ರೈತರೇ ಎಚ್ಚರ; ಹಾಸನದಲ್ಲಿ ನಕಲಿ ರಸಗೊಬ್ಬರ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಹಾಸನ, ಅಕ್ಟೋಬರ್ 16: ನೂರಾರು ರೈತರಿಗೆ ನಕಲಿ ರಸಗೊಬ್ಬರ ಮಾರಾಟ ಮಾಡಿ ಮೋಸ ಮಾಡುತ್ತಿದ್ದ ತಂಡವೊಂದನ್ನು ಹಾಸನ ಪೊಲೀಸರು ಪತ್ತೆಹಚ್ಚಿ, ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಪ್ರತಿ ಕ್ಷೇತ್ರದಲ್ಲೂ ನಕಲಿ ವಸ್ತುಗಳ ಹಾವಳಿ ಹೆಚ್ಚಾಗುತ್ತಲಿದೆ. ಈ ನಕಲಿ ಹಾವಳಿಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವುದು ಮಾತ್ರ ರೈತರು. ಬೆಳೆ ಚೆನ್ನಾಗಿ ಬರಲಿ ಅಂತಾ ರಸಾಯನಿಕ ಗೊಬ್ಬರ ಖರೀದಿ ಮಾಡಿ, ಬೆಳೆಗೆ ಹಾಕುತ್ತಾರೆ. ಆದರೆ ಗೊಬ್ಬರ ತಯಾರಿಯಲ್ಲೂ ಇದೀಗ ಬಾರಿ ಅಕ್ರಮ ನಡೆದಿರುವುದು ಹಾಸನದಲ್ಲಿ ಪತ್ತೆಯಾಗಿದೆ.
ಬೆಳೆ ಚೆನ್ನಾಗಿ ಬರಬೇಕು ಅಂದರೆ ರಸಾಯನಿಕ ಗೊಬ್ಬರ ಹಾಕಲೇಬೇಕು. ಆದರೆ ರೈತರು ಖರೀದಿ ಮಾಡುವ ಗೊಬ್ಬರ ನಕಲಿಯೋ, ಅಸಲಿಯೋ ಎನ್ನುವುದು ಎಷ್ಟು ಜನ ರೈತರಿಗೆ ಗೊತ್ತಾಗುತ್ತದೆ ಹೇಳಿ. ಇಂತಹ ನಕಲಿ ರಸಗೊಬ್ಬರ ತಯಾರಿಸುವ ತಂಡವೊಂದನ್ನು ಹಾಸನ ಜಿಲ್ಲೆ ಕೊಣನೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ತಂಡ ಪತ್ತೆ ಹಚ್ಚಿದೆ.

ಕೊಣನೂರಿನಲ್ಲಿ ವಾಹನ ತಪಾಸಣೆ ವೇಳೆ ಅಪ್ಪೆ ಆಟೋ ಒಂದನ್ನು ಅಡ್ಡ ಹಾಕಿ ಪರಿಶೀಲನೆ ನಡೆಸುವ ವೇಳೆ ಈ ಆಘಾತಕಾರಿ ಪ್ರಕರಣ ಪತ್ತೆಯಾಗಿದೆ. ಅಪ್ಪೆ ಆಟೋದಲ್ಲಿ 50 ಕೆಜಿಯ ಸುಮಾರು 56 ಚೀಲ ನಕಲಿ ಗೊಬ್ಬರ ಪತ್ತೆಯಾಗಿದೆ. ಇದನ್ನು ವಶಪಡಿಸಿಕೊಂಡು ನಕಲಿ ಜಾಲದ ಬೆನ್ನು ಹತ್ತಿದ ಪೊಲೀಸರಿಗೆ ಕೂಡ ಅಚ್ಚರಿ ಎದುರಾಗಿತ್ತು. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಭೇರ್ಯದ ಗೋದಾಮು ಒಂದರಲ್ಲಿ ಈ ನಕಲಿ ಗೊಬ್ಬರ ತಯಾರಾಗುತ್ತಿದ್ದುದನ್ನು ಪತ್ತೆ ಹಚ್ಚಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಕಲಿ ರಸಗೊಬ್ಬರ ತಯಾರಿಕೆ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಖತರ್ನಾಕ್ ತಂಡ ದಿನಕ್ಕೆ ನೂರಾರು ಚೀಲ ನಕಲಿ ಗೊಬ್ಬರವನ್ನು ರಾಜ್ಯಾದ್ಯಂತ ಮಾರಾಟ ಮಾಡುತ್ತಿದೆ ಅನ್ನುವ ಅಸಲಿ ಸತ್ಯ ಗೊತ್ತಾಗಿದೆ. ಈ ಗೊಬ್ಬರ ತಯಾರಿಗೆ ಅಡುಗೆ ಉಪ್ಪು ಮತ್ತು ಬಣ್ಣ ಮಿಶ್ರಣಕ್ಕೆ ರೆಡ್ ಆಕ್ಸೈಡ್ ಅನ್ನು ಬಳಸಿ ಪೊಟ್ಯಾಶ್ ಗೊಬ್ಬರ ಎಂದು, ಇವರೇ ಚೀಲವನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.

