳು ನಾಶ

ಅಲ್ಪಸ್ವಲ್ಪ ಬೆಳೆದಿದ್ದ ತರಕಾರಿಗಳು ನಾಶ

ಬಿಸಿಲು ಮಳೆಯಿಂದ ಇಳುವರಿ ಸಿಗದೆ ಕಂಗಾಲಾಗಿದ್ದ ರೈತರಿಗೆ ಇದೀಗ ಹಕ್ಕಿಗಳ ಕಾಟವು ಶುರುವಾಗಿದೆ. ಹಕ್ಕಿಗಳ ಕಾಟದಿಂದ ಗಿಡಗಳಲ್ಲಿ ಬಿಟ್ಟ ಕಾಯಿಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಹರ ಸಾಹಸವಾಗಿದೆ. ಬೆಳಗ್ಗೆಯಿಂದಲೇ ತರಕಾರಿ ಬಳ್ಳಿಗಳಿಗೆ ಹಕ್ಕಿಗಳು ಮುತ್ತಿಗೆ ಹಾಕಿ ಅಲ್ಪಸ್ವಲ್ಪ ಬೆಳೆದ ಬೆಳೆಯನ್ನು ಅರ್ಧಂಬರ್ಧ ತಿಂದು ಹೋಗುತ್ತಿವೆ. ಇದರಿಂದ ಆ ತರಕಾರಿಗಳು ಬಳಕೆಗೆ ಬಾರದ ಸ್ಥಿತಿ ಉಂಟಾಗಿದೆ. ನಿತ್ಯವೂ ಬೆಳಗ್ಗೆಯಿಂದ ದಿನವಿಡಿ ಹಕ್ಕಿಗಳ ಕಾಟ ತಪ್ಪಿಸಲು ಕಾವಲು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

 ಭಾರೀ ಮಳೆ ನೆಲಕಚ್ಚಿದ ತರಕಾರಿ ಬೆಳೆಗಳು

ಭಾರೀ ಮಳೆ ನೆಲಕಚ್ಚಿದ ತರಕಾರಿ ಬೆಳೆಗಳು

ಕಡವಾಡ ವ್ಯಾಪ್ತಿಯಲ್ಲಿ ಬೆಳೆದ ತರಕಾರಿ ಕಾರವಾರದ ಸ್ಥಳೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಪಕ್ಕದ ಗೋವಾ, ಮಹಾರಾಷ್ಟ್ರಗಳಿಗೂ ಪೂರೈಕೆಯಾಗುತ್ತಿದೆ. ಸಾವಯವ ಗೊಬ್ಬರದಿಂದ ಬೆಳೆದ ಈ ತರಕಾರಿಗಳು ರುಚಿಕಟ್ಟಾಗಿರುತ್ತದೆ. ಆದ್ದರಿಂದ ಈ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಜನರು ಕೇಳಿ ಪಡೆಯುತ್ತಾರೆ. ಈ ಬಾರಿ ಸುರಿದ ಮಳೆಗೆ ಇಳುವರಿ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಪೂರೈಕೆ ಕೂಡ ಕಡಿಮೆಯಾಗಿದ್ದು, ರೈತರು ಹೋಲ್‌ಸೇಲ್ ಆಗಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಪ ಲಾಭದಲ್ಲಿಯೇ ಇಲ್ಲಿನ ಅನ್ನದಾತರು ಖುಷಿ ಪಡುವಂತಾಗಿದೆ.

 ಮಳೆಹಾನಿ ಪರಿಹಾರ ನೀಡುವಂತೆ ಒತ್ತಾಯ

ಮಳೆಹಾನಿ ಪರಿಹಾರ ನೀಡುವಂತೆ ಒತ್ತಾಯ

ಸಾವಯವ ಕೃಷಿ ಮಾಡುವವರ ಸಂಖ್ಯೆ ಬಹಳ ಕಡಿಮೆ ಆಗಿದೆ.‌ ಆದರೆ ಈ ಗ್ರಾಮದಲ್ಲಿ ಹೆಚ್ಚು ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿದ್ದರೂ ಕೂಡ ಅವರಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ರೈತರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಬೆಳೆಗಳನ್ನು ಬೆಳೆದಿದ್ದರು. ಭಾರೀ ಮಳೆಯಿಂದಾಗಿ ಇಳುವರಿ ಬಾರದೆ ಸಾಲ ತುಂಬುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಕೂಡ ಯಾವ ಅಧಿಕಾರಿಗಳು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುತ್ತಿಲ್ಲ.‌ ಸರ್ಕಾರ ನಮಗಾದ ಹಾನಿಗಳನ್ನು ಪರಿಗಣನೆಗೆ ತೆಗೆದುಕೊಂಡು ಪರಿಹಾರ ನೀಡಬೇಕು ಎಂದು ಕಡವಾಡದ ರೈತ ಮಹಿಳೆ ರಜನಿ ಗುನಗಿ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಸಾವಯವ ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದವರಿಗೆ ಮಳೆರಾಯ ದೊಡ್ಡ ಆಘಾತ ನೀಡಿದ್ದಾನೆ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿಯೇ ಕೆಲವು ರೈತರು ಉತ್ಸಾಹದಿಂದ ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆಯಿಂದ ಆದ ಹಾನಿಗೆ ಸರ್ಕಾರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮದ ರೈತರ ಒತ್ತಾಯ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+