ಎಂಎಸ್ಪಿ ಅಂತ್ಯಗೊಂಡರೆ ರಾಜಕೀಯ ತ್ಯಜಿಸುವೆ: ರೈತರಿಗೆ ಮನೋಹರ್ ಖಟ್ಟರ್ ಭರವಸೆ
ಚಂಡೀಗಡ, ಡಿಸೆಂಬರ್ 31: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿರುವ ಬೆನ್ನಲ್ಲೇ ರಾಜ್ಯದ ರೈತರಿಗೆ ಭರವಸೆ ನೀಡಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮುಂದುವರಿಕೆಗೆ ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ. ಎಂಎಸ್ಪಿಗೆ ಸರ್ಕಾರ ಅಂತ್ಯಹಾಡಿದರೆ ರಾಜಕೀಯವನ್ನೇ ತ್ಯಜಿಸುವುದಾಗಿ ಅವರು ಪುನರುಚ್ಚರಿಸಿದ್ದಾರೆ.
'ಹರ್ಯಾಣದಲ್ಲಿ ಎಂಎಸ್ಪಿ ಮುಂದುವರಿಸುವಿಕೆಗೆ ನಾವು ಬದ್ಧರಾಗಿದ್ದೇವೆ. ಎಂಎಸ್ಪಿ ವ್ಯವಸ್ಥೆಯನ್ನು ಯಾರೇ ಆದರೂ ಅಂತ್ಯಗೊಳಿಸಲು ಪ್ರಯತ್ನಿಸಿದರೆ ಮನೋಹರ್ ಲಾಲ್ ರಾಜಕೀಯ ತ್ಯಜಿಸುತ್ತಾರೆ' ಎಂದು ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಪ್ರತಿಭಟನೆಗಳ ನಡುವೆ ನಡೆದ ಐದು ಪಾಲಿಕೆ ಚುನಾವಣೆಗಳ ಪೈಕಿ ಮೂರರಲ್ಲಿ ಬಿಜೆಪಿ ಸೋಲು ಕಂಡ ಬಳಿಕ ಖಟ್ಟರ್ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಖಟ್ಟರ್ ಅವರು ಕೃಷಿ ಕಾಯ್ದೆಗಳು ರೈತರಿಗೆ ಮಾರಕ ಎಂದು ಸಾಬೀತಾದರೆ ತಾವು ರಾಜಕೀಯವನ್ನು ಬಿಡುವುದಾಗಿ ಹೇಳಿದ್ದರು.

ಹರ್ಯಾಣದ ಉಪ ಮುಖ್ಯಮಂತ್ರಿ ಹಾಗೂ ರಾಜ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷ ಜನನಾಯಕ್ ಜನತಾ ಪಾರ್ಟಿಯ (ಜೆಜೆಪಿ) ಮುಖಂಡ ದುಷ್ಯಂತ್ ಚೌಟಾಲಾ ಅವರು ಬಿಜೆಪಿಗೆ ಬೆಂಬಲವಾಗಿ ನಿಂತಿದ್ದಾರೆ. 'ರೈತರಿಗೆ ಎಂಎಸ್ಪಿ ಖಂಡಿತವಾಗಿಯೂ ಸಿಗಲಿದೆ ಎಂದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಎಂಎಸ್ಪಿ ಸೇರಿದಂತೆ ಸೌಲಭ್ಯಗಳ ಕುರಿತು ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರಿಗೆ ಲಿಖಿತ ಪ್ರಸ್ತಾವಗಳನ್ನು ನೀಡಿದ್ದಾರೆ. ನಾನು ಅಧಿಕಾರದಲ್ಲಿ ಇರುವವರೆಗೂ ರೈತರಿಗೆ ಎಂಎಸ್ಪಿ ಉಳಿಸಲು ಕೆಲಸ ಮಾಡುತ್ತೇನೆ. ಈ ಮಾತನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗದೆ ಇದ್ದರೆ ಹುದ್ದೆಗೆ ರಾಜೀನಾಮೆ ನೀಡುತ್ತೇನೆ' ಎಂದಿದ್ದಾರೆ.












Click it and Unblock the Notifications