ಇನ್ನು ಈ ರೀತಿಯ ದಂಧೆಗಳು ಹಾಸನ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇವೆ. ಕೇವಲ ಗೊಬ್ಬರ ಮಾತ್ರವಲ್ಲದೇ ಬಿತ್ತನೆ ಬೀಜ, ಔಷಧಿಗಳಲ್ಲೂ ದಂಧೆ ಎಗ್ಗಿಲ್ಲದಂತೆ ನಡೆಯುತ್ತಿದೆ. ಈ ದಂಧೆಯಲ್ಲಿ ಲೈಸೆನ್ಸ್ ಪಡೆದ ಕಂಪೆನಿಗಳೇ ಭಾಗಿಯಾಗುತ್ತಿರುವ ಅನುಮಾನ ಕೂಡ ವ್ಯಕ್ತವಾಗಿದೆ. ಇವರು ಮಾಡುವ ಅಕ್ರಮಗಳಿಗೆ ರೈತರು ಬಲಿಯಾಗುತ್ತಿರುದು ನಿಜಕ್ಕೂ ದುಃಖದ ಸಂಗತಿಯಾಗಿದೆ.
ಹಾಡಹಗಲೇ ಇಷ್ಟೆಲ್ಲಾ ದರೋಡೆ ನಡೆಯುತ್ತಿದ್ದರೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಅನ್ನುವುದು ಸಾರ್ವಜನಿಕ ಪ್ರಶ್ನೆಯಾಗಿದೆ. ಅಧಿಕಾರಿಗಳು ಪ್ರತಿ ಅಂಗಡಿಗೂ ತೆರಳಿ ಗುಣಮಟ್ಟ ಪರಿಶೀಲಿಸಿದರೆ ಎಲ್ಲವೂ ತಿಳಿಯುತ್ತದೆ ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಇಂತಹ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಕೊಣನೂರು ಪೊಲೀಸರ ಕ್ರಮಕ್ಕೆ ರೈತ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಾರೆಯಾಗಿ ಬೆಳೆ ಬಂದರೆ ಅಷ್ಟೋ ಇಷ್ಟೋ ಲಾಭವಾಗುತ್ತದೆ ಅನ್ನುವ ಆಸೆಯಿಂದ ಅಂಗಡಿಯವರು ಕೊಟ್ಟ ಗೊಬ್ಬರವನ್ನೇ ತಂದು ಕೃಷಿ ಚಟುವಟಿಕೆ ನಡೆಸುವ ಮುಗ್ಧ ರೈತರುಗಳು, ಇಂತಹ ದಂಧೆಗೆ ದೇಶದ ಬೆನ್ನೆಲುಬು, ಅನ್ನದಾತ ರೈತ ಬಲಿಯಾಗುತ್ತಿದ್ದಾನೆ. ಅಲ್ಲದೇ ಸದಾ ಸಂಕಷ್ಟದಲ್ಲೇ ಇರುವ ರೈತನನ್ನೂ ಬಿಡದೆ ಮೋಸ ಮಾಡುತ್ತಿರುವುದು ಕ್ಷಮಿಸಲಾರದ ಅಪರಾಧ ಅನ್ನೋದು ಅಷ್ಟೇ ಸತ್ಯವಾಗಿದೆ.












Click it and Unblock the Notifications