ಹನೂರು: ಬಿತ್ತಿದ್ದು ಬೀಟ್ರೋಟ್ ಬೀಜ, ಬಂದಿದ್ದು ಮೂಲಂಗಿ, ಅಂಗಡಿ ಮಾಲೀಕನ ಯಡವಟ್ಟಿನಿಂದ ರೈತನಿಗೆ ಎದುರಾದ ಸಂಕಷ್ಟ
ಚಾಮರಾಜನಗರ, ಸೆಪ್ಟೆಂಬರ್, 17: ಒಂದೆಡೆ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ, ಮತ್ತೊಂದೆಡೆ ಗೊಬ್ಬರ, ಬೀಜ ಅಂಗಡಿ ಮಾಲೀಕನ ಯಡವಟ್ಟಿನಿಂದ ಬಿತ್ತಿದ್ದ ಬೀಜವೂ ಕೈಕೊಟ್ಟು ರೈತರೊಬ್ಬರು ಪರದಾಡಿದ ಘಟನೆ ಹನೂರು ತಾಲೂಕಿನ ಬಿ.ಜಿ. ದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಬಿ.ಜಿ ದೊಡ್ಡಿ ಗ್ರಾಮದ ಷಡಕ್ಷರಿ ಎಂಬುವವರು ತಮ್ಮ ಜಮೀನಿನಲ್ಲಿ ಒಂದೂವರೆ ಹೆಕ್ಟೇರ್ ಹೊಲದಲ್ಲಿ ಬೀಟ್ರೋಟ್ ಬೀಜವನ್ನು ಬಿತ್ತನೆ ಮಾಡಿದ್ದರು. ಆದರೆ, ಈಗ ಮೂಲಂಗಿ ರೀತಿ ಬೀಟ್ರೋಟ್ ಬೆಳೆದಿದ್ದು, ಇದರಿಂದ ರೈತನಿಗೆ ದಿಕ್ಕು ತೋಚದೇ ಕಂಗಲಾಗಿದ್ದಾರೆ.

ಒಡೆಯರಪಾಳ್ಯ ಗ್ರಾಮದ ನಾಗಜ್ಯೋತಿ ಆಗ್ರೋ ಸೆಂಟರ್ನಲ್ಲಿ 9,800 ರೂಪಾಯಿ ಕೊಟ್ಟು ಸಾಕಾಟಾ ಎಂಬ ಕಂಪನಿಯ ಬೀಟ್ರೋಟ್ ಬೀಜ ಖರೀದಿಸಿ ಒಂದೂವರೆ ಹೆಕ್ಟೇರ್ನಲ್ಲಿ ಬಿತ್ತಿದ್ದರು. ಆದರೆ ಬೀಟ್ರೋಟ್ ಬೆಳೆಯದೆ ಬದಲಾಗಿ ಮೂಲಂಗಿ ಬಂದಿರುವುದರಿಂದ 5 ಲಕ್ಷ ಆದಾಯದ ನೀರಿಕ್ಷೆಯಲ್ಲಿದ್ದ ಷಡಕ್ಷರಿ ಎಂಬ ರೈತ ಕಂಗಾಲಾಗಿದ್ದಾರೆ.
ಈ ಬಗ್ಗೆ ರೈತ ಆಗ್ರೋ ಸೆಂಟರ್ ಮಾಲೀಕನಿಗೆ ತಿಳಿಸಿದರೆ ಸಮಸ್ಯೆಯನ್ನು ಬಗೆಹರಿಸುವ ಬದಲು ಏಕವಚನದಲ್ಲಿ ನಿಂದಿಸಿ ಕಳುಹಿಸಿದ್ದಾರೆ ಎಂದು ರೈತ ಆರೋಪಿಸುತ್ತಿದ್ದಾರೆ. ಇನ್ನು ಸಂಬಂಧಪಟ್ಟ ಸಾಕಾಟಾ ಕಂಪನಿ ಜಮೀನಿಗೆ ಬಂದು ಪರಿಶೀಲನೆ ಮಾಡಿ ತೆರಳಿದರೂ ಯಾವುದೇ ಪರಿಹಾರ ನೀಡುವ ಬಗ್ಗೆ ಮಾತು ಆಡುತ್ತಿಲ್ಲ. ಕಳೆದ ವರ್ಷ ಅತಿ ಹೆಚ್ಚು ಮಳೆಯಾಗಿದ್ದು, ಈ ವೇಳೆ ಬೆಳೆದಿದ್ದ ಬೆಳೆಯಲ್ಲ ಕೊಳೆತು ಹೋಗಿ ನಷ್ಟ ಉಂಟಾಗಿತ್ತು.
ಈ ಬಾರಿ ಇರುವಷ್ಟು ನೀರಿನಲ್ಲಿ ಬೆಳೆದಿದ್ದ ಬೀಟ್ರೋಟ್ ಮೂಲಂಗಿ ಆಗಿರುವುದು ನಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಸೂಕ್ತ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ರೈತ ಷಡಕ್ಷರಿ ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕಳಪೆ ಬೀಜದಿಂದ ರೈತನ ಬದುಕು ಮೂರಾಬಟ್ಟೆಯಾಗಿದ್ದು, ಈ ಸಂಬಂಧ ತೋಟಗಾರಿಕೆ ಇಲಾಖೆ ಸೂಕ್ತ ಕ್ರಮ ವಹಿಸಬೇಕಿದೆ.












Click it and Unblock the Notifications